ಬೆಂಗಳೂರು: ರಕ್ತ ಚಂದನ ಮರಗಳ ಕಳ್ಳ ಸಾಗಣೆ ತಡೆಗೆ ಪೊಲೀಸ್ ಇಲಾಖೆಯು ಎಲ್ಲಾ ರೀತೀಯ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಎಂ.ಟಿ.ಬಿ. ನಾಗರಾಜು ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹೊಸಕೋಟೆ ತಾಲೂಕಿನ ಕಟ್ಟಿಗೇನಹಳ್ಳಿ, ಬೈಲನರಸಾಪುರ, ಮೇಡಿಮಲ್ಲಸಂದ್ರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಕ್ರಮವಾಗಿ ರಕ್ತಚಂದನ, ಮರಗಳ ಸಾಗಾಣಿಕೆ ಮಾಡುತ್ತಿರುವ ಕುರಿತು ಪ್ರಕರಣಗಳು ದಾಖಲಾಗಿರುತ್ತದೆ.
ಬೆಂಗಳೂರು ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಕಟ್ಟಿಗೇನಹಳ್ಳಿ ಬೈಲನರಸಾಪುರ, ಮೇಡಿಮಲ್ಲಸಂದ್ರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವ್ಯಾಪ್ತಿಯ ವಿವಿಧ ಪೆÇಲೀಸ್ ಠಾಣೆಗಳಲ್ಲಿ ಅಕ್ರಮವಾಗಿ ರಕ್ತಚಂದನ ಮರಗಳ ಸಾಗಾಣಿಕೆ ಮಾಡುತ್ತಿರುವ ಕುರಿತಂತೆ ಕಳೆದ 2021, 2022, 2023 & 2024ನೇ ಸಾಲಿನಲ್ಲಿ ಒಟ್ಟು 14 ಪ್ರಕರಣಗಳನ್ನು ದಾಖಲಿಸಿಕೊಂಡು, 34 ಜನ ಆರೋಪಿಗಳನ್ನು ಬಂಧಿಸಿ, ಆರೋಪಿಗಳಿಂದ ಒಟ್ಟು 5650.17 ಕೆ.ಜಿಗಳ ರಕ್ತಚಂದನ ತುಂಡುಗಳನ್ನು ಜಪ್ತಿಪಡಿಸಿಕೊಳ್ಳಲಾಗಿದೆ. ಅಂದಾಜು ಮೌಲ್ಯ 1,47,77,600 ರೂಗಳಾಗಿರುತ್ತದೆ.
ಹೊಸಕೋಟೆ ತಾಲ್ಲೂಕಿನ ಕಟ್ಟಿಗೇನಹಳ್ಳಿ, ಬೈಲನರಸಾಪುರ, ಮೇಡಿಮಲ್ಲಸಂದ್ರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಕ್ರಮವಾಗಿ ರಕ್ತಚಂದನ ಮರಗಳ ಸಾಗಾಣಿಕೆ ಮಾಡುತ್ತಿರುವವರ ಮೇಲೆ ನಿಗಾವಹಿಸಿ, ಸಿಬ್ಬಂದಿಯವರನ್ನು ನೇಮಕ ಮಾಡಿ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಸ್ತು ಕರ್ತವ್ಯಕ್ಕೆ ಸಿಬ್ಬಂದಿಯವರನ್ನು ನೇಮಕ ಮಾಡಿ. ಅನುಮಾನಾಸ್ಪದ ವಾಹನಗಳನ್ನು ತಪಾಸಣೆ ಮಾಡಿಸಲಾಗಿರುತ್ತದೆ. ಠಾಣಾ ಗುಪ್ತ ವಿಭಾಗದ ಸಿಬ್ಬಂದಿಯವರಿಗೆ ಈ ಬಗ್ಗೆ ಸೂಚನೆ ನೀಡಿ, ಅಕ್ರಮ ರಕ್ತ ಚಂದನ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವಂತೆ ಸೂಚಿಸಲಾಗಿರುತ್ತದೆ.
ರಾತ್ರಿ ಸಮಯದಲ್ಲಿ ಪ್ರಮುಖ ರಸ್ತೆಗಳಲ್ಲಿ ನಾಕಬಂದಿ ಮಾಡಿ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದ್ದು, ಅಕ್ರಮ ರಕ್ತ ಚಂದನ ಸಾಗಾಣಿಕೆ ಆಗದಂತೆ ಸೂಕ್ತ ಕ್ರಮವನ್ನು ಕೈಗೊಳ್ಳಲಾಗಿರುತ್ತದೆ. ಅಕ್ರಮವಾಗಿ ರಕ್ತ ಚಂದನ ಸಾಗಾಣಿಕೆ ಮಾಡುತ್ತಿರುವವರ ವಿರುದ್ಧ ಎಂ.ಒ.ಬಿ ಹಾಳೆಗಳನ್ನು ಹಾಗೂ ರೌಡಿ ಹಾಳೆಯನ್ನು ತೆರೆದು ಆರೋಪಿಗಳ ಚಲನವಲನಗಳ ಮೇಲೆ ನಿಗಾ ವಹಿಸಲಾಗಿರುತ್ತದೆ. ಅರಣ್ಯ ಸಂರಕ್ಷಣೆ /ಅರಣ್ಯ ಸಂಬಂಧಿತ ಕಳ್ಳತನ ಪ್ರಕರಣಗಳ ತನಿಖೆ ಮತ್ತು ನಿಗಾವಣೆಗಾಗಿ ಸಿಐಡಿ ವಿಭಾಗದಲ್ಲಿ ಡಿಐಜಿ/ಎಸ್.ಪಿ ರವರ ನೇತೃತ್ವದಲ್ಲಿ ಫಾರೆಸ್ಟ್ ಮೊಬೈಲ್ ಸ್ಕ್ವಾಡ್ ಕಾರ್ಯನಿರ್ವಹಿಸುತ್ತಿದೆ. ರಾಜ್ಯದಲ್ಲಿ ಅರಣ್ಯ ಸಂರಕ್ಷಣೆಗಾಗಿ ‘ಕರ್ನಾಟಕ ಫಾರೆಸ್ಟ್ ಆಕ್ಟ್-1963’ ಕಾಯ್ದೆಯನ್ನು ಜಾರಿಗೆ ತಂದಿದ್ದು, ಸದರಿ ಕಾಯ್ದೆಯ ಅನ್ವಯ ಅರಣ್ಯ ಪ್ರದೇಶದಲ್ಲಿನ ಕಳ್ಳತನ ಕೃತ್ಯಗಳಲ್ಲಿನ ದೂರುಗಳನುಸಾರ ಆರೋಪಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮಗಳನ್ನು ನಿಯಮಾನುಸಾರ ಜರುಗಿಸಲಾಗುತ್ತಿದೆ.
ಕರ್ನಾಟಕ ರಾಜ್ಯ ಪೆÇಲೀಸ್ ಇಲಾಖೆಯಿಂದ ಅಕ್ರಮ ರಕ್ತಚಂದನ ಸಾಗಾಣಿಕೆಯನ್ನು ತಡೆಗಟ್ಟಲು ಅಕ್ರಮ ರಕ್ತ ಚಂದನ ಸಾಗಾಣಿಕೆಯಲ್ಲಿ ತೊಡಗಿರುವವರ ವಿರುದ್ಧ ಮಾಹಿತಿಗಳ ಆಧಾರದ ಮೇಲೆ ಕಾನೂನು ರೀತ್ಯಾ ಪ್ರಕರಣಗಳನ್ನು ದಾಖಲಿಸಿಕೊಂಡು, ಅಕ್ರಮವಾಗಿ ಸಾಗಾಣಿಕೆ ಮಾಡುವವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಇಂತಹ ಪ್ರಕರಣಗಳನ್ನು ತಡೆಯಲು ಯಾವುದೇ ಅಡೆತಡೆಗಳು ಇರುವುದಿಲ್ಲ.
ಬೆಂಗಳೂರು ಜಿಲ್ಲೆಯಲ್ಲಿ 2015ನೇ ಸಾಲಿನಿಂದ 2025 (ಫೆಬ್ರವರಿ) ವರೆಗೆ ಒಟ್ಟು 80 ಪ್ರಕರಣಗಳನ್ನು ದಾಖಲಿಸಿದ್ದು. ಈ ಪ್ರಕರಣಗಳಲ್ಲಿ ಒಟ್ಟು 179 ಆರೋಪಿಗಳನ್ನು ಬಂಧಿಸಲಾಗಿರುತ್ತದೆ. ಬಂಧಿತ ಆರೋಪಿತರಿಂದ ಒಟ್ಟು 31835.9 ಕೆ.ಜಿ. ರಕ್ತ ಚಂದನದ ಮರದ ತುಂಡುಗಳನ್ನು ಜಪ್ತಿ ಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಅಂದಾಜು ಮೌಲ್ಯ ರೂ.1,51,19610/- ಗಳಾಗಿರುತ್ತದೆ ಎಂದು ತಿಳಿಸಿದರು.