ಮಂಡ್ಯ : ವೈರಮುಡಿ ಬ್ರಹ್ಮೋತ್ಸವಕ್ಕೆ ಆಗಮಿಸುವ ಭಕ್ತಾದಿಗಳ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಪಾಲನೆ ಹಾಗೂ ಭದ್ರತೆಗಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದ್ದು 1,210 ಆರಕ್ಷಕ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ. ಕುಮಾರ ರವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಮೇಲುಕೋಟೆ ವೈರಾಮುಡಿ ಬ್ರಹ್ಮೋತ್ಸವದ ಸಂಬಂಧ ಕುರಿತು ಪತ್ರಿಕಾಗೋಷ್ಠಿ ನಡಸಿ ಮಾತನಾಡಿದ ಅವರು ಮೇಲುಕೋಟೆ ಚೆಲುವ ನಾರಾಯಣ ಸ್ವಾಮಿ ದೇವಾಲಯದಲ್ಲಿ 2026 ನೇ ಸಾಲಿನ ವೈರಮುಡಿ ಬ್ರಹ್ಮೋತ್ಸವ ಮಾರ್ಚ್ 23 ರಿಂದ ಪ್ರಾರಂಭವಾಗಿ ಏಪ್ರಿಲ್ 04 ವರಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು ಮಾರ್ಚ್ 28 ರಂದು ಶ್ರೀ ವೈರಮುಡಿ ಕಿರೀಟಧಾರಣೆ ಉತ್ಸವ ನೆಡೆಯಲಿದ್ದು ಶ್ರೀವೈರಮುಡಿ ಬ್ರಹೋತ್ಸವ ಸಂಬಂಧ ದೇವಾಲಯ ಮತ್ತು ಇತರೆ ಇಲಾಖೆಗಳಿಂದ ಶ್ರೀಕ್ಷೇತ್ರದಲ್ಲಿ ಕೈಗೊಳ್ಳಬೇಕಾಗಿರುವ ಪೂರ್ವಸಿದ್ಧತೆ ಮತ್ತು ಮುಂಜಾಗ್ರತಾ ಕ್ರಮಗಳ ಸಿದ್ದತಾ ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದ್ದು, ಅಗತ್ಯ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಶ್ರೀವೈರಮುಡಿ ಬ್ರಹೋತ್ಸವ ಕಾರ್ಯಕ್ರಮಕ್ಕೆ ಸುಮಾರು ಎರಡು ಲಕ್ಷದಷ್ಟು ಭಕ್ತಾದಿಗಳು ಮತ್ತು ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ಇರುತ್ತದೆ ಎಂದು ತಿಳಿಸಿದರು.
ಶ್ರೀ ವೈರಮುಡಿ ಕಿರೀಟಧಾರಣೆ ಉತ್ಸವಕ್ಕೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ಕೆ.ಎಸ್.ಆರ್.ಟಿ.ಸಿ. ವತಿಯಿಂದ ಮೇಲುಕೋಟೆಗೆ ಸಂಪರ್ಕ ಕಲ್ಪಿಸುವ ಎಲ್ಲಾ ಪ್ರಮುಖ ಪಟ್ಟಣ/ ನಗರ ಭಾಗಗಳಿಂದ ಸುಮಾರು 140 ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಮುಂಗಡ ಸೀಟು ಕಾಯ್ದಿರಿಸುವ ವ್ಯವಸ್ಥೆ ಹಾಗೂ ಮಂಡ್ಯ ನಗರದಿಂದ ನಿರಂತರ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಮೇಲುಕೋಟೆಯ ವಲಯ ಅರಣ್ಯಾಧಿಕಾರಿಗಳ ಕಛೇರಿಯ ಎದುರಿನ ಅವರಣದಲ್ಲಿ KSRTC ವಾಹನಗಳಿಗೆ ತಾತ್ಕಾಲಿವಾಗಿ ನಿಲ್ಯಾಣ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್ ಸ್ಥಳದಿಂದ ದೇವಾಲಯದವರೆಗೆ ಓಡಾಡಲು ಎಲ್ಲಾ ಹಿರಿಯ ನಾಗರೀಕರಿಗೆ ಹಾಗೂ ಸಾರ್ವಜನಿಕರಿಗೆ ಮತ್ತು ಗರ್ಭಿಣಿಯರಿಗೆ 5 ಉಚಿತ ಮಿನಿ ಬಸ್ಸುಗಳ ವ್ಯವಸ್ಥೆ ಮಾಡಲಾಗಿದದೆ ಸಾರ್ವಜನಿಕರು/ಭಕ್ತಾಧಿಗಳ ಓಡಾಟಕ್ಕೆ ತೊಂದರೆಯಾಗದಂತೆ ವಾಹನಗಳ ದಟ್ಟಣೆ ನಿರ್ವಹಿಸಲು ಅಗತ್ಯ ಬ್ಯಾರಿಕೇಡ್ ವ್ಯವಸ್ಥೆ ಸಹ ಮಾಡಲಾಗಿದೆ ಎಂದು ತಿಳಿಸಿದರು.
ಕ್ಷೇತ್ರದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಗ್ರಾಮದ ಹೊರ ಭಾಗದಲ್ಲಿ ಮೇಲುಕೋಟೆ ಗ್ರಾಮದ ಬಿಸಿಲು ಮಾರಮ್ಮ ದೇವಾಲಯಯದ ಬಳಿ ಮತ್ತು ಧನುಷೋಟಿಗೆ ಹೋಗುವ ರಸ್ತೆ ಬಳಿ ಗಣ್ಯರ ವಾಹನಗಳಿಗೆ, ಯದುಶೈಲ ಪ್ರೌಢ ಶಾಲೆ ಆವರಣದಲ್ಲಿ ದ್ವಿಚಕ್ರ ವಾಹನಗಳಿಗೆ, ಎಸ್. ಇ. ಟಿ. ಕಾಲೇಜು ಮೈದಾನದಲ್ಲಿ ನಾಲ್ಕು ಚಕ್ರದ ವಾಹನಗಳಿಗೆ ಹಾಗೂ ಜಕ್ಕನಹಳ್ಳಿ ರಸ್ತೆಯ ಕಣಿವೆ ಸರ್ಕಲ್ ವರಿಗೆ 11 ಸ್ಥಳಗಳಲ್ಲಿ ದ್ವಿಚಕ್ರ ವಾಹನಗಳಿಗೆ ವಾಹನ ಪ್ರವಾಸಿ ಮಂದಿರದ ರಸ್ತೆಯಲ್ಲಿ ಗೌರಿಕಟ್ಟೆಯವರೆಗೆ(14 ಸ್ಥಳಗಳಲ್ಲಿ) ನಾಲ್ಕು ಚಕ್ರದ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ತುರ್ತು ಅವಘಡಗಳ ನಿರ್ವಹಣೆಗಾಗಿ ಎರಡು ಅಗ್ನಿಶಾಮಕ ವಾಹನ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು ಕ್ಷೇತ್ರದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಪಾಲನೆ ಹಾಗೂ ಭದ್ರತಾ ವ್ಯವಸ್ಥೆಯ ಮೇಲ್ವಿಚಾರಣೆ ಮತ್ತು ನಿರ್ವಹಣೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚನೆಮಾಡಲಾಗಿದೆ ಎಂದು ತಿಳಿಸಿದರು.
ದಾಸೋಹ ವ್ಯವಸ್ಥೆ
ದೇವಾಲಯದ ದಾಸೋಹ ಭವನದಲ್ಲಿ ವೈರಮುಡಿ ಬ್ರಹೋತ್ಸವ ನಡೆಯುವ ದಿನ ಭಕ್ತಾದಿಗಳಿಗೆ ದಾಸೋಹ ವ್ಯವಸ್ಥೆ ಮಾಡಲಾಗಿದೆ ಮಾರ್ಚ್ 28 ರಂದು ಬೆಳಿಗೆ 08-00 ಗಂಟೆಯಿಂದ ಮಾರ್ಚ್ 29 ರಂದು ಬೆಳಿಗೆ 08-00 ಗಂಟೆಯವರೆಗೆ ನಿರಂತರವಾಗಿ ಭಕ್ತಾದಿಗಳಿಗೆ ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಶೌಚಾಲಯ ವ್ಯವಸ್ಥೆ
ಕ್ಷೇತ್ರಕ್ಕೆ ಬರುವ ಪುರಷ ಮತ್ತು ಮಹಿಳಾ ಭಕ್ತಾದಿಗಳಿಗೆ ಪ್ರತ್ಯೇಕವಾಗಿ ತಾತ್ಕಾಲಿಕ ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ. ಪ್ರಮುಖ ಸ್ಥಳಗಳಲ್ಲಿ ಸುಮಾರು 52 ತಾತ್ಕಾಲಿಕ ಶೌಚಾಲಯ/ಬಯೋಕೆಮಿಕಲ್ ಟಾಯ್ಲೆಟ್)ಗಳ ವ್ಯವಸ್ಥೆ ಮಾಡಲಾಗಿದೆ. ಇವುಗಳನ್ನು ಹೊರತುಪಡಿಸಿ ಈ ವರ್ಷದಲ್ಲಿ ಕ್ಷೇತ್ರದ ಬಸ್ ನಿಲ್ದಾಣದ ಬಳಿ ಪ್ರವಾಸಿ ಮಂದಿರದ ಬಳಿ ಮತ್ತು ಪಾರ್ಕಿಂಗ್ ಸ್ಥಳಗಳಲ್ಲಿ ಒಟ್ಟು 20 ಶಾಶ್ವತ ಶೌಚಾಲಯಗಳ ನಿರ್ಮಾಣಕ್ಕೆ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಸಿ.ಸಿ.ಕ್ಯಾಮರಾಗಳ ಕಣ್ಗಾವಲು
ಕ್ಷೇತ್ರದ ಭದ್ರತೆಯ ಹಾಗೂ ಸಾರ್ವಜನಿಕರ ಹಿತ ದೃಷ್ಟಿಯಿಂದ ದೇವಾಲಯ ಮತ್ತು ಗ್ರಾಮದ ಪ್ರಮುಖ ಭಾಗಗಳಾದ ಬಸ್ ನಿಲ್ದಾಣ,ವಾಹನ ಪಾರ್ಕಿಂಗ್,ದೊಡ್ಡ ಕಲ್ಯಾಣಿ ಬಳಿ,ದಾಸೋಹ ಭವನ, ಮುಖ್ಯ ರಸ್ತೆಗಳು,ಪೊಲೀಸ್ ಠಾಣೆ ಬಳಿ, ಚೆಲುವ ನಾರಾಯಣಸ್ವಾಮಿ ದೇವಾಲಯದ ಸುತ್ತಲು ಸುಮಾರು 40 ಶಾಶ್ವತ ಸಿ.ಸಿ.ಕ್ಯಾಮರಾಗಳನ್ನು ಅಳವಡಿಸಲಾಗಿದೆ. ವಾಹನ ಪಾರ್ಕಿಂಗ್ ಮತ್ತು ಇತರ ಕಡೆಗಳಲ್ಲಿ ಹೆಚ್ಚುವರಿ 40 ಸಿ.ಸಿ.ಕ್ಯಾಮರಾಗಳನ್ನು ಅಳವಡಿಸಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಶುದ್ಧ ಕುಡಿಯುವ ನೀರಿನ ವ್ಯವಸ್ಥೆ
ಮೇಲುಕೋಟೆಯ ಶ್ರೀ ವೈರಮುಡಿ ಬ್ರಹ್ಮೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ತೊಂದರೆ ಆಗದಂತೆ ಪ್ರಮುಖ ಸ್ಥಳಗಳಾದ ವಾಹನ ಪಾರ್ಕಿಂಗ್ ವ್ಯವಸ್ಥೆ ಸ್ಥಳಗಳಲ್ಲಿ, ಕಲ್ಯಾಣಿಗಳ ಬಳಿ,ಮಾರಿಗುಡಿಯ ಬಳಿ, ಪುತಿನ ಮೈದಾನ,ರಾಯಗೋಪುರ, ದಾಸೋಹ ಸ್ಥಳ, ಗೌರಿಕಟ್ಟೆ,ಹೊಸಹಳ್ಳಿಕಣಿವೆ ಬಳಿ ಹಾಗೂ ಹೆಚ್ಚು ಜನ ಸೇರುವ ಇತರ ಸ್ಥಳಗಳಲ್ಲಿ ಟ್ಯಾಂಕರ್ ಮೂಲಕ ಹಾಗೂ ಹೆಚ್ಚುವರಿ ತಾತ್ಕಾಲಿಕ ನಲ್ಲಿಗಳನ್ನು ಅಳವಡಿಸುವ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
24×7 ಅರೋಗ್ಯ ಸೇವೆ
ವೈರಮುಡಿ ಬ್ರಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಮತ್ತು ಸಾರ್ವಜನಿಕರು ಭಾಗವಹಿಸುವುದರಿಂದ ತುರ್ತು ವೈದ್ಯಕೀಯ ಸೇವೆ ಹಾಗೂ ಇತರೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ತುರ್ತು ಚಿಕಿತ್ಸೆಗಾಗಿ ಹಾಗೂ 24×7 (ಹಗಲು-ರಾತ್ರಿ) ಆರೋಗ್ಯ ಸೇವೆ ಒದಗಿಸಲು ಅನುಕೂಲವಾಗುವಂತೆ ಹೆಚ್ಚುವರಿ ಆರೋಗ್ಯ ಸಿಬ್ಬಂದಿಗಳು, ನುರಿತ ವೈದ್ಯರು ಆಂಬ್ಯುಲೆನ್ಸ್ ವಾಹನದ ವ್ಯವಸ್ಥೆ ಮಾಡಲಾಗಿದೆ. ತಾತ್ಕಾಲಿಕ ಚಿಕಿತ್ಸಾ ಕೇಂದ್ರಗಳ ವ್ಯವಸ್ಥೆ ಮಾಡಲಾಗಿದೆ. ವೈರಮುಡಿ ಬ್ರಹೋತ್ಸವ ಕಾಲದಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ದಾನಿಗಳು ಅನ್ನದಾನ, ಪ್ರಸಾದ ವಿನಿಯೋಗ ಮಾಡುವುದರಿಂದ ಮುನ್ನೆಚ್ಚರಿಕೆಯಾಗಿ ತಯಾರಿಸಲಾದ ಪ್ರಸಾದದ ಗುಣಮಟ್ಟದ ಬಗ್ಗೆ ಪರಿಶೀಲಿಸಿ ಖಾತ್ರಿ ಪಡಿಸಿಕೊಳ್ಳಲು ನುರಿತ ಆಹಾರ ಪರೀಕ್ಷಕರನ್ನು ಸಹ ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಕ್ಷೇತ್ರದಲ್ಲಿನ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ರಸ್ತೆಗಳು, ಚರಂಡಿಗಳು, ವಾಹನ ಪಾರ್ಕಿಂಗ್ ಸ್ಥಳ, ಕಲ್ಯಾಣಿಗಳು ಹಾಗೂ ದೇವಾಲಯಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಲು ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಕ್ಷೇತ್ರದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿಲಾಗಿದೆ ಎಂದು ಹೇಳಿದರು
ಮಾರ್ಚ್ 28 ರಂದು ಬೆಳಿಗೆ, 7-00 ಗಂಟೆಗೆ ಜಿಲ್ಲಾ ಖಜಾನೆಯಿಂದ ವೈರಮುಡಿ ಪೆಟ್ಟಿಗೆಯನ್ನು ಜಿಲ್ಲಾ ಖಜಾನೆಯಿಂದ ಶ್ರೀಲಕ್ಷ್ಮಿಜನಾರ್ಧನಸ್ವಾಮಿ ದೇವಾಲಯ, ಇಂಡವಾಳು, ಕೆ.ಶೆಟ್ಟಿಹಳ್ಳಿ, ಬಾಬುರಾಯನಕೊಪ್ಪಲು, ಶ್ರೀರಂಗಪಟ್ಟಣ ಬನ್ನಿಮಂಟಪ, ಕಿರಂಗೂರು, ದರಸಗುಪ್ಪೆ, ಪಾಂಡವಪುರ ಹರಳಹಳ್ಳಿ, ಬನಘಟ್ಟ ಕೆ.ಹೊಸೂರು ಗೇಟ್, ಟಿ.ಎಸ್. ಛತ್ರ. ಬೆಳ್ಳಾಳೆ, ಅಮ್ಮತಿ, ನ್ಯಾಮನಹಳ್ಳಿ, ಜಕ್ಕನಹಳ್ಳಿ, ಕದಲಗೆರೆ ಮಾರ್ಗವಾಗಿ ಪೊಲೀಸ್ ಬಂದೋಬಸ್ತಿನಲ್ಲಿ ಮೇಲುಕೋಟೆಗೆ ತೆಗೆದುಕೊಂಡು ಹೋಗಲಾಗುವುದು ಮುಡಿ ಪೆಟ್ಟಿಗೆಗಳನ್ನು ಎಲ್ಲಾ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ರಾತ್ರಿ ಸುಮಾರು 8-00 ಗಂಟೆಗೆ ವೈರಮುಡಿ ಬ್ರಹ್ಮತ್ಸವ ಪ್ರಾರಂಭವಾಗುವುದು ಎಂದು ತಿಳಿಸಿದರು.
ಮುಡಿ ಪೆಟ್ಟಿಗೆಗಳನ್ನು ಬೆಳಿಗೆ, 07-00 ಗಂಟೆಗೆ ಜಿಲ್ಲಾ ಖಜಾನೆಯಿಂದ ದೇವಾಲಯಕ್ಕೆ ಹೋಗುವುದರಿಂದ ದೇವಾಲಯದಲ್ಲಿ ಬ್ರಹೋತ್ಸವ ಪ್ರಾರಂಭವಾಗಿ ಮುಕ್ತಾಯವಾಗುವವರೆಗೆ ಸಂಪೂರ್ಣ ಕಾರ್ಯಕ್ರಮವನ್ನು ಭಕ್ತಾದಿಗಳು ವೀಕ್ಷಿಸಲು ಅನುಕೂಲವಾಗುವಂತೆ ದೃಶ್ಯ ಮಾಧ್ಯಮ ಮತ್ತು ಯು ಟ್ಯೂಬ್ ಚಾನಲ್ ಗಳಲ್ಲಿ ನೇರ ಪ್ರಸಾರ ಮಾಡುವ ವ್ಯವಸ್ಥೆ ಮಾಡಲಾಗಿದೆ ಹಾಗೂ ಕ್ಷೇತ್ರದಲ್ಲಿ ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ದೊಡ್ಡ ದೊಡ್ಡ LED ಪರದೆಗಳನ್ನು ಅಳವಡಿಸಿ ಕಾರ್ಯಕ್ರಮದ ನೇರ ಪ್ರಸಾರ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಏಪ್ರಿಲ್ 01 ರಂದು ರಂದು ವೈರಮುಡಿ ಬ್ರಹೋತ್ಸವ ಅಂಗವಾಗಿ ತೆಪ್ಪೋತ್ಸವ ಕಾರ್ಯಕ್ರಮ ನಡೆಯಲಿದ್ದು
ಮೇಲುಕೋಟೆಯ ದೊಡ್ಡ ಕಲ್ಯಾಣಿಯಲ್ಲಿ ಕಲ್ಯಾಣಿಗೆ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಿಸಲಾಗಿದ್ದು ಕಲ್ಯಾಣಿಯ ವಿವಿಧ ವೇದಿಕೆಗಳಲ್ಲಿ ಮ್ಯಾಂಡಲಿನ್ ವಾದನ, ಓಕಲ್, ಭರತ ನಾಟ್ಯ ಚಂಡೆ ಮದ್ದಳೆ ಮತ್ತು ನಾದಸ್ವರ ವಾದನ ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಆಕಸ್ಮಿಕ ಅವಘಡಗಳನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಕಲ್ಯಾಣಿಯ ಬಳಿ 5 ಮಂದಿ ನುರಿತ ಈಜುಗಾರರನ್ನು ಜೀವ ರಕ್ಷಕ ಸಾಮಾಗ್ರಿಗಳೊಂದಿಗೆ ನಿಯೋಜಿಸಲಾಗಿದೆ ಎಂದು ತಿಳಿಸಿದರು.
ವಿಶೇಷ ವಿದ್ಯುತ್ ದೀಪಾಲಂಕಾರ
ವಿಶೇಷ ವಿದ್ಯುತ್ ದೀಪಾಲಂಕಾರ ಮತ್ತು ಹೂವಿನ ಅಲಂಕಾರ ವ್ಯವಸ್ಥೆಯನ್ನು ಕಳೆದ ಬಾರಿಯಂತೆ ಈ ವರ್ಷವೂ ಸಹ ಕ್ಷೇತ್ರದಲ್ಲಿ ವಿಶೇಷ ದೀಪಾಲಂಕಾರ ಮತ್ತು ಹೂವಿನ ಅಲಂಕಾರ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಪೊಲೀಸ್ ಅಧಿಕ್ಷಕರು ವಿ. ಜೆ ಶೋಭರಾಣಿ ರವರು ಮಾತನಾಡಿ ವೈರಮುಡಿ ಬ್ರಹ್ಮೋತ್ಸವದಲ್ಲಿ ಸಾರ್ವಜನಿಕರಿಗೆ ತುರ್ತು ಅವಘಡಗಳ ನಿರ್ವಹಣೆಗಾಗಿ ಎರಡು ಅಗ್ನಿಶಾಮಕ ವಾಹನ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು ಕ್ಷೇತ್ರದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಪಾಲನೆ ಹಾಗೂ ಭದ್ರತಾ ಹಿತದೃಷ್ಟಿಯಿಂದ 1,200 ಕ್ಕೂ ಹೆಚ್ಚು ಆರಕ್ಷಕ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.ಮೇಲ್ವಿಚಾರಣೆ ಮತ್ತು ನಿರ್ವಹಣೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚನೆಮಾಡಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಕೆ. ಆರ್. ನಂದಿನಿ, ಅಪರ ಜಿಲ್ಲಾಧಿಕಾರಿ ಬಿ. ಸಿ ಶಿವಾನಂದ ಮೂರ್ತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ಟಿ. ಕೆ. ಹರೀಶ್ ರವರು ಉಪಸ್ಥಿತರಿದ್ದರು.








