ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣದಲ್ಲಿ ತೀರ್ಪು ವಿಳಂಬ ಮಾಡುವುದಕ್ಕೆ ಶತಪ್ರಯತ್ನ ನಡೆದಿತ್ತು ಎಂದು ಎಸ್ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್ ತಿಳಿಸಿದರು.
ಅತ್ಯಾಚಾರ ಕೇಸಲ್ಲಿ ಅಪರಾಧಿ ಪ್ರಜ್ವಲ್ ರೇವಣ್ಣಗೆ ಶಿಕ್ಷೆ ಪ್ರಮಾಣ ಪ್ರಕಟವಾದ ಹಿನ್ನೆಲೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಎಪ್ರಿಲ್ ತಿಂಗಳಲ್ಲಿ ಹಾಸನದಲ್ಲಿ ಪೆನ್ಡ್ರೈವ್ ವಿತರಣೆ ಮಾಡಿದ್ರು. ತನಿಖೆಗೆ ಸರ್ಕಾರ ಎಸ್ಐಟಿ ರಚಿಸಿತು. ಎಸ್ಐಟಿ ತಂಡದಲ್ಲಿ ಸೀಮಾ ಮತ್ತು ಸುಮನಾ ಡಿ.ಪನ್ನೇಕರ್ ಇದ್ದರು. ನಾಲ್ಕು ಜನ ಸಂತ್ರಸ್ತೆಯರು ದೂರು ಕೊಟ್ಟಿದ್ದರು. ಒಂದು ಹೊಳೇನರಸೀಪುರ ಕೇಸ್. ಸಿಐಡಿಯಲ್ಲಿ 3 ಕೇಸ್ ದಾಖಲಾಗಿತ್ತು. ಒಟ್ಟು ಆರು ಕೇಸ್. ಈ ಪೈಕಿ 5 ಕೇಸ್ ತನಿಖೆ ಮುಗಿದಿದೆ. ಐದು ಕೇಸ್ನಲ್ಲಿ ಒಂದು ಪ್ರಕರಣ ಜನವರಿಯಿಂದ ಟ್ರಯಲ್ ಆರಂಭವಾಗಿತ್ತು.
ಮೂರು ತಿಂಗಳಲ್ಲಿ 26 ವಿಟ್ನೆಸ್ ಹಾಗೂ ದಾಖಲೆಗಳನ್ನ ಹಾಜರುಪಡಿಸಲಾಯ್ತು. ಆರೋಪಿ ಪ್ರಜ್ವಲ್ ರೇವಣ್ಣ ಮೇಲೆ ತೀರ್ಪು ಪ್ರಕಟವಾಗಿದೆ. ದೋಷಿ ಎಂದು ಕೋರ್ಟ್ ಹೇಳಿದೆ. ನಾವು ಚಾರ್ಜ್ಶೀಟ್ ಮಾಡಿದ ಸೆಕ್ಷನ್ನಲ್ಲಿ ಅವರಿಗೆ ನಿನ್ನೆ ದೋಷಿ ಎಂದು ಹೇಳಿದೆ. ಎರಡು ಸೆಕ್ಷನ್ಗಳಡಿ 10 ಲಕ್ಷ ದಂಡ ವಿಧಿಸಲಾಗಿದೆ. ಐಟಿ ಕಾಯ್ದೆ ವಿಡಿಯೋ ಮತ್ತು ಪೋಟೊ ತೆಗೆದಿರುವುದು ಕೂಡ ಸಾಬೀತು ಆಗಿದೆ. 11.25 ಲಕ್ಷ ಹಣವನ್ನು ಸಂತ್ರಸ್ತೆಗೆ ನೀಡುವಂತೆ ಕೋರ್ಟ್ ಸೂಚಿಸಿದೆ. ಒಂದು ವರ್ಷ ನಾಲ್ಕು ತಿಂಗಳಲ್ಲಿ ತೀರ್ಪು ಬಂದಿದೆ ಎಂದು ವಿವರಿಸಿದರು.
ಜಡ್ಜ್ಮೆಂಟ್ ವಿಳಂಬ ಮಾಡುವುದಕ್ಕೆ ಶತಪ್ರಯತ್ನ ಮಾಡಿದ್ರು. ಆದರು ಕೂಡ ಜಡ್ಜ್ಮೆಂಟ್ ತಡ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಸಂತ್ರಸ್ತೆ ಸಮಾಜದ ಕೆಳಸಮುದಾಯದ ಮಹಿಳೆಯಾಗಿದ್ದಾರೆ. ತೀರ್ಪು ವಿಳಂಬ ಮಾಡುವುದಕ್ಕೆ ಆರೋಪಿ ಪರ ವಕೀಲರು ಸೇರಿ ಹಲವರು ಪ್ರಯತ್ನಪಟ್ಟಿದ್ದರು ಎಂದು ಎದುರಾದ ಸವಾಲುಗಳ ಬಗ್ಗೆ ಸಿಂಗ್ ಮಾಹಿತಿ ಹಂಚಿಕೊಂಡರು. ಘಟನೆ ಆದ ನಾಲ್ಕು ವರ್ಷದ ಬಳಿಕ ನಮಗೆ ಕೇಸ್ ಕೊಡಲಾಗಿತ್ತು. ಸಾಕ್ಷಿಗಳನ್ನ ನೀಡಿ, ಸರಿಯಾಗಿ ಕೆಲಸ ಮಾಡಿದ್ದಕ್ಕೆ ಶಿಕ್ಷೆ ಕೊಡಿಸಲು ಸಾಧ್ಯವಾಯಿತು. ಅಪರಾಧಿಗೆ ಹೈಕೋರ್ಟ್, ಸುಪ್ರೀಂ ಕೋರ್ಟ್ನಲ್ಲಿ ಚಾಲೆಂಜ್ ಮಾಡುವ ಅವಕಾಶ ಇದೆ ಎಂದರು.
ಮುಂದಿನ ಎರಡು ವಾರದಲ್ಲಿ ಪೆನ್ಡ್ರೈವ್ ಹಂಚಿಕೆ ಮಾಡಿದ ಪ್ರಕರಣದ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗುತ್ತೆ. ಅದರಲ್ಲಿ ಯಾರೆಲ್ಲ ಆರೋಪಿಗಳಿದ್ದಾರೆ ಅನ್ನೋದು ನಿಮಗೆ ತಿಳಿಯುತ್ತೆ ಎಂದರು. ಪೊಲಿಟಕಲ್ ಒತ್ತಡ ಯಾವುದೂ ನಮಗೆ ಇರಲಿಲ್ಲ. ಸರ್ಕಾರದ ಕೆಲಸವನ್ನ ಪ್ರಾಮಾಣಿಕವಾಗಿ ಮಾಡಿದ್ದೇವೆ. ಸರ್ಕಾರದ ಅಧಿಕಾರಿಗಳಾಗಿ ನಮ್ಮ ಕೆಲಸ ಮಾಡಿದ್ದೇವೆ. ನಮ್ಮ ಚಾರ್ಜ್ಶೀಟ್, ಕೋರ್ಟ್ ಎತ್ತಿ ಹಿಡಿದಿದೆ. ಹಾಗಾಗಿ, ನಮಗೆ ಹೆಮ್ಮೆ ಆಗಿದೆ ಎಂದು ಸಂತಸ ವ್ಯಕ್ತಪಡಿಸಿದರು.