ಬೆಂಗಳೂರು: ನಗರದಲ್ಲಿ ನಾಗರಿಕರಿಗೆ ಸುರಕ್ಷತೆ ಮತ್ತು ನಡೆಯಲು ಅನುಕೂಲಕರವಾಗುವಂತೆ, ಪಾದಚಾರಿ ಮಾರ್ಗ ಒತ್ತುವರಿಯಾಗಿರುವುದನ್ನು ಗುರುತಿಸಿ ತೆರವು ಕಾರ್ಯ ನಡೆಸುವಂತೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಗರಿಕರಿಗೆ ಸುಸಜ್ಜಿತ ಹಾಗೂ ಅನುಕೂಲಕರವಾದ ಪಾದಾಚಾರಿ ಮಾರ್ಗ ನಿರ್ಮಿಸುವ ಸಲುವಾಗಿ, ಅವರು ಇಂದು ಮಹದೇವಪುರ ವಲಯದ ಸೀತಾರಾಂಪಾಳ್ಯ ಮೆಟ್ರೋ ನಿಲ್ದಾಣದಿಂದ ಬಿಇಎಂಎಲ್ ಲೇಔಟ್ ಮೇನ್ ರೋಡ್ ವರೆಗೆ ಪಾದಾಚಾರಿ ಮಾರ್ಗಗಳನ್ನು ಪರಿಶೀಲನೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಿದರು.
ಐ.ಟಿ.ಪಿ.ಎಲ್ ಮುಖ್ಯ ರಸ್ತೆಯಲ್ಲಿ
ರಸ್ತೆಗೆ ಮರ ಬಾಗಿಕೊಂಡಿರುವುದರಿಂದ ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಬಿಳುವ ಹಂತದಲ್ಲಿರುವುದರಿಂದ ಕೂಡಲೇ ಮರವನ್ನು ತೆರವುಗೊಳಿಸಲು ಸೂಚಿಸಿದರು. ಹಾಗೂ ಇದೇ ರೀತಿ ಬೇರೆ ಅಪಾಯಕಾರಿ/ ಒಣಗಿದ ಮರ ರೆಂಬೆ ಕೊಂಬೆ ತೆರವುಗೊಳಿಸಲು ಸೂಚಿಸಿದರು.
ಬ್ರಿಗೇಡ್ ಟೆಕ್ ಗಾರ್ಡನ್ ಸಂಸ್ಥೆಯವರು ಪಾದಚಾರಿಗೆ ಅಡ್ಡಲಾಗಿ ಕರ್ಬ್ ಗಳನ್ನು ಅಳವಡಿಸಿದ್ದು, ಇದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿದ್ದು, ಕೂಡಲೇ ತೆರವುಗೊಳಿಸಿ ಸಮತಟ್ಟಾಗಿ ಪಾದಚಾರಿ ನಿರ್ಮಿಸಲು ಸೂಚಿಸಿದರು.
ಐ.ಟಿ.ಪಿ.ಎಲ್. ಮುಖ್ಯ ರಸ್ತೆಯಲ್ಲಿರುವ ಶಿವಶಕ್ತಿ ಬಾರ್ ನವರು ಮಧ್ಯದ ಬಾಟಲ್ ಹಾಗೂ ಪ್ಲಾಸ್ಟಿಕ್ ಬಾಟಲ್ ಗಳನ್ನು ರಸ್ತೆಗೆ ಎಸೆದಿದ್ದು, ಅದನ್ನು ತೆರವುಗೊಳಿಸಲು ಹಾಗೂ ಬಾರ್ ನವರಿಗೆ ದಂಡ ವಿಧಿಸಲು ಸೂಚಿಸಿದರು.
ಗ್ರಾಫೈಟ್ ಇಂಡಿಯಾ ಮುಖ್ಯ ರಸ್ತೆಯಲ್ಲಿನ ರಾಯಲ್ ಬಿಲ್ಡಿಂಗ್ ಹೌಸ್ ಅಂಗಡಿಯವರು ತ್ಯಾಜ್ಯವನ್ನು ಪಾದಚಾರಿಗೆ ಹಾಕಿದ್ದು ಇದರಿಂದ ಪಾದಚಾರಿ ಸಂಚಾರಕ್ಕೆ ಅಡಚಣೆಯಾಗಿದ್ದು, ಅದನ್ನು ತೆರವುಗೊಳಿಸಲು ಹಾಗೂ ಅವರಿಗೆ ದಂಡ ವಿಧಿಸಲು ಸೂಚಿಸಿದರು. ಇದೇ ರೀತಿ ಪಾದಚಾರಿ ಮೇಲೆ ಹಾಗೂ ರಸ್ತೆ ಮೇಲೆ ತ್ಯಾಜ್ಯ ಹಾಕುವವರಿಗೆ ದಂಡ ವಿಧಿಸಲು ಸೂಚಿಸಿದರು.
ರಸ್ತೆಗೆ ಅಡ್ಡಲಾಗಿ ಕಾಂಕ್ರೀಟ್ ಮಿಡಿಯನ್ ಬ್ಯಾರಿಯರ್ ಗಳನ್ನು ಹಾಕಿದ್ದರಿಂದ ಸಂಚಾರಕ್ಕೆ ಅಡಚಣೆಯಾಗುತ್ತಿರುವುದ ಜೊತೆಗೆ ರಸ್ತೆಯಲ್ಲಿ
ವಾಹನಗಳನ್ನು ಅನಧಿಕೃತವಾಗಿ ಪಾರ್ಕಿಂಗ್ ಮಾಡಲಾಗುತ್ತಿದೆ. ಕೂಡಲೇ ಅವುಗಳನ್ನು ತೆರವುಗೊಳಿಸಲು ಸೂಚಿಸಿದರು.
ಐಟಿಪಿಎಲ್ ಮುಖ್ಯ ರಸ್ತೆಯಲ್ಲಿರುವ Akme Encore ಅಪಾರ್ಟ್ ಮೆಂಟ್ ನವರು ತ್ಯಾಜ್ಯ ನೀರನ್ನು ಚರಂಡಿಗೆ ಬಿಡುತ್ತಿದ್ದು ಈ ಬಗ್ಗೆ ಪರಿಶೀಲಿಸಲು ಹಾಗೂ ಈ ಅಪಾರ್ಟ್ ಮೆಂಟ್ ನವರು ಪಾದಚಾರಿ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸೂಚಿಸಿದರು.
ರಸ್ತೆ ಮತ್ತು ಪಾದಚಾರಿ ಮಾರ್ಗ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಸಮರ್ಪಿತ ತಂಡ ರಚನೆ:
ಬಿಬಿಎಂಪಿಯಲ್ಲಿನ ವಿವಿಧ ಇಲಾಖೆಗಳಾದ ರಸ್ತೆ ಮೂಲಭೂತ ಸೌಕರ್ಯ ವಿಭಾಗ, ಟ್ರಾಫಿಕ್ ಇಂಜಿನಿಯರಿಂಗ್ ಸೆಲ್, ಓ.ಎಫ್.ಸಿ ಮತ್ತು ವಿದ್ಯುತ್ ವಿಭಾಗಗಳು ಒಟ್ಟಾಗಿ “ಸಮಗ್ರ ಸಂಚಾರಿ ಇಲಾಖೆ” ಯಾಗಿ ಏಕೀಕರಿಸುವ ಸಾಧ್ಯತೆಯನ್ನು ಪರಿಶೀಲಿಸಿ, ಈ ವಿಭಾಗಕ್ಕೆ ಸ್ವಂತ ಸಾರಿಗೆ ಯೋಜಕರನ್ನು ಮತ್ತು ನಗರ ವಿನ್ಯಾಸಕಾರರನ್ನು ನೇಮಿಸಿಕೊಂಡು, ರಸ್ತೆ ಮತ್ತು ಪಾದಚಾರಿ ಪಥಗಳ ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿ ಸಮರ್ಪಿತ ತಂಡ ರಚಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಭಿವೃದ್ಧಿ ಕಾಮಗಾರಿಗಳ ನಿರಂತರ ಪರಿಶೀಲನೆ:
ವಲಯ ಆಯುಕ್ತರು ಪ್ರತಿನಿತ್ಯ ತಮ್ಮ ವಲಯಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಹಾಗೂ ಪಾದಾಚಾರಿ ಮಾರ್ಗಗಳನ್ನು ಪರಿಶೀಲಿಸುವಂತೆ ಮುಖ್ಯ ಆಯುಕ್ತರು ಸೂಚನೆ ನೀಡಿದರು.
ಪಾದಚಾರಿ ಮಾರ್ಗ ಅಗಲೀಕರಣ:
ವಸತಿ ಪ್ರದೇಶಗಳಲ್ಲಿ ಕನಿಷ್ಠ 1.8 ಮೀಟರ್ ಮತ್ತು ವಾಣಿಜ್ಯ ಪ್ರದೇಶಗಳಲ್ಲಿ 2.5 ಮೀಟರ್ ನಷ್ಟು ವಿಸ್ತೀರ್ಣದ ಪಾದಚಾರಿ ಮಾರ್ಗ ಇರುವಂತೆ ಅಗಲಗೊಳಿಸುವಂತೆ ಅಧಿಕಾರಿಗೆ ಸೂಚನೆ ನೀಡಲಾಯಿತು.
ಖಾಸಗಿ ಸಂಸ್ಥೆಗಳಿಂದ ಪಾದಚಾರಿ ಮಾರ್ಗಗಳ ಅಭಿವೃದ್ಧಿ ಮತ್ತು ನಿರ್ವಹಣೆ:
ಖಾಸಗಿ ಸಂಸ್ಥೆಗಳು, ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ಗಳು ಹಾಗೂ ಇತರ ಖಾಸಗಿ ಸಂಸ್ಥೆಗಳು ತಮ್ಮ ಆವರಣದ ಮುಂಭಾಗದಲ್ಲಿರುವ ಪಾದಾಚಾರಿ ಮಾರ್ಗಗಳನ್ನು ಸ್ವಯಂ ಪ್ರೇರಿತವಾಗಿ ಅಭಿವೃದ್ಧಿಪಡಿಸಿ, ನಿರ್ವಹಿಸಬಹುದಾದಂತೆ ಸಹಾಯ ಮಾಡಲು ಮತ್ತು ಸಕ್ರಿಯಗೊಳಿಸಲು ವಿಭಾಗೀಯ ಆದೇಶ ಹೊರಡಿಸಲು ಕ್ರಮವಹಿಸುವಂತೆ ಸೂಚಿಸಿದರು.
ಇದರ ಜೊತೆಗೆ, ರಸ್ತೆ ಬದಿ ಇರುವ ಎಲ್ಲಾ ಮನೆಗಳ ಮುಂಭಾಗದ ಗೇಟುಗಳು ಒಳಭಾಗಕ್ಕೆ ತೆರೆಯುವಂತಿರಬೇಕು. ಪಾದಚಾರಿ ಮಾರ್ಗದ ಮೇಲೆ ಹೊರಗೆ ತೆರೆಯುವಂತಹ ಗೇಟುಗಳನ್ನು ಅಳವಡಿಸಿದವರಿಗೆ ದಂಡ ವಿಧಿಸಬೇಕು. ಈ ನಿಯಮವನ್ನು ಕಡ್ಡಾಯವಾಗಿ ಜಾರಿಗೆ ತರುವ ಉದ್ದೇಶದಿಂದ ಎಲ್ಲಾ ಆವರಣದ ಗೇಟುಗಳ ಸಮಗ್ರ ಪರಿಶೀಲನೆ ನಡೆಸುವಂತೆ ಮುಖ್ಯ ಆಯುಕ್ತರು ಆದೇಶಿಸಿದರು.
3.5 ಕಿ.ಮೀ ಪರಿಶೀಲನೆ:
ಮಹದೇವಪುರ ವಲಯ ವ್ಯಾಪ್ತಿಯ ಸೀತಾರಾಮ್ ಪಾಳ್ಯ ಮೆಟ್ರೋ ನಿಲ್ದಾಣದಿಂದ ಬಿಇಎಂಎಲ್ ಲೇಔಟ್ ಮೇನ್ ರೋಡ್ ವರೆಗೆ ಪರಿಶೀಲನೆ ನಡೆಸಿದ ಮುಖ್ಯ ಆಯುಕ್ತರು, ಪಾದಚಾರಿ ಮಾರ್ಗ ಒತ್ತುವರಿ ತೆರವು ಗೊಳಿಸುವಂತೆ, ರಾಜ ಕಾಲುವೆಯ ಹತ್ತಿರದ ಕಟ್ಟಡಗಳ ಕುರಿತಾಗಿ ಸೂಕ್ತ ಕ್ರಮ ವಹಿಸುವಂತೆ ಹಾಗೂ ವಲಯ ಆಯುಕ್ತರುಗಳಿಗೆ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ನಿರಂತರ ಪರಿಶೀಲನೆ ನಡೆಸುವಂತೆ ಸೂಚಿಸಿದರು.
ಈ ವೇಳೆ ವಲಯ ಆಯುಕ್ತರಾದ ರಮೇಶ್, ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಂಗಳೂರು ಕಾಲ್ತುಳಿತ ದುರಂತ: ಸಿದ್ದರಾಮಯ್ಯಗೆ ನೈತಿಕತೆ ಇದ್ರೆ ರಾಜೀನಾಮೆ ಕೊಡಬೇಕು- ವಿ.ಸೋಮಣ್ಣ ಆಗ್ರಹ