ನವದೆಹಲಿ: ಭಾರತೀಯ ರಕ್ಷಣಾ ಪಡೆಗಳ ಉನ್ನತ ಹುದ್ದೆಗಳಲ್ಲಿ ಮಹತ್ವದ ಬದಲಾವಣೆಯಾಗಿದೆ. ಶನಿವಾರ ನಿವೃತ್ತರಾದ ಜನರಲ್ ಅನಿಲ್ ಚೌಹಾಣ್ ಅವರ ಉತ್ತರಾಧಿಕಾರಿಯಾಗಿ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಅವರು ಭಾನುವಾರ ಭಾರತದ ಹೊಸ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ (CDS) ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅದೇ ರೀತಿ, ಭಾನುವಾರ ನಿವೃತ್ತರಾಗುತ್ತಿರುವ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಅವರ ಸ್ಥಾನಕ್ಕೆ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಅವರು ನೂತನ ನೌಕಾಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಈ ನೇಮಕಗಳು ದೇಶದ ರಕ್ಷಣಾ ಪಡೆಗಳು ‘ಥಿಯೇಟರೈಸೇಶನ್’ (theaterisation) ಪ್ರಕ್ರಿಯೆಯನ್ನು ಮುನ್ನಡೆಸುತ್ತಿರುವ ನಿರ್ಣಾಯಕ ಸಮಯದಲ್ಲಿ ನಡೆದಿವೆ. ಭವಿಷ್ಯದ ಸಂಘರ್ಷಗಳನ್ನು ಎದುರಿಸಲು ಸೇನೆಯ ಸಂಪನ್ಮೂಲಗಳನ್ನು ಸಂಯೋಜಿಸುವ ಗುರಿಯನ್ನು ಈ ಸುಧಾರಣೆ ಹೊಂದಿದೆ. ಜನರಲ್ ಚೌಹಾಣ್ ಅವರು ರಕ್ಷಣಾ ಪಡೆಗಳ ಪರಿವರ್ತನೆ ಮತ್ತು ಏಕೀಕರಣದ ಹಂತದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ನೂತನ ಸಿಡಿಎಸ್ ಜನರಲ್ ಸುಬ್ರಮಣಿ ಅವರು, ಥಿಯೇಟರೈಸೇಶನ್ ಅಭಿಯಾನದ ಪ್ರಮುಖ ಗುರಿಯಾದ ‘ಜಂಟಿ ಸೇವಾ ಕಮಾಂಡ್’ಗಳ ಸ್ಥಾಪನೆಯನ್ನು ತ್ವರಿತಗೊಳಿಸುವ ನಿರೀಕ್ಷೆಯಿದೆ. ಈ ಕಮಾಂಡ್ಗಳು ಮೂರು ಸೇನೆಗಳ ಮಿಲಿಟರಿ ಅಂಶಗಳು, ಸಂಪನ್ಮೂಲಗಳು ಮತ್ತು ಸಿಬ್ಬಂದಿಯನ್ನು ಒಂದೇ ಕಮಾಂಡರ್-ಇನ್-ಚೀಫ್ ಅಡಿಯಲ್ಲಿ ಒಗ್ಗೂಡಿಸಲಿದೆ.
ಜನರಲ್ ಚೌಹಾಣ್ ಅವರು ಇತ್ತೀಚೆಗೆ ರಕ್ಷಣಾ ಸಚಿವರಿಗೆ ಈ ಕುರಿತಾದ ಸಮಗ್ರ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಇದರನ್ವಯ ಲಖನೌದಲ್ಲಿ ಚೀನಾ ಕೇಂದ್ರಿತ ‘ನಾರ್ದರ್ನ್ ಥಿಯೇಟರ್ ಕಮಾಂಡ್’, ಜೈಪುರದಲ್ಲಿ ಪಾಕಿಸ್ತಾನ ಕೇಂದ್ರಿತ ‘ವೆಸ್ಟರ್ನ್ ಥಿಯೇಟರ್ ಕಮಾಂಡ್’ ಮತ್ತು ತಿರುವನಂತಪುರದಲ್ಲಿ ‘ಮ್ಯಾರಿಟೈಮ್ ಥಿಯೇಟರ್ ಕಮಾಂಡ್’ ಸ್ಥಾಪಿಸುವ ಮಾದರಿಯನ್ನು ರೂಪಿಸಲಾಗಿದೆ.








