ನವದೆಹಲಿ : ಮುಂಬೈ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿರುವ ಮಹಾರಾಷ್ಟ್ರದಾದ್ಯಂತ ಪ್ರವಾಹ ಪೀಡಿತ ಮತ್ತು ದುರ್ಬಲ ಸ್ಥಳಗಳಿಂದ 3,500 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.
ಸೋಮವಾರದಿಂದ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಮುಂಬೈ ಸೇರಿದಂತೆ ನಗರ ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ಕೆಲವು ನದಿಗಳ ಮಟ್ಟ ವೇಗವಾಗಿ ಏರುತ್ತಿದೆ. ಮುಂಬೈ ಪಾವಾಯಿ ಕೆರೆ ಕೂಡ ಮಂಗಳವಾರ ಸಂಜೆಯಿಂದ ತುಂಬಿ ಹರಿಯಲಾರಂಭಿಸಿದೆ ಎನ್ನಲಾಗುತ್ತಿದೆ.
ಭಾರತೀಯ ಹವಾಮಾನ ಇಲಾಖೆ ‘ರೆಡ್’ ಮತ್ತು ‘ಆರೇಂಜ್’ ಅಲರ್ಟ್ ನೀಡಿದ್ದು, ರಾಯಗಢ, ರತ್ನಾಗಿರಿ ಮತ್ತು ಇತರ ಕೆಲವು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮತ್ತು ಅತ್ಯಂತ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಅಥವಾ ಎನ್ಡಿಆರ್ಎಫ್ನ ತಂಡಗಳನ್ನು ಸೇವೆಗೆ ನಿಯೋಜನೆ ಮಾಡಲಾಗಿದೆ.
ನೂತನ ಮುಖ್ಯಮಂತ್ರಿ ಬೃಹನ್ ಮುಂಬೈ ಮಹಾನಗರ ಪಾಲಿಕೆಯ ವಿಪತ್ತು ನಿಯಂತ್ರಣ ಕಚೇರಿಗೆ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿದ ಅವರು, ಎಲ್ಲಾ ರಕ್ಷಕ ಕಾರ್ಯದರ್ಶಿಗಳಿಗೆ ಆಯಾ ಜಿಲ್ಲೆಗಳಿಗೆ ಭೇಟಿ ನೀಡುವಂತೆ ಮತ್ತು ಎನ್ಡಿಆರ್ಎಫ್, ವಾಯುಪಡೆ, ನೌಕಾಪಡೆ ಮತ್ತು ಇತರ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ನಿರ್ದೇಶಿಸಲು ಮುಖ್ಯ ಕಾರ್ಯದರ್ಶಿಗೆ ಹೇಳಿದೆ ಎಂದು ಶಿಂಧೆ ಹೇಳಿದ್ದಾರೆ.
ಮುಂಬೈ ಮುನ್ಸಿಪಲ್ ಕಮಿಷನರ್ ಇಕ್ಬಾಲ್ ಸಿಂಗ್ ಚಾಹಲ್ ಅವರನ್ನು ಮೇಲ್ವಿಚಾರಣೆಗಾಗಿ ವಾರ್ಡ್ ಅಧಿಕಾರಿಯನ್ನು ನಿಯೋಜಿಸಲು ಆದೇಶಿಸಿದ್ದಾರೆ. ಇನ್ನು ಮಳೆಗೆ ಸಂಕಷ್ಟ ಸಿಲುಕುವ ಪ್ರಯಾಣಿಕರನ್ನು ರಕ್ಷಿಸಲು ರಾಜ್ಯ ಸಾರಿಗೆ ಬಸ್ಗಳನ್ನು ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.