ಬೆಂಗಳೂರು : ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಶೀಟರ್ ಭರ್ಜರಿ ಬರ್ತಡೇ ಪಾರ್ಟಿ ಘಟನೆಗೆ ಸಂಬಂಧಿಸಿದಂತೆ, ಇದೀಗ ಎಡಿಜಿಪಿ ಬಿ.ದಯಾನಂದ ಈ ಒಂದು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಆಂತರಿಕ ತನಿಖೆಗೆ ಆದೇಶ ನೀಡಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಶೀಟರ್ ಸೀನ, ಹುಟ್ಟು ಹಬ್ಬ ಆಚರಣೆ ಮಾಡಲಾಗಿತ್ತು. ಕೇಕ್ ಕತ್ತರಿಸಿ ಸೇಬಿನ ಹಾರ ಹಾಕೊಂಡು ಭರ್ಜರಿಯಾಗಿ ಬರ್ತಡೆ ಆಚರಿಸಿಕೊಂಡಿದ್ದ. ಈ ಒಂದು ವಿಡಿಯೋ ಹೊರಗಡೆ ಬಂದಿದ್ದೆ ತಡ, ಜೈಲಾಧಿಕಾರಿ ಹಾಗೂ ಸಿಬ್ಬಂದಿಗೆ ಬಿ.ದಯಾನಂದ ಕ್ರಾಸ್ ತೆಗೆದುಕೊಂಡಿದ್ದು ಕೂಡಲೇ ಆಂತರಿಕ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ಘಟನೆ ಹಿನ್ನೆಲೆ?
ಹೌದು ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಕಳ್ಳಾಟ ಇನ್ನೂ ನಿಂತಿಲ್ಲ. ವಿಚಾರಣಾಧೀನ ಕೈದಿಗಳ ಕಳ್ಳಾಟಕ್ಕೆ ಬ್ರೇಕ್ ಇಲ್ಲ ಎಂಬಂತಾಗಿದೆ. ನಟೋರಿಯಸ್ ರೌಡಿಶೀಟರ್ ಶೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನಾ ಜೈಲಲ್ಲೇ ಭರ್ಜರಿಯಾಗಿ ಬರ್ತ್ಡೇ ಸೆಲಬ್ರೇಟ್ ಮಾಡಿಕೊಂಡಿದ್ದಾನೆ. ಆ್ಯಪಲ್ ಹಾರ ಹಾಕಿಕೊಂಡು ಜೈಲಿನ ಬ್ಯಾರಕ್ನಲ್ಲಿ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ.
ಈತ ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದ ನಟೋರಿಯಸ್ ರೌಡಿಶೀಟರ್. ಮೊಬೈಲ್ನಲ್ಲಿ ಬರ್ತ್ಡೇ ಪಾರ್ಟಿಯ ವಿಡಿಯೋ, ಪೋಟೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಜೈಲಿನಿಂದಲೇ ವಿಡಿಯೋ, ಪೋಟೋ ಪೋಸ್ಟ್ ಆಗಿದೆ. ಗುಬ್ಬಚ್ಚಿ ಸೀನನ ಶಿಷ್ಯಂದಿರಿಂದ ಪೋಸ್ಟ್ ಆಗಿದೆ. ಜೈಲಧಿಕಾರಿಗಳು, ಸಿಬ್ಬಂದಿಯಿಂದ ಕೈದಿಗಳಿಗೆ ರಾಜಾತಿಥ್ಯ ಸಿಗುತ್ತಿದೆ ಎಂಬುದನ್ನು ವೀಡಿಯೋ ಬಹಿರಂಗಪಡಿಸಿದೆ.