ನವದೆಹಲಿ: ವಿಮಾನಯಾನ ವಲಯವನ್ನು ಬೆಚ್ಚಿಬೀಳಿಸಿದ್ದ ಮಾರಣಾಂತಿಕ ಏರ್ ಇಂಡಿಯಾ AI 171 ವಿಮಾನ ಅಪಘಾತ ನಡೆದು ಒಂದು ವರ್ಷವಾಗುತ್ತ ಬಂದಿದ್ದರೂ, ಅಪಘಾತದ ಸತ್ಯಾಸತ್ಯತೆ ತಿಳಿಯಲು ಕಾಯುತ್ತಿರುವ ಕುಟುಂಬಗಳಿಗೆ ಇನ್ನೂ ಕಾಯುವಿಕೆ ತಪ್ಪಿಲ್ಲ. ವಿಮಾನ ಅಪಘಾತ ತನಿಖಾ ಮಂಡಳಿಯು (AAIB) ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಮಧ್ಯಂತರ ವರದಿಯನ್ನು ಬಿಡುಗಡೆ ಮಾಡುವುದಿಲ್ಲ ಬದಲಾಗಿ, ನೇರವಾಗಿ ಅಂತಿಮ ತನಿಖಾ ವರದಿಯನ್ನು ಮಾತ್ರ ಪ್ರಕಟಿಸಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಉನ್ನತ ಮೂಲಗಳು ತಿಳಿಸಿವೆ.
ಏರ್ ಇಂಡಿಯಾ ವಿಮಾನ ಅಪಘಾತವು ಜೂನ್ 12, 2025 ರಂದು ಸಂಭವಿಸಿತ್ತು. ಇದೀಗ ಆ ಘಟನೆಗೆ ಒಂದು ವರ್ಷ ಪೂರ್ಣಗೊಳ್ಳುತ್ತಿದ್ದು, AAIB ಅಂತಿಮ ತನಿಖಾ ವರದಿಯನ್ನು ಸಿದ್ಧಪಡಿಸುವ ಕಾರ್ಯದಲ್ಲಿ ನಿರತವಾಗಿದೆ. ಈ ಅಂತಿಮ ವರದಿಯು ಜೂನ್ 12, 2026ರ ನಂತರವೇ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ಖಚಿತಪಡಿಸಿವೆ.
ಈ ವಿಷಯದ ಬಗ್ಗೆ ಮಾಹಿತಿ ಇರುವ ಅಧಿಕಾರಿಗಳ ಪ್ರಕಾರ, ಅಂತಿಮ ವರದಿ ಸಿದ್ಧವಾಗುವ ಮುನ್ನ ಯಾವುದೇ ಪ್ರಾಥಮಿಕ ಅಥವಾ ಮಧ್ಯಂತರ ವರದಿಯನ್ನು ನೀಡುವ ಯೋಜನೆ ಇಲ್ಲ. ತನಿಖೆಯು ನೇರವಾಗಿ ಅಂತಿಮ ವರದಿಯೊಂದಿಗೆ ಮುಕ್ತಾಯವಾಗಲಿದೆ ಎಂಬುದನ್ನು ಎರಡು ಸ್ವತಂತ್ರ ಮೂಲಗಳು ದೃಢಪಡಿಸಿವೆ.
ತನಿಖೆಯಲ್ಲಿನ ಈ ವಿಳಂಬವು ಸಂತ್ರಸ್ತರ ಕುಟುಂಬಗಳಲ್ಲಿ ಆತಂಕವನ್ನು ಹೆಚ್ಚಿಸಿದೆ. ಅವರಲ್ಲಿ ಅನೇಕರು ಇನ್ನೂ ಸ್ಪಷ್ಟತೆ ಮತ್ತು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಅಧಿಕಾರಿಯೊಬ್ಬರು, ಮೃತ ಸಿಬ್ಬಂದಿ ಮತ್ತು ವಿಮಾನದ ಪೈಲಟ್ಗಳಾದ ಕ್ಯಾಪ್ಟನ್ ಸುಮೀತ್ ಸಬರ್ವಾಲ್ ಮತ್ತು ಕ್ಯಾಪ್ಟನ್ ಕ್ಲೈವ್ ಕುಂಡರ್ ಅವರ ಕುಟುಂಬದವರಿಗೆ, ಈ ದುರಂತಕ್ಕೆ ಕಾರಣವೇನು ಎಂಬ ಬಗ್ಗೆ “ಸ್ಪಷ್ಟವಾದ ಉತ್ತರ” ಸಿಗುವ ಹಕ್ಕಿದೆ ಎಂದು ತಿಳಿಸಿದ್ದಾರೆ.
ಸಂಕೀರ್ಣವಾದ ವಿಮಾನ ಅಪಘಾತಗಳ ತನಿಖೆಗೆ ಸಾಕಷ್ಟು ಸಮಯ ಬೇಕಾಗುತ್ತದೆ ಎಂಬ ಅಂಶವನ್ನು ಮತ್ತೊಂದು ಮೂಲವು ಎತ್ತಿ ತೋರಿಸಿದೆ. ಕೆಲವು ಅಂತಾರಾಷ್ಟ್ರೀಯ ವಿಮಾನ ಅಪಘಾತಗಳ ತನಿಖಾ ವರದಿಗಳು ಬಿಡುಗಡೆಯಾಗಲು 22 ತಿಂಗಳವರೆಗೆ ಸಮಯ ಹಿಡಿದ ಉದಾಹರಣೆಗಳಿವೆ. ಆದಾಗ್ಯೂ, ಅಪಘಾತದ ಮೊದಲ ವಾರ್ಷಿಕೋತ್ಸವದ ನಂತರ AI 171ರ ವರದಿಯನ್ನು ಪೂರ್ಣಗೊಳಿಸಲು ತನಿಖಾಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.








