ಬೆಂಗಳೂರು : ತಿರುಪತಿ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬು ಬಳಸಲಾಗುತ್ತದೆ ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್ದಾರೆ. ಈ ಆರೋಪ ಸದ್ಯ ಎಲ್ಲೆಡೆ ಸಂಚಲನ ಮೂಡಿಸಿದೆ. ನಾಯ್ಡು ಹೇಳಿಕೆಗೆ ಇದೀಗ ಕರ್ನಾಟಕ ಹಾಲು ಒಕ್ಕೂಟದ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ ನೀಡಿದ್ದು, ಸಿಎಂ ಚಂದ್ರಬಾಬು ನಾಯ್ಡು ಹೇಳಿಕೆಗೂ ನಮ್ಮ ನಂದಿನಿ ಬ್ರ್ಯಾಂಡ್ ಗು ಯಾವುದೇ ರೀತಿಯಾದ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದರು.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ 4 ವರ್ಷಗಳಿಂದ ನಂದಿನಿ ತುಪ್ಪ ಅಲ್ಲಿಗೆ ಹೋಗಿಲ್ಲ. ಈಗ ನಂದಿನಿ ತುಪ್ಪ ತಿರುಪತಿಗೆ ಸರಬರಾಜು ಮಾಡಲು ಶುರು ಮಾಡಿದ್ದೇವೆ. 2013-18ರ ಅವಧಿಯಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ 3 ರಿಂದ 4 ಮೆಟ್ರಿಕ್ ಟನ್ ತುಪ್ಪ ಸರಬರಾಜು ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
2019ರಲ್ಲಿ ಸಮ್ಮಿಶ್ರ ಸರ್ಕಾರ ಇತ್ತು. ಆ ವರ್ಷ 17 ಟನ್ ಸರಬರಾಜು ಮಾಡಿದ್ದೇವೆ. 2020-24ರವರೆಗೆ ಟಿಟಿಡಿನವರು ನಂದಿನಿ ತುಪ್ಪವನ್ನ ಸ್ಥಗಿತ ಮಾಡಿದ್ದರು. ಇಲ್ಲಿ ಹೊಸ ಸರ್ಕಾರ ಬಂದ ಮೇಲೆ ಟ್ರಸ್ಟ್ನ ಅಧಿಕಾರಿಗಳು ನಂದಿನಿ ತುಪ್ಪವನ್ನ ಹೊರಗಿಟ್ಟು ಬೇರೆ ಬೇರೆ ಬ್ರ್ಯಾಂಡ್ ತುಪ್ಪವನ್ನ ಖರೀದಿ ಮಾಡಿದ್ದಾರೆ. ಇದರ ಹಿನ್ನಲೆ ಏನು ಅಂತ ತನಿಖೆ ಮಾಡುತ್ತೇವೆ. ಭ್ರಷ್ಟಾಚಾರ ನಡೆದಿದೆ ಅಂತ ಈಗಿನ ಸಿಎಂ ಗಮನಕ್ಕೆ ತಂದಿದ್ದಾರೆ ಎಂದು ಹೇಳಿದ್ದಾರೆ.
ಟಿಟಿಡಿಯವರು ಬೇಡ ಅಂದ್ರೂ ನಮಗೆ ತೊಂದರೆ ಆಗಲ್ಲ. ಕರ್ನಾಟಕದಲ್ಲಿ ನಂದಿನಿ ತುಪ್ಪಕ್ಕೆ ತುಂಬಾ ಬೇಡಿಕೆ ಇದೆ. ನಾವು ಎಷ್ಟು ತಯಾರು ಮಾಡ್ತಿವೋ ಅಷ್ಟೇ ಬೇಡಿಕೆ ಇದೆ. ದುಬೈ, ಖತಾರ್ ಸೇರಿ ಬೇರೆ ದೇಶಗಳಲ್ಲೂ ಬೇಡಿಕೆ ಇದೆ. ತಿರುಪತಿ ಲಡ್ಡುವಿನಲ್ಲಿ ನಂದಿನಿ ತುಪ್ಪ ಬಳಕೆಯಾದರೆ ನಮಗೆ ಹೆಮ್ಮೆ.ಟಿಟಿಡಿಯವರು ಎಷ್ಟು ತುಪ್ಪ ಕೇಳುತ್ತಾರೋ ಅಷ್ಟು ಕೊಡುತ್ತೇವೆ. ಟಿಟಿಡಿ ತೆಗೆದುಕೊಂಡಿಲ್ಲ ಅಂದ್ರೂ ನಮ್ಮಲ್ಲೇ ಬೇಡಿಕೆ ಇದೆ. ನಂದಿನಿ ತುಪ್ಪವನ್ನು ಬೇಡ ಎನ್ನುವ ಪ್ರಶ್ನೆ ಇಲ್ಲ ಎಂದರು.
ನಂದಿನಿ ಹಾಲಿನ ದರ ಏರಿಕೆ ಮುನ್ನವೇ ಬಿಜೆಪಿ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಬಿಜೆಪಿಯವರಿಗೆ ಬೇರೆ ಕೆಲಸ ಇಲ್ಲ. 5 ವರ್ಷ ಬೊಂಬಡಾ ಹೊಡೆದುಕೊಂಡು ಹೋಗಿ ಅಂತಾ ಕೂರಿಸಿದ್ದಾರೆ. ರಾಜ್ಯದ ಜನರು ಬಿಜೆಪಿಯವರನ್ನು ವಿರೋಧ ಪಕ್ಷದಲ್ಲಿ ಕೂರಿಸಿದ್ದಾರೆ. ನಮ್ಮ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿಗಳನ್ನು ಕೊಡ್ತೀವಿ ಅಂತಾ ಹೇಳಿದ್ವಿ, ಮಾತಿನಂತೆ ನಾವು ನಡೆದುಕೊಂಡು ಹೋಗುತ್ತಿದ್ದೇವೆ ಎಂದಿದ್ದಾರೆ.