ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನಲ್ಲಿ ಸರ್ಕಾರಿ ಭೂಮಿ, ಕಾಡುಗಳನ್ನು ಕಡಿದು ಕೃಷಿಗಾಗಿ ಭೂಮಿ ಒತ್ತುವರಿ ಮಾಡಲಾಗುತ್ತಿದೆ. ಇದನ್ನು ನಿಯಂತ್ರಿಸೋ ಕ್ರಮ ವಹಿಸಬೇಕು. ಸರ್ಕಾರಿ ಭೂಮಿ ಒತ್ತುವರಿಯಾದ್ರೆ ನಾನು ಸುಮ್ಮನಿರಲ್ಲ ಅಂತ ವಿಎಗಳಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಇಂದು ಸಾಗರ ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕು ಪ್ರಗತಿ ಪರಿಶೀಲನಾ ಸಭೆಯನ್ನು ಕಂದಾಯ ಇಲಾಖೆಯ ವಿಎಗಳೊಂದಿಗೆ ನಡೆಸಿದರು. ತಾಲೂಕಿನಲ್ಲಿ ಎಕರೆಗಟ್ಟಲೆ ಒತ್ತುವರಿಗೆ ಅವಕಾಶ ನೀಡಬಾರದು. ಒಂದು ವೇಳೆ ಹಾಗೆ ಒತ್ತುವರಿ ಮಾಡಿದ್ರೆ ಅಂತವರ ವಿರುದ್ಧ ದೂರು ದಾಖಲಿಸಿ, ಕೇಸ್ ಹಾಕುವಂತೆ ಸೂಚಿಸಿದರು.
ನಾಡಕಲಸಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 48 ಎಕರೆ ಒತ್ತುವರಿ ತೆರವುಗೊಳಿಸಿ
ನಾಡಕಲಸಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತ್ಯಾಗರ್ತಿ ಬಳಿ 48 ಎಕರೆ ಸರ್ಕಾರಿ ಜಮೀನು ಒತ್ತುವರಿಯಾಗಿದೆ. ಈ ಭೂಮಿಯನ್ನು ಗೋಶಾಲೆಗೆ ಮೀಸಲಿರಿಸಿದಂತ ಜಮೀನಾಗಿದೆ. ಈ ಕೂಡಲೇ 48 ಎಕರೆ ಒತ್ತುವರಿ ಜಮೀನು ತೆರವುಗೊಳಿಸಬೇಕು. ತ್ಯಾಗರ್ತಿ ಸಮೀಪದಲ್ಲಿ ಗೋಶಾಲೆ ನಿರ್ಮಾಣ ಮಾಡಲು ಆದೇಶ ಮಾಡಬೇಕು ಎಂಬುದಾಗಿ ತಹಶೀಲ್ದಾರರಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಸೂಚಿಸಿದರು.
ಸಮನ್ವಯತೆಯಿಂದ ಕೆಲಸ ಮಾಡಬೇಕು
ಸಾಗರ ತಾಲೂಕಿನ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ವೈಲ್ಡ್ ಲೈಫ್ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಜೊತೆಗೂಡಿ ಕೆಲಸ ಮಾಡಬೇಕು. ಸಮನ್ವಯತೆಯಿಂದ ಒಟ್ಟಾಗಿ ಕೆಲಸ ಮಾಡಬೇಕು ಎಂದರು.
ಅಧಿಕಾರಿಗಳ ಮೇಲೆ ಹಲ್ಲೆ ಸಹಿಸುವುದಿಲ್ಲ
ನಾನು ನಮ್ಮ ಅಧಿಕಾರಿಗಳ ಮೇಲೆ ಹಲ್ಲೆ ಮಾಡುವುದನ್ನು ಸಹಿಸುವುದಿಲ್ಲ. ಹಾಗಂತ ಅಕ್ರಮದಲ್ಲಿ ತೊಗಿದ್ದು ನನಗೆ ಗೊತ್ತಾದ್ರೆ ಸುಮ್ಮನಿರುವ ಮನುಷ್ಯ ನಾನಲ್ಲ ಅಂತ ಅಧಿಕಾರಿಗಳು, ಸಾರ್ವಜನಿಕರಿಗೆ ಎಚ್ಚರಿಕೆಯನ್ನು ಶಾಸಕ ಬೇಳೂರು ಗೋಪಾಲಕೃಷ್ಣ ನೀಡಿದರು.
ಮಳೆಹಾನಿ ಪ್ರದೇಶಗಳಿಗೆ ತಕ್ಷಣವೇ ಹೋಗಿ
ಮಳೆಹಾನಿ ಪ್ರದೇಶಗಳಿಗೆ ತಕ್ಷಣವೇ ಹೋಗಬೇಕು. ಸ್ಥಳ ಮಹಜರ್ ಮಾಡಿ ಕೂಡಲೇ ಸಂತ್ರಸ್ತರಿಗೆ ಪರಿಹಾರ ನೀಡುವ ಕ್ರಮ ಕೈಗೊಳ್ಳಬೇಕು. ಪಿಡಿಓಗಳಿಗೆ ಈಗಾಗಲೇ ಮನೆಯಿಂದ ಮನೆಗೆ ಹಾನಿಯಾದ್ರೇ 10,000 ಕೊಡುವಂತೆ ಸೂಚಿಸಲಾಗಿದೆ. ಮಳೆಯಿಂದ ಮನೆ ಹಾನಿಯಾದ್ರೇ ಸರಿಯಾದ ರೀತಿಯ ವರದಿ ನೀಡಬೇಕು. ಆದಷ್ಟು ಸರಿಯಾಗಿ ಪರಿಹಾರ ನೀಡುವ ಕ್ರಮವಾಗಬೇಕು ಎಂಬುದಾಗಿ ವಿಎಗಳಿಗೆ ಸೂಚಿಸಿದರು.
ಸೂರನಗದ್ದೆ ಜಗದೀಶ್ ವಿರುದ್ಧ ಕ್ರಿಮಿನಲ್ ಕೇಸ್ ಬುಕ್ ಮಾಡಿ
ಸೂರನಗದ್ದೆ ಜಗದೀಶ್ ಎಂಬುವರು ಕಾಡು ಒತ್ತುವರಿ ಮಾಡಿ ಅಕ್ರಮವಾಗಿ ಬೇಲಿ ಹಾಕಲಾಗಿದೆ. ಈಗಾಗಲೇ ಬೇಲಿ ಹಾಕಿದಂತ ವೇಳೆಯಲ್ಲಿ ತೆರವುಗೊಳಿಸಲಾಗಿತ್ತು. ಈಗ ಮತ್ತೆ ಬೇಲಿ ತೆರವುಗೊಳಿಸಿದ್ರೂ ಮತ್ತೆ ಹಾಕಿದ್ದಾರೆ ಎಂಬುದಾಗಿ ವಿಎಗಳು ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಗಮನಕ್ಕೆ ತಂದರು.
ಪದೇ ಪದೇ ಅಕ್ರಮವಾಗಿ ಒತ್ತುವರಿ ಮಾಡುತ್ತಿರುವಂತ ಸೂರನಗದ್ದೆ ಜಗದೀಶ್ ವಿರುದ್ಧ ಕ್ರಿಮಿನಲ್ ಕೇಸ್ ಬುಕ್ ಮಾಡುವಂತೆ ತಹಶೀಲ್ದಾರ್ ಗೆ ತಿಳಿಸಿದರು. ಪೊಲೀಸರಿಗೆ ಸೂಚಿಸಿ, ತಕ್ಷಣವೇ ಈ ಕ್ರಮವಾಗಬೇಕು ಅಂತ ಖಡಕ್ ಆದೇಶವನ್ನು ಇಂದಿನ ಕಂದಾಯ ಇಲಾಖೆಯ ವಿಎಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಡಿದರು.
ಭೂ ಒತ್ತುವರಿ ಸ್ಕ್ವಾಡ್ ರಚನೆಗೆ ಆಗ್ರಹ
ಈಗಾಗಲೇ ಇಂಧನ ಇಲಾಖೆ ಸೇರಿದಂತೆ ಇತರೆ ಇಲಾಖೆಯಲ್ಲಿ ವಿಜ್ಯುಲೆನ್ಸ್ ಟೀಂ ಪ್ರತ್ಯೇಕವಾಗಿದೆ. ಆದ್ರೇ ಭೂಮಿ ಒತ್ತುವರಿ ಸಂಬಂಧ ಒತ್ತುವರಿ ತೆರವು ಸ್ಕ್ವಾಡ್ ಇಲ್ಲ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕಂದಾಯ ಸಚಿವ ಕೃಷ್ಣಭೈರೇಗೌಡ ಅವರೊಂದಿಗೆ ಚರ್ಚಿಸಲಾಗಿದೆ. ಪ್ರತ್ಯೇಕವಾಗಿ ಭೂಮಿ ಒತ್ತುವರಿ ಸ್ಕ್ವಾಡ್ ರಚಿಸೋದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಮುಂಬರುವಂತ ವಿಧಾನಮಂಡಲದ ಅಧಿವೇಶನದಲ್ಲೂ ಈ ಬಗ್ಗೆ ಮಾತನಾಡುತ್ತೇನೆ ಎಂಬುದಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು.
ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಬನ್ನಿ
ಸಾಗರದ ಮಿನಿ ವಿಧಾನಸೌಧದಲ್ಲಿನ ಕಂದಾಯ ಇಲಾಖೆ ಕಚೇರಿಗೆ ಸರಿಯಾದ ಸಮಯಕ್ಕೆ ಅಧಿಕಾರಿ, ಸಿಬ್ಬಂದಿಗಳು ಬರಬೇಕು. ಜನರ ಕೆಲಸ ತ್ವರಿತವಾಗಿ ಆಗಬೇಕು. ಸರ್ಕಾರದ ಕೆಲಸ ದೇವರ ಕೆಲಸದಂತೆ ಮಾಡಬೇಕು ಎಂಬುದಾಗಿ ಹೇಳಿದರು.
ಮಳೆಗಾಲ ಮುಗಿಯುವವೆಗೂ ಯಾರಿಗೂ ರಜೆ ಇಲ್ಲ
ಮಳೆಗಾಲ ಆರಂಭಗೊಂಡಿದೆ. ಅಲ್ಲಲ್ಲಿ ಮಳೆಯಿಂದ ಹಾನಿಗಳು ಉಂಟಾಗುತ್ತಿವೆ. ವಿಎಗಳು ಮನೆಹಾನಿ, ಕೊಟ್ಟಿಗೆ ಹಾನಿಯಂತ ಸಂದರ್ಭದಲ್ಲಿ ತ್ವರಿತ ಮಾಹಿತಿ ನೀಡಿ, ಪರಿಹಾರದ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಕ್ರಮವಹಿಸೋ ಕಾರಣ ಮಳೆಗಾಲ ಮುಗಿಯುವವರೆಗೂ ಯಾರಿಗೂ ರಜೆ ಇಲ್ಲ. ಯಾರಿಗೂ ರಜೆ ಹಾಕೋದಕ್ಕೆ ಅವಕಾಶವಿಲ್ಲ ಎಂದರು.
ವರದಿ: ವಸಂತ ಬಿ ಈಶ್ವರಗೆರೆ
BIG NEWS: ಸದ್ಯಕ್ಕೆ ‘ಸ್ಯಾಂಡಲ್ ವುಡ್’ನಿಂದ ‘ನಟ ದರ್ಶನ್’ ನಿಷೇಧವಿಲ್ಲ: ಎನ್.ಎಂ ಸುರೇಶ್ ಸ್ಪಷ್ಟನೆ
ರಾಜ್ಯದ ಜನತೆಗೆ ಗುಡ್ ನ್ಯೂಸ್: ಶೀಘ್ರವೇ ಹೊಸದಾಗಿ ‘254 ನಮ್ಮ ಕ್ಲಿನಿಕ್’ ಆರಂಭ