ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರವು ಸರಕಾರಿ ಅಧಿಕಾರಿಗಳಿಗೆ ಆತ್ಮಹತ್ಯೆ ಭಾಗ್ಯ ಕರುಣಿಸಿದೆ ಎಂದು ಆಕ್ಷೇಪಿಸಿ ವಿಪಕ್ಷ ನಾಯಕರು ಇಂದು ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು.
ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಈ ವಿನೂತನ ಮಾದರಿಯ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಆರ್.ಅಶೋಕ್ ಅವರು ‘ಸಿದ್ದು ಸರಕಾರದಲ್ಲಿ ಅಧಿಕಾರಿಗಳಿಗೆ ಆತ್ಮಹತ್ಯೆ ಭಾಗ್ಯ’ ಎಂಬ ಘೋಷಣೆಯುಳ್ಳ ಭಿತ್ತಿಪತ್ರ ಹಿಡಿದಿದ್ದರು. ಛಲವಾದಿ ನಾರಾಯಣಸ್ವಾಮಿ ಅವರು ‘ನಿಷ್ಠಾವಂತ ಅಧಿಕಾರಿಗಳಿಗೆ ರಕ್ಷಣೆ ಕೊಡಿ’ ಎಂಬ ಭಿತ್ತಿಪತ್ರ ಹಿಡಿದು ಪಾಲ್ಗೊಂಡರು.
ನಿಷ್ಠಾವಂತ ಅಧಿಕಾರಿಗಳು ಕೆಲಸ ಮಾಡಲು ಆಗದ ಪರಿಸ್ಥಿತಿ ಇದೆ ಎಂದು ಅಶೋಕ್ ಅವರು ಆಕ್ಷೇಪ ವ್ಯಕ್ತಪಡಿಸಿದರು. ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಬ್ ಇನ್ಸ್ಪೆಕ್ಟರ್ ಒಬ್ಬರು ಪ್ರಾಣ ಕಳಕೊಂಡಿದ್ದಾರೆ. ನಿರಂತರವಾಗಿ ಸರಣಿ ರೀತಿ ಆತ್ಮಹತ್ಯೆ ನಡೆಯುತ್ತಿದೆ. ಬೆದರಿಸುವ ಕೆಲಸ ಮುಂದುವರೆದಿದೆ ಎಂದು ಟೀಕಿಸಿದರು. ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳು ಇದರ ಕುರಿತು ಚಕಾರ ಎತ್ತಿಲ್ಲ ಎಂದು ದೂರಿದರು.
ಸಿ.ಟಿ.ರವಿ ಅವರ ವಿಷಯದಲ್ಲಿ ಯಾಕೆ ಕಾನೂನು ರೀತಿ ಬಿಟ್ಟು ಕ್ರಮ ಕೈಗೊಂಡಿದ್ದೀರಿ ಎಂದು ಕೇಳಿದರು. ನಿನ್ನೆಯ ಎರಡು ಪ್ರಮುಖ ಘಟನೆಗಳಲ್ಲಿ ಯಾರನ್ನು ಬಂಧಿಸಿದ್ದೀರಿ ಎಂದು ಪ್ರಶ್ನಿಸಿದರು. 500- 600 ಜನ ಠಾಣೆ ಮೇಲೆ ದಾಳಿ ಮಾಡಿದ್ದಾರೆ ಎಂದು ಟೀಕಿಸಿದರು. ರಾಜ್ಯದಲ್ಲಿ ಹಿಂದೂಗಳಿಗೆ ಒಂದು ಕಾನೂನು, ಮುಸ್ಲಿಮರಿಗೆ ಇನ್ನೊಂದು ಕಾನೂನೇ ಎಂದು ಕೇಳಿದರು. ಸರಕಾರ ಪೊಲೀಸರ ವಿರುದ್ಧ ಮಾತನಾಡಿದರೆ ಅವರ ಆತ್ಮಸ್ಥೈರ್ಯ ಉಳಿಯುವುದು ಹೇಗೆ ಎಂದರು.
ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಸರಕಾರದ ಹಾಗೂ ರಾಜ್ಯದ ಗಮನ ಸೆಳೆಯಲು ಈ ಪ್ರದರ್ಶನ ಮಾಡಿದ್ದೇವೆ. ವಿಪಕ್ಷ ನಾಯಕರ ಜವಾಬ್ದಾರಿ ನಿರ್ವಹಿಸುತ್ತಿದ್ದೇವೆ ಎಂದು ತಿಳಿಸಿದರು.
ಸರಕಾರ ಉತ್ತರ ಕೊಡುತ್ತಿಲ್ಲ; ನಾವೀಗ ಜನರಿಂದ ಉತ್ತರ ಬಯಸುವಂತಾಗಿದೆ ಎಂದು ಹೇಳಿದರು. ಕೆಂಗಲ್ ಹನುಮಂತಯ್ಯನವರು ವಿಧಾನಸೌಧ ಕಟ್ಟಿಸುವಾಗ ‘ಸರಕಾರದ ಕೆಲಸ ದೇವರ ಕೆಲಸ’ ಎಂಬ ದೊಡ್ಡ ವಿಷಯವನ್ನಿಟ್ಟು ಇದನ್ನು ನಿರ್ಮಿಸಿದ್ದಾರೆ. ಹೆಣ್ಮಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು ದೇವರ ಕೆಲಸವೇ? ನಾವು ಹೇಳಿದಂತೆ ನಡೆದುಕೊಳ್ಳದಿದ್ದರೆ ಲಾರಿ ಹತ್ತಿಸುತ್ತೇವೆ ಎಂದು ಬೆದರಿಸುವುದು ದೇವರ ಕೆಲಸವೇ? ವಾಲ್ಮೀಕಿ ನಿಗಮದಲ್ಲಿ 187 ಕೋಟಿ ನುಂಗಿದ್ದಾಗಿ ಹೇಳಿದಾಗ 87 ಕೋಟಿ ಮಾತ್ರ ನುಂಗಿದ್ದಾಗಿ ಹೇಳುವುದು ದೇವರ ಕೆಲಸವೇ ಎಂದು ಕೇಳಿದರು.
ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿಗಳು ಬರೆದಿಟ್ಟ ಹೆಸರುಗಳನ್ನು ಮರೆಮಾಚಿದ್ದು ದೇವರ ಕೆಲಸವೇ ಎಂದು ಅವರು ಪ್ರಶ್ನೆಯನ್ನು ಮುಂದಿಟ್ಟರು.
ಶಿವಮೊಗ್ಗ: ಹುತಾತ್ಮ ಯೋಧ ಮಂಜುನಾಥ್ ಕುಟುಂಬಕ್ಕೆ ಸಚಿವ ಎಸ್. ಮಧು ಬಂಗಾರಪ್ಪ ಸಾಂತ್ವನ
BREAKING : ‘ಮುಡಾ’ ಅಕ್ರಮ ಹಗರಣ : ಲೋಕಾಯುಕ್ತ ಎಸ್.ಪಿ ಇಂದ ಐಜಿಪಿಗೆ ಅಂತಿಮ ತನಿಖಾ ವರದಿ ಸಲ್ಲಿಕೆ