ನಾಗರಿಕರ ಟ್ರೌಮಾ (ಅಪಘಾತ ತುರ್ತು ಚಿಕಿತ್ಸೆ) ಆರೈಕೆಯ ಹಕ್ಕು ಸಂವಿಧಾನದ ಜೀವಿಸುವ ಹಕ್ಕಿನ ಅವಿಭಾಜ್ಯ ಅಂಗ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತುರ್ತು ಸೇವೆಗಾಗಿ ‘112’ ಹೆಲ್ಪ್ಲೈನ್ ಸಂಖ್ಯೆಯನ್ನು ಮೂರು ತಿಂಗಳೊಳಗೆ ಜಾರಿಗೆ ತರುವಂತೆ ಮತ್ತು ‘ಗುಡ್ ಸಮರಿಟನ್’ (ನೆರವಿಗೆ ಬರುವವರು) ದೂರು ಪರಿಹಾರ ವ್ಯವಸ್ಥೆಯನ್ನು ಸ್ಥಾಪಿಸುವಂತೆ ಆದೇಶಿಸಿದೆ.
ನ್ಯಾಯಮೂರ್ತಿ ಜೆ.ಕೆ. ಮಹೇಶ್ವರಿ ಮತ್ತು ಎ.ಎಸ್. ಚಂದೂರ್ಕರ್ ಅವರಿದ್ದ ಪೀಠವು, ಮಾಸಿಕ ಸಭೆಗಳನ್ನು ನಡೆಸಿ ಅದರ ವರದಿಯನ್ನು ಆಯಾ ಪೋರ್ಟಲ್ಗಳಲ್ಲಿ ಅಪ್ಲೋಡ್ ಮಾಡುವ ಮೂಲಕ ನಿಯಮಿತವಾಗಿ ಅನುಸರಣಾ ವರದಿಗಳನ್ನು ಸಲ್ಲಿಸುವಂತೆ ರಾಜ್ಯಗಳಿಗೆ ನಿರ್ದೇಶನ ನೀಡಿದೆ.
ಭಾರತದ ಸಾರ್ವಜನಿಕ ಕಾನೂನು ವ್ಯವಸ್ಥೆಯಲ್ಲಿ ಟ್ರೌಮಾ ಕೇರ್ ಅನ್ನು ಹಕ್ಕಿನ ವಿಷಯವಾಗಿ ಗುರುತಿಸಬೇಕೆಂದು ಕೋರಿ ‘ಸೇವ್ ಲೈಫ್ ಫೌಂಡೇಶನ್’ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಮಂಗಳವಾರ ಈ ಆದೇಶ ನೀಡಿದೆ.
ವೈದ್ಯಕೀಯ ನೆರವಿನ ಪ್ರಾಮುಖ್ಯತೆ
ಅಪಘಾತ ಅಥವಾ ತುರ್ತು ಪರಿಸ್ಥಿತಿಯಲ್ಲಿ ಸಿಲುಕಿದಾಗ ವ್ಯಕ್ತಿಯು ಆಘಾತ ಮತ್ತು ಅಸಹಾಯಕತೆಗೆ ಒಳಗಾಗುತ್ತಾನೆ. ಅಂತಹ ಸಂದರ್ಭದಲ್ಲಿ ವೈದ್ಯಕೀಯ ಚಿಕಿತ್ಸೆ ಇಲ್ಲದೆ ಕಳೆಯುವ ಪ್ರತಿಯೊಂದು ನಿಮಿಷವೂ ಬದುಕುವ ಅವಕಾಶವನ್ನು ಕಡಿಮೆ ಮಾಡುತ್ತದೆ. “ತುರ್ತು ಸಂದರ್ಭದಲ್ಲಿ ಚುರುಕುತನವೇ ಔಷಧವಿದ್ದಂತೆ” ಎಂದು ನ್ಯಾಯಪೀಠ ಹೇಳಿದೆ.
ಸಮಾಜದಲ್ಲಿ ನೆರವಿಗೆ ಬರುವವರ (Good Samaritan) ಮನಸ್ಥಿತಿ ಇದ್ದರೂ, ಕಾನೂನು ಪ್ರಕ್ರಿಯೆಗಳ ಭಯ, ಪೊಲೀಸ್ ಠಾಣೆಗೆ ಸಾಕ್ಷಿಯಾಗಿ ಕರೆಯುತ್ತಾರೆ ಎಂಬ ಆತಂಕ ಅಥವಾ ಪರಿಸ್ಥಿತಿಯ ಮಾನಸಿಕ ಒತ್ತಡದಿಂದಾಗಿ ಜನರು ಸಹಾಯ ಮಾಡಲು ಹಿಂಜರಿಯುತ್ತಾರೆ ಎಂದು ಕೋರ್ಟ್ ಗಮನಿಸಿದೆ. ಈ ಅಡೆತಡೆಗಳನ್ನು ನಿವಾರಿಸಲು ವ್ಯವಸ್ಥಿತ ಮಧ್ಯಪ್ರವೇಶ, ಟ್ರೌಮಾ ಕೇರ್ನ ಸಮಾನ ಚೌಕಟ್ಟು, ಪ್ರಥಮ ಚಿಕಿತ್ಸೆಯ ಶಿಕ್ಷಣ ಮತ್ತು ಸೂಕ್ತ ಕಾನೂನುಗಳ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ. ಸಂವಿಧಾನದ 21ನೇ ವಿಧಿಯಡಿ ಜೀವಿಸುವ ಹಕ್ಕಿನ ಭಾಗವಾಗಿ ಟ್ರೌಮಾ ಕೇರ್ ಬರುತ್ತದೆ ಎಂದು ನ್ಯಾಯಪೀಠ ಪುನರುಚ್ಚರಿಸಿದೆ.
ಟ್ರೌಮಾ ಪ್ರಕರಣಗಳಿಗೆ ಸಂಬಂಧಿಸಿದಂತೆ ವೈದ್ಯಕೀಯ ರಕ್ಷಣಾ ನಿಯಮಾವಳಿಯನ್ನು ಹೊರಡಿಸಲು ಕೇಂದ್ರಕ್ಕೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ. ರಾಜ್ಯಗಳು ಇದನ್ನು ನಂತರದ ಮೂರು ತಿಂಗಳಲ್ಲಿ ಜಾರಿಗೆ ತರಬೇಕು.
ಆಂಬ್ಯುಲೆನ್ಸ್ ಮತ್ತು ಜಿಪಿಎಸ್: ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಂಬ್ಯುಲೆನ್ಸ್ಗಳು AIS-125 ಮಾನದಂಡಗಳನ್ನು ಪಾಲಿಸಬೇಕು. ಜಿಪಿಎಸ್ (GPS) ಮತ್ತು ವಾಹನ ಟ್ರ್ಯಾಕಿಂಗ್ ಸಾಧನಗಳನ್ನು ಅಳವಡಿಸಿ, ಅದನ್ನು ‘112’ ಹೆಲ್ಪ್ಲೈನ್ ಜೊತೆ ನೇರವಾಗಿ ಸಂಪರ್ಕಿಸಬೇಕು.
ಟ್ರೌಮಾ ರಿಜಿಸ್ಟ್ರಿಗಾಗಿ ಅಗತ್ಯವಿರುವ ಡೇಟಾ ಸ್ವರೂಪದ ಮಾರ್ಗಸೂಚಿಗಳನ್ನು ಎಂಟು ವಾರಗಳಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ನೀಡಬೇಕು. ಎಲ್ಲಾ ರಾಜ್ಯಗಳು ನಾಲ್ಕು ತಿಂಗಳೊಳಗೆ ರಾಜ್ಯ ಮಟ್ಟದ ಟ್ರೌಮಾ ರಿಜಿಸ್ಟ್ರಿಯನ್ನು ಸ್ಥಾಪಿಸಬೇಕು.
ಅರಿವು ಮೂಡಿಸುವ ಅಭಿಯಾನ: ‘112’ ಹೆಲ್ಪ್ಲೈನ್, ಮೋಟಾರು ವಾಹನ ಕಾಯ್ದೆಯಡಿ ಸಹಾಯ ಮಾಡುವವರಿಗೆ ಸಿಗುವ ರಕ್ಷಣೆ ಮತ್ತು ‘ಪಿಎಂ ರಾಹತ್’ (PM RAHAT) ನಂತಹ ನಗದು ರಹಿತ ಚಿಕಿತ್ಸಾ ಯೋಜನೆಗಳ ಬಗ್ಗೆ ಬಹುಭಾಷಾ ಮಾಧ್ಯಮ ಅಭಿಯಾನಗಳನ್ನು ನಡೆಸುವಂತೆ ನಿರ್ದೇಶಿಸಲಾಗಿದೆ.
ರಸ್ತೆ ಅಪಘಾತ ಸಂತ್ರಸ್ತರಿಗಾಗಿನ ನಗದು ರಹಿತ ಚಿಕಿತ್ಸಾ ಯೋಜನೆ (PM RAHAT) ಅನ್ನು ಇದುವರೆಗೆ ಜಾರಿಗೆ ತರದ ರಾಜ್ಯಗಳು, ಅದನ್ನು ಮೂರು ತಿಂಗಳೊಳಗೆ ಸಂಪೂರ್ಣವಾಗಿ ಕಾರ್ಯಗತಗೊಳಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.








