ಬೆಂಗಳೂರು : ರಾಜ್ಯದ ಯಾವುದೇ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಪ್ರಸ್ತಾವನೆ ಸದ್ಯಕ್ಕೆ ಇಲ್ಲ ಎಂದು ಬೆಂಗಳೂರು ವಿವಿಯ ಕಟ್ಟಡ ಶಂಕು ಸ್ಥಾಪನೆ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು. ಬೆಂಗಳೂರು ವಿಶ್ವವಿದ್ಯಾಲಯ ಶೈಕ್ಷಣಿಕ ಮತ್ತು ಸಂಶೋಧನಾ ಕಟ್ಟಡ ನಿರ್ಮಾಣಕ್ಕೆ ಇಂದು ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಕೇವಲ 2 ಕೋಟಿ ದುಡ್ಡಿಟ್ಟು ವಿಶ್ವವಿದ್ಯಾಲಯ ಮಾಡಿದರು ಹೊಸ ವಿಶ್ವವಿದ್ಯಾಲಯಗಳನ್ನು ಮಾಡಬೇಕಾದರೆ ನೂರಾರು ಎಕರೆ ಭೂಮಿ ಬೇಕಾಗುತ್ತದೆ ಎಂದರು.
ಬೆಂಗಳೂರು ವಿಶ್ವವಿದ್ಯಾಲಯ ಶುರು ಮಾಡುವಾಗ 1,200 ಎಕ್ರೆ ಭೂಮಿ ಇತ್ತು.ಬಿಜೆಪಿಯವರು ಸುಮ್ಮನೆ ಏನು ಹೆಸರಿಗಷ್ಟೇ ವಿವಿಗಳನ್ನು ಮಾಡಿದರು. ಮೈಸೂರು ವಿಶ್ವವಿದ್ಯಾಲಯ ಅಂತ ಹೇಳಿದರೆ ಒಂದು ಹೆಸರಿದೆ. ನಮಗೆಲ್ಲ ಮೈಸೂರು ವಿಶ್ವವಿದ್ಯಾಲಯ ಅಂದರೆ ಹೆಮ್ಮೆ ಇದೆ. ಹೊಸ ವಿಶ್ವವಿದ್ಯಾಲಯಗಳಿಗೆ ಹೋಗಲು ಸಿಬ್ಬಂದಿ ಹಿಂದೆ ಮುಂದೆ ನೋಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಿತಿ ರಚನೆಯಾಗಿತ್ತು.ಅವರು ವರದಿ ಕೊಟ್ಟರು. ವರದಿ ಆಧಾರದಲ್ಲಿ ಕ್ಯಾಬಿನೆಟ್ ಸಬ್ ಕಮಿಟಿಯಲ್ಲಿ ಈ ಕುರಿತು ಚರ್ಚೆ ಆಯಿತು. ರಾಜಕೀಯ ಲಾಭಕ್ಕಾಗಿ ಒಂದಷ್ಟು ಜನ ಪ್ರೊಟೆಸ್ಟ್ ಮಾಡಬಹುದು. ಯಾವುದೇ ವಿಶ್ವವಿದ್ಯಾಲಯಗಳನ್ನು ಮುಚ್ಚೋಕೆ ಆಗಲ್ಲ.
10-13 ಕಾಲೇಜುಗಳಿಗೆ ಒಂದೊಂದು ವಿಶ್ವವಿದ್ಯಾಲಯ ಮಾಡುವುದಕ್ಕೆ ಆಗುವುದಿಲ್ಲ. ಬರೀ ವಿಸಿ ಕುಲಸಚಿವರ ಹುದ್ದೆಗೋಸ್ಕರ ವಿವಿ ಮಾಡುವುದಕ್ಕೆ ಆಗಲ್ಲ. ನಾವೆಲ್ಲ ಬೆಂಗಳೂರು ವಿವಿಯವರು ಬೆಂಗಳೂರು ಜಿಲ್ಲೆಯವರು. ಬೆಂಗಳೂರಿನ ಸ್ವಾಭಿಮಾನ ಯಾರು ಕಳೆದುಕೊಳ್ಳಲು ಹೋಗಲ್ಲ. ಮೈಸೂರು ಸ್ವಾಭಿಮಾನ ಸಹ ಯಾರು ಕಳೆದುಕೊಳ್ಳಲು ಹೋಗಲ್ಲ. ವಿಶ್ವವಿದ್ಯಾಲಯ ಮಾಡ್ತೀನಿ ಅಂತ 2 ಕೋಟಿ ರೂಪಾಯಿ ಕೊಟ್ಟರೆ ಆಗುತ್ತಾ? ಬಿಜೆಪಿ ಅವರಿಗೆ ಕುರ್ಚಿ ಟೇಬಲ್ಗಳಿಗೂ ದುಡ್ಡು ಕೊಡಲು ಆಗಿಲ್ಲ. ಕೇಂದ್ರ ಸರ್ಕಾರದಿಂದ ನೂರಾರು ಕೋಟಿ ರೂಪಾಯಿ ಕೊಡಿಸಲಿ ಎಂದು ಡಿಕೆ ಶಿವಕುಮಾರ್ ಇದೇ ವೇಳೆ ತಿಳಿಸಿದರು.