ಹಾಸನ : ರಾಜಕೀಯ ಬದ್ಧವೈರಿಗಾಳಾದ ಬಿಜೆಪಿ ಶಾಸಕ ಪ್ರೀತಂಗೌಡ ಹಾಗೂ ಜೆಡಿಎಸ್ ನಾಯಕಿ ಭವಾನಿ ರೇವಣ್ಣ ಒಂದೇ ಕಾಣಿಸಿಕೊಂಡಿದ್ದು, ಪ್ರೀತಂ ಕೋರಿಕೆ ಮೇರೆಗೆ ಭವಾನಿ ಕಾರ್ಯಕ್ರಮವನ್ನು ಟೇಪ್ ಕತ್ತರಿಸಿ ಉದ್ಘಾಟಿಸಿದ್ದಾರೆ.
ನಗರದ ಎಸ್.ಎಸ್.ಎಸ್.ಎಂ ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟನೆ ಉದ್ಘಾಟನೆಗೆ ಮಾಜಿ ಸಚಿವ ಎಚ್.ಡಿ.ರೇವಣ್ಣರ ಪತ್ನಿ ಭವಾನಿ ರೇವಣ್ಣ ಹಾಗೂ ಶಾಸಕ ಪ್ರೀತಂಗೌಡ ಅತಿಥಿಗಳಾಗಿ ಆಗಮಿಸಿದ್ದರು. ರಾಜಕೀಯವಾಗಿ ಬದ್ಧ ಎದುರಾಳಿಗಳಾಗಿರುವ ಇವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ತುಂಬಾ ಆಶ್ಚರ್ಯವನ್ನುಂಟು ಮಾಡಿತು.
ಹಾಸನ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಪ್ರೀತಂಗೌಡ ವಿರುದ್ಧ ಜೆಡಿಎಸ್ ನಾಯಕಿ ಭವಾನಿ ರೇವಣ್ಣ ಸ್ಪರ್ಧೆ ಮಾಡುತ್ತಾರೆ ಎಂಬ ಚರ್ಚೆಗಳು ಈಗಾಗಲೇ ರಾಜಕೀಯ ವಲಯದಲ್ಲಿ ಗರಿಗೆದರಿವೆ. ಈ ನಡುವೆ ಇಬ್ಬರೂ ಒಂದೇ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಕುತೂಹಲ ಮೂಡಿಸಿತ್ತು. ಆದರೆ ರಾಜಕೀಯವನ್ನು ಬದಿಗೊತ್ತಿದ ಇಬ್ಬರು ನಡೆದುಕೊಂಡ ರೀತಿ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಹಿಂದೆ ಭವಾನಿ ರೇವಣ್ಣ ಚುನಾವಣೆಯಲ್ಲಿ ನನ್ನ ವಿರುದ್ದ ಸ್ಪರ್ಧೆ ಮಾಡಿದರೆ ಮೂರನೇ ಸ್ಥಾನಕ್ಕೆ ಹೋಗುತ್ತಾರೆಂದು ಈ ಹಿಂದೆ ಪ್ರೀತಂಗೌಡ ಟೀಕಿಸಿದ್ದರು. ಅಲ್ಲದೆ ಹಾಸನದಲ್ಲಿ ಮುಂದಿನ ಚುನಾವಣೆಯಲ್ಲಿ ನನ್ನ ವಿರುದ್ಧ ಸ್ಪರ್ಧಿಸಲು ಜೆಡಿಎಸ್ನ ಹಿರಿಯ ನಾಯಕ ಎಚ್.ಡಿ.ರೇವಣ್ಣ ಮತ್ತು ಅವರ ಪತ್ನಿ ಭವಾನಿಗೆ ನಾನೇ ಆಹ್ವಾನ ನೀಡುತ್ತೇನೆ. ಅವರು ಸ್ಪರ್ಧಿಸಿದರೆ ನನಗೆ ಸಂತೋಷ. ನಾನು ಸಿದ್ಧನಿದ್ದೇನೆ ಎಂದು ಪ್ರೀತಂ ಸವಾಲ್ ಹಾಕಿದ್ದರು.
ಭವಾನಿ ರೇವಣ್ಣ ತಿರುಗೇಟು
ಇನ್ನು ಪ್ರೀತಂ ಗೌಡ ಸವಾಲಿಗೆ ತಿರುಗೇಟು ನೀಡಿದ್ದ ಭವಾನಿ, ವಿಧಾನಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ನಮ್ಮ ಪಕ್ಷದ ನಾಯಕರು ನಿರ್ಧರಿಸುತ್ತಾರೆ. ಬೇರೆಯವರಿಗೆ ಅದರ ಉಸಾಬರಿ ಬೇಡ. ಸ್ಥಳೀಯ ಶಾಸಕರು ಅವರ ಕೆಲಸ ಏನಿದೆ ಅದನ್ನು ಮಾಡಿಕೊಂಡು ಇರಲಿ. ಅವರು ನಮಗೇನು ಆಹ್ವಾನ ಮಾಡುವುದು ಬೇಡ ಎಂದು ತಿಳಿಸಿದ್ದರು.
ಕಾಂಗ್ರೆಸ್ ಮಾಡಿದ ತಪ್ಪಿಗೆ ಬಿಜೆಪಿಗೆ ಗೆಲುವು ಪ್ರೀತಂ ಪಂಥಹ್ವಾನಕ್ಕೆ ಪ್ರತಿಕ್ರಿಯೆ ನೀಡಿದ ರೇವಣ್ಣ, ನಮ್ಮ ಪಕ್ಷದ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಪಕ್ಷದವರು ತೀರ್ಮಾನ ಮಾಡುತ್ತೀವಿ, ಇವರನ್ನ ಹೇಳಿ ಕೇಳಿ ಮಾಡುವುದಿಲ್ಲ. ಕಳೆದ ಬಾರಿ ಕಾಂಗ್ರೆಸ್ ಮಾಡಿದ ತಪ್ಪಿಗೆ ಬಿಜೆಪಿ ಗೆಲುವು ಸಾಧಿಸಿತು. ಇಲ್ಲ ಅಂದಿದ್ರೆ ಈ ಗಿರಾಕಿ ಇರುತ್ತಿರಲಿಲ್ಲ ಎಂದು ತಿರುಗೇಟು ನೀಡಿದ್ದ ರೇವಣ್ಣ, ಮುಂದಿನ ದಿನಗಳಲ್ಲಿ ಭವಾನಿ ರೇವಣ್ಣ ಶಾಸಕರಾಗುತ್ತಾರೆ, ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. 5 ವರ್ಷ ಆಗಬಹುದು, 10 ವರ್ಷ ಆಗಬಹುದು ಎಂದಿದ್ದರು.