ಮಂಡ್ಯ : ಇತ್ತೀಚಿಗೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಕಲ್ಲುತೂರಾಟ ಹಾಗೂ ಕೋಮುಗಲಭೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ನಾಗಮಂಗಲಕ್ಕೆ ಭೇಟಿ ನೀಡಲು ಆಗಮಿಸಿದ್ದರು. ಆದರೆ ಮಂಡ್ಯ ಜಿಲ್ಲೆಯ ಗಡಿಯಲ್ಲಿ ಪೊಲೀಸರು ಅವರನ್ನು ತಡೆದಿದ್ದಾರೆ.
ಹೌದು ಮಂಡ್ಯ ಜಿಲ್ಲೆಯ ಗಡಿಯಲ್ಲಿಯೇ ಪ್ರವೇಶಕ್ಕೆ ಬ್ರೇಕ್ ಹಾಕಿರುವ ಪೊಲೀಸರು, ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ನಿಡಘಟ್ಟ ಬಳಿ ತಡೆಡಿದ್ದಾರೆ.ಸದ್ಯ ಗಲಭೆಗೆ ಸಂಬಂಧಪಟ್ಟಂತೆ ಬದ್ರಿಕೊಪ್ಪಲು ಗ್ರಾಮದ ಯುವಕರು ಮಂಡ್ಯದ ಜಿಲ್ಲಾ ಕಾರಾಗೃಹದಲ್ಲಿದ್ದಾರೆ. ಬಂಧಿತ ಯುವಕರನ್ನ ಭೇಟಿ ಮಾಡಲು ಮುತಾಲಿಕ್ ಮುಂದಾಗಿದ್ದರು.
ಆದರೆ ಮುತಾಲಿಕ್ ಆಗಮನಕ್ಕೂ ಮುನ್ನವೇ ಮಂಡ್ಯ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಲಾಗಿತ್ತು.ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಗಡಿಯಲ್ಲಿಯೇ ತಡೆದು ಜಿಲ್ಲೆಗೆ ಪ್ರವೇಶಿಸದಂತೆ ತಾಕೀತು ಮಾಡಿದ್ದಾರೆ.ಇದೇ ವೇಳೆ ಪೊಲೀಸರು ಆದೇಶ ಪತ್ರ ತೋರಿಸಿ ವಾಪಾಸ್ ಕಳುಹಿಸಿದ್ದಾರೆ. ಇದೆ ವೇಳೆ ಟೀ ಕುಡಿಯಲು ಹೋಟೆಲ್ ಗೆ ತೆರಳಲು ಅವಕಾಶ ನಿರಾಕರಿಸಿದ್ದಾರೆ. ಪೊಲೀಸರ ನಡೆಯ ವಿರುದ್ಧ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.