ಬೆಂಗಳೂರು: ರಾಜ್ಯದ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಸರ್ಕಾರ ಘೋಷಿಸಿರುವ ಪ್ರೋತ್ಸಾಹಧನ ಪಾವತಿಸಲು ದಕ್ಷಿಣ ಕರ್ನಾಟಕದ 7 ಸಕ್ಕರೆ ಕಾರ್ಖಾನೆಗಳು ನಿರಾಕರಿಸುತ್ತಿವೆ. ಅಲ್ಲದೆ, ಸರ್ಕಾರವು ತನ್ನ ಪಾಲಿನ ಮೊತ್ತವನ್ನು ರೈತರ ಬ್ಯಾಂಕ್ ಖಾತೆಗಳಿಗೆ ಹಾಕಲು ವಿವರಗಳನ್ನು ಕೇಳಿದರೂ ನೀಡುತ್ತಿಲ್ಲ. ಈ ಮೂಲಕ ಸರ್ಕಾರದ ಆದೇಶವನ್ನೇ ದಕ್ಷಿಣ ಕರ್ನಾಟಕದ 7 ಖಾಸಗಿ ಸಕ್ಕರೆ ಕಾರ್ಖಾನೆಗಳು ಉಲ್ಲಂಘಿಸುತ್ತಿವೆ. ಇವುಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಗ್ಯಾರಂಟಿ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷರು ಹಾಗೂ ಶಾಸಕರಾದ ದಿನೇಶ್ ಗೂಳಿಗೌಡ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿರುವ ಅವರು, ರೈತರಿಗೆ ಸೇರಬೇಕಾದ ಬಾಕಿ ಹಣವನ್ನು ಕೊಡಿಸದಿದ್ದರೆ ಮುಂಬರುವ ಹಂಗಾಮಿನಲ್ಲಿ ಈ ಕಾರ್ಖಾನೆಗಳ ಪರವಾನಗಿ ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ಮನವಿಯಲ್ಲೇನಿದೆ?
2025-26ನೇ ಸಾಲಿನ ಹಂಗಾಮಿನಲ್ಲಿ ರಾಜ್ಯದ ರೈತ ಸಮುದಾಯದ ಆರ್ಥಿಕ ಹಿತದೃಷ್ಟಿಯಿಂದ ಸರ್ಕಾರವು ಘೋಷಿಸಿದ ಪ್ರತಿ ಟನ್ ಕಬ್ಬಿಗೆ 100 ರೂ.ಗಳ ಹೆಚ್ಚುವರಿ ಪ್ರೋತ್ಸಾಹಧನದ ಆದೇಶವು ದಕ್ಷಿಣ ಕರ್ನಾಟಕದ 8 ಖಾಸಗಿ ಕಾರ್ಖಾನೆಗಳ ಹಠಮಾರಿ ಧೋರಣೆ ಮತ್ತು ಕಾನೂನು ಸಂಘರ್ಷದಿಂದಾಗಿ ರೈತರಿಗೆ ತೊಂದರೆಯಾಗಿದೆ . ರಾಜ್ಯದ ಒಟ್ಟು 81 ಕಾರ್ಖಾನೆಗಳ ಪೈಕಿ ಉತ್ತರ ಕರ್ನಾಟಕದ 73 ಕಾರ್ಖಾನೆಗಳು ಸರ್ಕಾರದ ಆದೇಶಕ್ಕೆ ಬದ್ಧವಾಗಿ ರೈತರಿಗೆ ಸಕಾಲದಲ್ಲಿ ಪಾವತಿ ಮಾಡುತ್ತಿದ್ದರೆ, ದಕ್ಷಿಣ ಕರ್ನಾಟಕದ ಮಂಡ್ಯ, ಮೈಸೂರು, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ 7 ಪ್ರಮುಖ ಖಾಸಗಿ ಕಾರ್ಖಾನೆಗಳು ಸರ್ಕಾರದ ಆದೇಶವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿವೆ. ಅಲ್ಲದೆ, ಜಿಲ್ಲಾಡಳಿತಗಳ ಸಭೆ ಮತ್ತು ಸೂಚನೆಗಳನ್ನು ಕಿಂಚಿತ್ತೂ ಲೆಕ್ಕಿಸದೆ, ರೈತರಿಗೆ ಕೊಡಬೇಕಾದ ಹಣವನ್ನು ತಡೆಯುತ್ತಿವೆ. ನಿಮ್ಮ ಮುಂದೆ ಒಪ್ಪಿ ಈಗ ಕಾರ್ಖಾನೆಗಳ ವರ್ತನೆಯು ಸಹನೀಯವಲ್ಲ. ಹೀಗಾಗಿ, ಈ ಕೂಡಲೇ ತಾವು ಮಧ್ಯಪ್ರವೇಶಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ತುರ್ತು ಅಗತ್ಯವಿದೆ.
ಪ್ರಸ್ತುತ ಸ್ಥಿತಿಗತಿ:
1. ಉತ್ತರ ಮತ್ತು ದಕ್ಷಿಣದ ವ್ಯತ್ಯಾಸ: ಪ್ರಸ್ತುತ ಹಂಗಾಮಿನಲ್ಲಿ ರಾಜ್ಯಾದ್ಯಂತ 576.47 ಲಕ್ಷ ಟನ್ ಕಬ್ಬು ಅರೆಯಲಾಗಿದ್ದು, ಉತ್ತರ ಕರ್ನಾಟಕದ ಸಕ್ಕರೆ ಕಾರ್ಖಾನೆಗಳು ಸರ್ಕಾರದ 50 ರೂ. ಮತ್ತು ಕಾರ್ಖಾನೆಯ 50 ರೂ. ಸೇರಿಸಿ ಒಟ್ಟು 100 ರೂ.ಗಳನ್ನು ರೈತರಿಗೆ ಯಶಸ್ವಿಯಾಗಿ ತಲುಪಿಸುತ್ತಿವೆ. ಆದರೆ, ದಕ್ಷಿಣದ 4 ಜಿಲ್ಲೆಗಳ ಈ 7 ಕಾರ್ಖಾನೆಗಳು ಮಾತ್ರ ಸರ್ಕಾರದ ವಿರುದ್ಧ ನಿಂತಿವೆ.
2. ಸರ್ಕಾರದ ಆದೇಶ ಪಾಲನೆ ಮಾಡಿಲ್ಲ: ಸರ್ಕಾರವು ರೈತರ ಹಿತಕ್ಕಾಗಿ ಹೊರಡಿಸಿದ ಆದೇಶವನ್ನು ಪಾಲಿಸುವ ಬದಲು ದಕ್ಷಿಣ ಕರ್ನಾಟಕದ ಖಾಸಗಿ ಕಾರ್ಖಾನೆಗಳು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿವೆ. ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆಯಾದರೂ, ಸರ್ಕಾರದ ಈ ನ್ಯಾಯಯುತ ನಿರ್ಧಾರವನ್ನು ಎಲ್ಲರೂ ಒಪ್ಪಿದ್ದಾರೆ. ಬಹುಪಾಲು ಸಕ್ಕರೆ ಕಾರ್ಖಾನೆಯವರು ಪಾಲನೆ ಮಾಡುತ್ತಿದ್ದಾರೆ. ಆದರೆ, ಈ ಎಂಟು ಕಾರ್ಖಾನೆಯವರು ಮಾತ್ರ ಕೋರ್ಟ್ಗೆ ಹೋಗಿದ್ದಲ್ಲದೆ, ರೈತರಿಗೆ ಸಲ್ಲಬೇಕಾದ ನ್ಯಾಯಯುತ ಹಣವನ್ನು ಸಂದಾಯ ಮಾಡಲು ಮೀನ ಮೇಷ ಮಾಡುತ್ತಿವೆ .
3. ಅಸಹಕಾರ ಮತ್ತು ಮಾಹಿತಿ ನಿರಾಕರಣೆ: ಸರ್ಕಾರವು ತನ್ನ ಪಾಲಿನ 50 ರೂ.ಗಳನ್ನಾದರೂ ರೈತರ ಖಾತೆಗಳಿಗೆ ನೇರವಾಗಿ ಹಾಕಲು ಸಿದ್ಧವಿದ್ದರೂ, ಈ ಕಾರ್ಖಾನೆಗಳು ಕಬ್ಬು ಸರಬರಾಜು ಮಾಡಿದ ರೈತರ ಪಟ್ಟಿ ಹಾಗೂ ಅವರ ಬ್ಯಾಂಕ್ ಖಾತೆ ವಿವರಗಳನ್ನು ನೀಡದೆ ಜಿಲ್ಲಾಧಿಕಾರಿಗಳ ಕಛೇರಿಯ ಕಾರ್ಯವೈಖರಿಗೆ ಅಡ್ಡಿಪಡಿಸುತ್ತಿವೆ.
4. ಜಿಲ್ಲಾಡಳಿತಕ್ಕೂ ಸ್ಪಂದಿಸದ ಕಾರ್ಖಾನೆಗಳು: ಮೈಸೂರು, ಮಂಡ್ಯ, ಹಾಸನ ಮತ್ತು ಚಾಮರಾಜನಗರದ ಜಿಲ್ಲಾಧಿಕಾರಿಗಳು ಈ ಕಾರ್ಖಾನೆಗಳ ಮೇಲೆ ಒತ್ತಡ ಹೇರಿದರೂ, ಮಾಲೀಕರು ಸರ್ಕಾರದ ಆದೇಶಕ್ಕೆ ಬೆಲೆ ನೀಡುತ್ತಿಲ್ಲ. ಈಗಾಗಲೇ ಮೈಸೂರು ಮತ್ತು ಮಂಡ್ಯ ಜಿಲ್ಲಾಧಿಕಾರಿಗಳು ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿ, ರೈತರ ಖಾತೆಗಳಿಗೆ ನೇರವಾಗಿ ಹಣ ಜಮೆ ಮಾಡಲು ಅನುಮತಿ ಕೋರಿರುವುದು ಸಮಸ್ಯೆಯ ತೀವ್ರತೆಯನ್ನು ತೋರಿಸುತ್ತದೆ.
ಇಂಥ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಅನಿವಾರ್ಯ
* ಲೈಸೆನ್ಸ್ ರದ್ದುಗೊಳಿಸಿ: ರೈತರಿಗೆ ಬಾಕಿ ನೀಡದ ಹಾಗೂ ಸರ್ಕಾರದ ನಿಯಮ ಪಾಲಿಸದ ಈ 7 ಕಾರ್ಖಾನೆಗಳ ‘ಕ್ರಶಿಂಗ್ ಲೈಸೆನ್ಸ್’ ಅನ್ನು ಮುಂಬರುವ ಹಂಗಾಮಿಗೆ ನವೀಕರಿಸಬಾರದು.
* ತ್ವರಿತ ಕಾನೂನು ಹೋರಾಟ: ಸರ್ಕಾರವು ಹೈಕೋರ್ಟ್ನಲ್ಲಿರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ಅಡ್ವೊಕೇಟ್ ಜನರಲ್ ಅವರ ಮೂಲಕ ಬಲವಾದ ವಾದ ಮಂಡಿಸಬೇಕು.
* ಕಠಿಣ ಎಚ್ಚರಿಕೆ: ಮುಂಗಾರು ಹಂಗಾಮು ಆರಂಭವಾಗುವ ಮುನ್ನವೇ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಈ ಕಾರ್ಖಾನೆ ಮಾಲೀಕರ ತುರ್ತು ಸಭೆ ಕರೆದು, ರೈತರ ಹಣ ಬಿಡುಗಡೆ ಮಾಡದಿದ್ದರೆ ಕಾರ್ಖಾನೆಗಳನ್ನು ಸರ್ಕಾರದ ವಶಕ್ಕೆ ಪಡೆಯುವ ಬಗ್ಗೆ ಎಚ್ಚರಿಕೆ ನೀಡಬೇಕು.
ಸರ್ಕಾರದ ಆದೇಶ ಉಲ್ಲಂಘಿಸುತ್ತಿರುವ ದಕ್ಷಿಣ ಕರ್ನಾಟಕದ 7 ಸಕ್ಕರೆ ಕಾರ್ಖಾನೆಗಳು
1. ಬನ್ನಾರಿ ಅಮ್ಮನ್ ಶುಗರ್ಸ್, ಕುಂತೂರು, ಕೊಳ್ಳೇಗಾಲ ತಾಲೂಕು, ಚಾಮರಾಜನಗರ ಜಿಲ್ಲೆ
2. ಚಾಮುಂಡೇಶ್ವರಿ ಶುಗರ್ಸ್ ಲಿ. ಚನ್ನರಾಯಪಟ್ಟಣ, ಹಾಸನ ಜಿಲ್ಲೆ
3. ಕೋರಮಂಡಲ ಶುಗರ್ಸ್, ಕೆ.ಆರ್.ಪೇಟೆ ತಾಲೂಕು, ಮಂಡ್ಯ ಜಿಲ್ಲೆ
4. ಚಾಮುಂಡೇಶ್ವರಿ ಶುಗರ್ಸ್ ಲಿ. ಮದ್ದೂರು ತಾಲೂಕು, ಮಂಡ್ಯ ಜಿಲ್ಲೆ
5. ಎಂಆರ್ ಎನ್ ಕೇನ್ ಪವರ್ ಅಂಡ್ ಬೈಯೋರಿಪೈನರಿಸ್ ಪ್ರೈ.ಲಿ. ಪಾಂಡವಪುರ ತಾಲೂಕು, ಮಂಡ್ಯ ಜಿಲ್ಲೆ
6. ಎನ್ ಎಸ್ ಎಲ್ ಶುಗರ್ಸ್ ಲಿ. ಮದ್ದೂರು ತಾಲೂಕು, ಮಂಡ್ಯ ಜಿಲ್ಲೆ
7. ಬನ್ನಾರಿ ಅಮ್ಮನ್ ಶುಗರ್ಸ್ ಲಿ. ನಂಜನಗೂಡು ತಾಲೂಕು, ಮೈಸೂರು ಜಿಲ್ಲೆ
ಕೃಷಿ ಪ್ರಧಾನವಾದ ನಮ್ಮ ರಾಜ್ಯದಲ್ಲಿ ಬೆಳೆಗಾರರ ಹಿತ ಕಾಯುವುದು ಸರ್ಕಾರದ ಆದ್ಯತೆಯಾಗಿದ್ದು, ಈ ದಕ್ಷಿಣ ಭಾಗದ 7 ಕಾರ್ಖಾನೆಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಶಾಸಕ ದಿನೇಶ್ ಗೂಳಿಗೌಡ ಮನವಿ ಮಾಡಿದ್ದಾರೆ.
BIG NEWS: ಪೈಲಟ್ ಎಡವಟ್ಟು, ಡಿಕೆಶಿ ಲ್ಯಾಂಡ್ ಆಗಬೇಕಿದ್ದ ಕಡೆ ಇಳಿದ ನಟ ಕಿಚ್ಚ ಸುದೀಪ್ ಹೆಲಿಕಾಪ್ಟರ್!
ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : `ಹಾಜರಾತಿ’ ಬಗ್ಗೆ ಇಲ್ಲಿದೆ ಬಿಗ್ ಅಪ್ ಡೇಟ್.!








