ಬೆಂಗಳೂರು: ರಾಹುಲ್ ಗಾಂಧಿಯವರು ಹಿಂದೂಗಳ ಕ್ಷಮೆ ಕೇಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಆಗ್ರಹಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಮಾನ್ಯ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಈ ದೇಶವನ್ನು ಮುನ್ನಡೆಸುತ್ತಿದೆ. ಮತ್ತೊಂದು ಕಡೆ ಸತತ 3 ಬಾರಿ ಹೇಗಾದರೂ ಮಾಡಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸಿ ಕಾಂಗ್ರೆಸ್ ಪಕ್ಷ, ಅದರ ನಾಯಕ ರಾಹುಲ್ ಗಾಂಧಿಯವರು ಸಂಪೂರ್ಣವಾಗಿ ವಿಫಲವಾಗಿದ್ದಾರೆ. ವಿಪಕ್ಷ ನಾಯಕನ ಸ್ಥಾನ ಜವಾಬ್ದಾರಿ ಅವರಿಗೆ ಮೊದಲ ಬಾರಿಗೆ ಲಭಿಸಿದೆ. ನಿನ್ನೆ ಸಂಸತ್ತಿನಲ್ಲಿ ರಾಹುಲ್ ಗಾಂಧಿಯವರು ವಿಪಕ್ಷ ನಾಯಕನಾಗಿ ಮಾಡಿದ ಚೊಚ್ಚಲ ಭಾಷಣ ಸುಳ್ಳು, ನಿರಾಶೆ, ಆಧಾರರಹಿತ ಆರೋಪಗಳಿಂದ ಕೂಡಿತ್ತು ಎಂದು ಆಕ್ಷೇಪಿಸಿದರು.

ಸದನದಲ್ಲಿ ರಾಹುಲ್ ಗಾಂಧಿಯವರ ನಡವಳಿಕೆ ಸಂಸತ್ತಿನ ನಿಯಮಗಳಿಗೆ ಧಕ್ಕೆ ತರುವಂತಿತ್ತು ಎಂದು ಟೀಕಿಸಿದರು. ಅವರು ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಸುಳ್ಳನ್ನೇ ಹತ್ತಾರು ಬಾರಿ ಹೇಳಿಕೊಂಡು ದೇಶಾದ್ಯಂತ ಪ್ರವಾಸ ಮಾಡಿದ್ದರು. ಈಗ ವಿಪಕ್ಷ ನಾಯಕನಾಗಿ ಹಳೇ ಚಾಳಿ ಮುಂದುವರೆಸಿದ್ದಾರೆ; ಸಂಸದರೂ ಆದ ಅವರು ತಮ್ಮ ಸ್ಥಾನದ ಘನತೆ ಎತ್ತಿ ಹಿಡಿಯುವ ಬದಲಾಗಿ ಆ ಸ್ಥಾನಕ್ಕೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ ಎಂದು ವಿಶ್ಲೇಷಿಸಿದರು.

ನಿನ್ನೆ ಅವರು ತಮ್ಮ ಭಾಷಣದಲ್ಲಿ ಹಿಂದೂಗಳು ಹಿಂಸಾಚಾರ ಮತ್ತು ದ್ವೇಷದಲ್ಲಿ ಹಗಲಿರುಳು ನಿರತರು ಎಂಬ ಮಾತನ್ನು ಉಲ್ಲೇಖಿಸಿದ್ದಾರೆ. ಈ ಮಾತನ್ನು ಹೇಳುವ ಮೂಲಕ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಈ ದೇಶದ ಅಸಂಖ್ಯಾತ ಹಿಂದೂಗಳಿಗೆ ಅವಮಾನ ಮಾಡಿದ್ದಾರೆ. ಹಿಂದೂಗಳ ತೇಜೋವಧೆ ಮಾಡಿದ್ದಾರೆ. ಅಷ್ಟೇ ಸಾಲದೆಂದು ಅಗ್ನಿವೀರ್, ರೈತರ ಬಗ್ಗೆ, ಅಯೋಧ್ಯೆ ವಿಚಾರ ಮಾತ್ರವಲ್ಲದೆ, ಮೈಕ್ರೋಫೋನ್ ಬಗ್ಗೆ ಮಾತನಾಡಿದ್ದಾರೆ. ಇವೆಲ್ಲ ವಿಚಾರಗಳಲ್ಲಿ ಸುಳ್ಳು ಹೇಳಿಕೆ ನೀಡಿದ್ದಲ್ಲದೆ, ಹಿಂದೂಗಳ ತೇಜೋವಧೆ ಮಾಡಿದ್ದು ಅಕ್ಷಮ್ಯ ಅಪರಾಧ ಎಂದು ಖಂಡಿಸಿದರು.

ಲೋಕಸಭಾ ಚುನಾವಣೆ ಬರುವ ಮುನ್ನ ಅವರು ವಿದೇಶಗಳಲ್ಲಿ ಪ್ರವಾಸ ಮಾಡಿ ಭಾರತದಲ್ಲಿ ಪ್ರಜಾಪ್ರಭುತ್ವ ಇಲ್ಲ ಎಂದು ಆರೋಪಿಸಿದ್ದರು. ಇದೀಗ ಸದನದಲ್ಲಿ ಹಿಂದೂಗಳಿಗೆ ಅವಮಾನ ಮಾಡಿದ್ದು ಅಕ್ಷಮ್ಯ ಅಪರಾಧ. 99 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಪಕ್ಷವು ಕೇಂದ್ರದಲ್ಲಿ ಅಧಿಕಾರಕ್ಕೇನೂ ಬಂದಿಲ್ಲ. 100ರ ಗಡಿಯನ್ನು ದಾಟಲು ಆಗದ ಕಾಂಗ್ರೆಸ್ ಪಕ್ಷ, ಆ ಪಕ್ಷದ ನಾಯಕ ರಾಹುಲ್ ಗಾಂಧಿ, ವಿಪಕ್ಷ ನಾಯಕನಾಗಿ ಮನಸೋಇಚ್ಛೆ ಮಾತನಾಡಲು ಸದನವನ್ನು ಬಳಸಿದ್ದು ಖಂಡನೀಯ ಎಂದು ತಿಳಿಸಿದರು.

ಹಿಂದೂಗಳ ತೇಜೋವಧೆ ಮಾಡಲು..

ಹಿಂದೂಗಳ ತೇಜೋವಧೆ ಮಾಡಲು ಸದನವನ್ನು ಬಳಸಿದ ರಾಹುಲ್ ಗಾಂಧಿಯವರು, 1984ರ ಸಿಕ್ಖ್ ಹತ್ಯಾಕಾಂಡಕ್ಕೆ ಕಾರಣಕರ್ತರ್ಯಾರು? ಕಾಂಗ್ರೆಸ್ ಮುಖಂಡರಲ್ಲವೇ? ಎಂಬ ಪ್ರಶ್ನೆಗೆ ಉತ್ತರ ಹೇಳಬೇಕು. ತುರ್ತು ಪರಿಸ್ಥಿತಿಯನ್ನು ದೇಶದ ಮೇಲೆ ಹೇರಿ ದೇಶದ ಮುಗ್ಧ ಜನರ ಮೇಲೆ ದಬ್ಬಾಳಿಕೆ ಮಾಡಿದ್ದು ಇದೇ ಕಾಂಗ್ರೆಸ್ ಪಕ್ಷ ಎಂಬುದನ್ನೂ ಅವರು ಗಮನಿಸಿ ಉತ್ತರ ಕೊಡಲಿ ಎಂದು ಆಗ್ರಹಿಸಿದರು. ಇಂಥ ಕಾಂಗ್ರೆಸ್ ಪಕ್ಷವು ದೇಶದ ಉದ್ಧಾರ ಮಾಡುವುದಾಗಿ ಜನರ ಮುಂದೆ ಅನೇಕ ವಿಚಾರಗಳನ್ನು ಮುಂದಿಟ್ಟಿತ್ತು. ಈಗ ಹಿಂದೂಗಳ ತೇಜೋವಧೆ ಮಾಡಿದ್ದು, ಯಾರೂ ಇದನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

2010ರಲ್ಲಿ ಆಗಿನ ಗೃಹ ಸಚಿವ ಚಿದಂಬರಂ ಅವರು ಸಹ ಹಿಂದೂಗಳು ಭಯೋತ್ಪಾದಕರು ಎಂದು ಉದ್ಧಟತನದಿಂದ ಹೇಳಿದ್ದರು. 2013ರಲ್ಲಿ ಸುಶೀಲ್‍ಕುಮಾರ್ ಶಿಂಧೆ ಅವರೂ ಇದೇ ಧಾಟಿಯಲ್ಲಿ ಮಾತನಾಡಿದ್ದರು. ಸ್ವತಃ ರಾಹುಲ್ ಗಾಂಧಿಯವರು 2021ರಲ್ಲಿ ಹಿಂದುತ್ವ ಬೆಂಬಲಿಸುವವರನ್ನು ದೇಶದಿಂದ ಹೊಡೆದೋಡಿಸಿ ಎಂದು ತಿಳಿಸಿದ್ದರು. ನಿನ್ನೆಯ ಅವರ ಮಾತಿನ ಧಾಟಿಯಿಂದ ಇವರ ಉದ್ದೇಶವನ್ನು ರಾಹುಲ್ ಗಾಂಧಿಯವರೇ ಬಿಚ್ಚಿಟ್ಟಿದ್ದಾರೆ ಎಂದು ತಿಳಿಸಿದರು.

ಕರ್ನಾಟಕದಲ್ಲೂ ಇದೇ ಮಾದರಿಯಲ್ಲಿ ಅವಹೇಳನ..

ಕರ್ನಾಟಕದಲ್ಲೂ ಇದೇ ಮಾದರಿಯಲ್ಲಿ ಹಿಂದೂಗಳ ತೇಜೋವಧೆ ಮಾಡಿದ್ದರು. ಇಂದಿನ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ, ಸಚಿವ ಸತೀಶ್ ಜಾರಕಿಹೊಳಿ ಅವರು ಹಿಂದೂ ಪದವನ್ನು ಅವಹೇಳನಕಾರಿಯಾಗಿ ಬಳಸಿದ್ದರು. ಜಾರ್ಜ್ ಪೊನ್ನಯ್ಯ ಅವರು ಭಾರತದ ಭೂಮಿಯನ್ನು ಎಷ್ಟು ಅಶುದ್ಧವೆಂದು ಪರಿಗಣಿಸುತ್ತಾರೆಂದರೆ ಅದನ್ನು ಮುಟ್ಟುವುದನ್ನು ತಪ್ಪಿಸಲು ಶೂಗಳನ್ನು ಧರಿಸುವುದಾಗಿ ಉದ್ಧಟತನದ ಮಾತನಾಡಿದ್ದರು ಎಂದು ಟೀಕಿಸಿದರು.

ವಿಪಕ್ಷ ನಾಯಕರಾದ ಅವರು ಸುಳ್ಳು ಹೇಳಿ ಅಗ್ನಿವೀರ್‍ರಿಗೂ ಅಪಮಾನ ಮಾಡಿದ್ದಾರೆ. ಅಗ್ನಿವೀರರು ಹುತಾತ್ಮರಾದರೆ ಕೇಂದ್ರವು ಪರಿಹಾರ ಕೊಡುವುದಿಲ್ಲ ಎಂದಿದ್ದಾರೆ. ಅಗ್ನಿವೀರರು ಪ್ರಾಣ ಕಳಕೊಂಡಾಗ ಒಂದು ಕೋಟಿ ರೂ. ಪರಿಹಾರ ಕೊಡುವುದಾಗಿ ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿದ್ದು, ಸಾಕಷ್ಟು ಜನರಿಗೆ ತೊಂದರೆ ಆಗಿದೆ; ಜನರಿಗೆ ಪರಿಹಾರ ಕೊಟ್ಟಿಲ್ಲ ಎಂದು ಸುಳ್ಳು ಮಾಹಿತಿ ಕೊಟ್ಟಿದ್ದಾರೆ. ನಮ್ಮ ಉತ್ತರ ಪ್ರದೇಶ ಸರಕಾರ ನಿನ್ನೆ ಅಂಕಿಅಂಶಗಳನ್ನು ನೀಡಿದೆ. 4,215 ಅಂಗಡಿ ಮಾಲೀಕರಿಗೆ ₹1,253 ಕೋಟಿ ಮೊತ್ತ ನೀಡಿದ್ದಾಗಿ ತಿಳಿಸಿದೆ ಎಂದರು.

ಮೋದಿಜೀ ಅವರ ಸರಕಾರ ದೇಶದ ರೈತರನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಿದೆ ಎಂದು ಆರೋಪಿಸಿದ್ದು, ಇದು ಸರಿಯಲ್ಲ. ಪುರಾವೆ ಕೇಳಿದಾಗ ಅವರು ಬಾಯಿ ಮುಚ್ಚಿ ಕೂತಿದ್ದನ್ನು ಗಮನಿಸಿದ್ದೀರಿ ಎಂದು ನುಡಿದರು.

ಇದಿಷ್ಟೇ ಅಲ್ಲ; ಸ್ಪೀಕರ್ ಹುದ್ದೆಗೂ ಅವಮಾನ ಮಾಡಿದ್ದಾರೆ. ರಾಹುಲ್ ಗಾಂಧಿಯವರ ಬೇಜವಾಬ್ದಾರಿ ನಡವಳಿಕೆ ಅಕ್ಷಮ್ಯ ಅಪರಾಧ ಎಂದು ಆಕ್ಷೇಪಿಸಿದರು. ತಕ್ಷಣ ಅವರು ದೇಶದ ಜನರ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು. ರಾಹುಲ್ ಅವರು ಪ್ರಬುದ್ಧತೆಯಿಂದ ನಡೆದುಕೊಳ್ಳುವಂತೆ ಹಿರಿಯ ಕಾಂಗ್ರೆಸ್ಸಿಗರು ಮಾರ್ಗದರ್ಶನ ಮಾಡಬೇಕೆಂದು ಸಲಹೆ ನೀಡಿದರು.

ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ, ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಎಸ್.ಹರೀಶ್ ಅವರು ಭಾಗವಹಿಸಿದ್ದರು.

ಹಿಂದೂ ವಿರೋಧಿ ಹೇಳಿಕೆಗೆ ಕ್ಷಮೆಯಾಚಿಸಲು ನಿರಾಕರಿಸಿದ ರಾಹುಲ್ ಗಾಂಧಿ

ಮುಡಾದಲ್ಲಿ 4,000 ಕೋಟಿ ರೂ. ಗುಳುಂ ಮಾಡಿದ ʻಗೋಲ್ಮಾಲ್‌ CMʼ : ಆರ್.‌ ಅಶೋಕ್‌ ಗಂಭೀರ ಆರೋಪ

Share.
Exit mobile version