ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ತ್ಯಾಗರ್ತಿ ಭಾಗದಲ್ಲಿ ಬಹುಕಾಲದ ಬೇಡಿಕೆಯಾಗಿದ್ದ 110 ಕೆವಿ ವಿದ್ಯುತ್ ಗ್ರಿಡ್ ನಿರ್ಮಾಣ ಕಾಮಗಾರಿಗೆ ಪದೇ ಪದೇ ಅಡ್ಡಿಪಡಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ಸೋಮಶೇಖರ್ ಲಾವಿಗೆರೆ ನೇತೃತ್ವದಲ್ಲಿ ಮೂರು ಪಂಚಾಯತಿಗಳ ರೈತರು ಇಂದು ಬೃಹತ್ ಪ್ರತಿಭಟನೆ ನಡೆಸಿದರು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ತ್ಯಾಗರ್ತಿಯಿಂದ ಗ್ರಿಡ್ ಬಳಿಯವರೆಗೆ ಬೈಕ್ ಜಾಥಾ ನಡೆಸಿದರು. ಸಾಗರ ಉಪವಿಭಾಗದ ಎಸಿ (AC) ಅವರು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು. ಈ ವೇಳೆ ಮಾತನಾಡಿದಂತ ಅವರು, ಸಾಗರ ತಾಲೂಕಿನ ತ್ಯಾಗರ್ತಿ ಸುತ್ತಮುತ್ತಲಿನ ಮೂರು ಪಂಚಾಯತಿಗಳ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ನೀಗಿಸಲು ಕೈಗೆತ್ತಿಕೊಂಡಿರುವ 110 ಕೆವಿ ಗ್ರಿಡ್ ಕಾಮಗಾರಿಗೆ ಸತತವಾಗಿ ಅಡ್ಡಿಪಡಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಕಾಮಗಾರಿಯು ಈ ಭಾಗದ ರೈತರ ಪಾಲಿಗೆ ಅತ್ಯಂತ ಅವಶ್ಯಕವಾಗಿದ್ದು, ಪದೇ ಪದೇ ಕಿಡಿಗೇಡಿಗಳು ವಿನಾಕಾರಣ ತೊಂದರೆ ನೀಡುತ್ತಿರುವುದನ್ನು ತೀವ್ರವಾಗಿ ಖಂಡಿಸಿದರು.
ಇತ್ತೀಚೆಗೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಜೆಸಿಬಿ ಚಾಲಕರು ಹಾಗೂ ಗುತ್ತಿಗೆದಾರರ ಪರವಾಗಿ ಬಂದಿದ್ದ ಕಾರ್ಮಿಕರ ಮೇಲೆ ಕಿಡಿಗೇಡಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದು, ಪ್ರಸ್ತುತ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾಧಿಕಾರಿಗಳೇ ಈ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಲು ಮತ್ತು ಗುತ್ತಿಗೆದಾರರಿಗೆ ಭದ್ರತೆ ನೀಡಲು ಆದೇಶಿಸಿದ್ದರೂ ಸಹ, ಇಂತಹ ಅಹಿತಕರ ಘಟನೆಗಳು ನಡೆಯುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಹಲ್ಲೆ ನಡೆಸಿದ ಕಿಡಿಗೇಡಿಗಳನ್ನು ತಕ್ಷಣವೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಕೆಪಿಟಿಸಿಎಲ್ ಅಧಿಕಾರಿಗಳು ಕರ್ತವ್ಯ ಲೋಪದಡಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ತ್ಯಾಗರ್ತಿ ಭಾಗದಲ್ಲಿ ವಿದ್ಯುತ್ ಸಮಸ್ಯೆಯಿಂದಾಗಿ ರೈತರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಭಾರಿ ತೊಂದರೆಯಾಗುತ್ತಿದೆ. ಈ ಗ್ರಿಡ್ ನಿರ್ಮಾಣವಾದರೆ ಶೇ.90ರಷ್ಟು ಸಮಸ್ಯೆಗಳು ಬಗೆಹರಿಯಲಿದ್ದು, ಇದರಿಂದ ರೈತರ ಬಾಳಿಗೆ ಶಕ್ತಿ ಬರಲಿದೆ. ಈ ನಿಟ್ಟಿನಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಸಹ ಹಲವು ಬಾರಿ ಸಭೆಗಳನ್ನು ನಡೆಸಿ ಕಾಮಗಾರಿ ಸುಗಮವಾಗಿ ನಡೆಯಲು ಸಹಕರಿಸಿದ್ದಾರೆ. ಒಂದು ವೇಳೆ ಮುಂದಿನ ಎರಡು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಅಥವಾ ಅಡ್ಡಿಪಡಿಸುವವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಸೋಮಶೇಖರ ಲಾವಿಗೇರೆ ಎಚ್ಚರಿಸಿದರು.
ಈ ಭಾಗದ ವಿದ್ಯುತ್ ಸಮಸ್ಯೆಯನ್ನು ನೀಗಿಸಲು ಸರ್ಕಾರ ಕೈಗೆತ್ತಿಕೊಂಡಿರುವ ಗ್ರಿಡ್ ಕಾಮಗಾರಿಯನ್ನು ಕೆಲವೇ ಕೆಲವು ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ತಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಸಮೀಪದ ಕೊಪ್ಪ ನಾರಗೋಡು ಗ್ರಾಮದಲ್ಲಿ ತ್ಯಾಗರ್ತಿ ವಿದ್ಯುತ್ ಗ್ರಿಡ್ ಕಾಮಗಾರಿಗೆ ಲೈನ್ ಸಂಪರ್ಕಕ್ಕೆ ಅಡ್ಡಿ ಪಡಿಸಿದ ಕಿಡಿಗೇಡಿಗಳನ್ನು ಬಂಧಿಸಿ ಶೀಘ್ರ ಕಾಮಗಾರಿ ಮುಗಿಸಲು ಆಗ್ರಹಿಸಿ ಮಂಗಳವಾರ ಹಿರೇಬಿಲಗುಂಜಿ, ಬರೂರು ,ತ್ಯಾಗರ್ತಿ ಗ್ರಾಮದ ರೈತರು ನಡೆಸಿದ ಪ್ರತಿಭಟನಾ ಸಭೆಗೆ ಆಗಮಿಸಿ ರೈತರ ಆಹ್ವಾಲು ಸ್ವೀಕರಿಸಿ ಮಾತನಾಡಿದ ಸಾಗರ ಎಸಿ ವೀರೇಶ್ ಕುಮಾರ್ ಅವರು ಗ್ರಿಡ್ ಕಾಮಗಾರಿಯಿಂದ ತೊಂದರೆ ಆದರೆ ಕಾನೂನು ಚೌಕಟ್ಟಿನಲ್ಲಿ ಬಗೆಹರಿಸಲು ಅವಕಾಶ ಇದೆ ಅದನ್ನು ಬಿಟ್ಟು ಗುಂಪು ಕಟ್ಟಿಕೊಂಡು ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ ಕ್ರಮ ಸರಿಯಲ್ಲ ಕಾರ್ಮಿಕರ ಜೀವ ಹಾನಿಯಾದರೆ ಯಾರು ಹೊಣೆ ಹೊರಬೇಕು. ಹಲ್ಲೆ ಮಾಡಿದವರಿಗೆ ಕಾನೂನು ರೀತಿಯಲ್ಲಿ ಶಿಕ್ಷೆ ಆಗಬೇಕು ಪೋಲೀಸ್ ಇಲಾಖೆಯವರು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.
ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕೆ ಎಲ್ಲರ ಸಹಕಾರ ಮುಖ್ಯವಾಗಿದೆ. ಮುಂದಿನ ದಿನಗಳಲ್ಲಿ ಕಾಮಗಾರಿ ಸ್ಥಳದಲ್ಲಿ ಪೋಲೀಸ್ ಬಂದೋಬಸ್ತ್ ನಿಯೋಜಿಸಲಾಗುತ್ತದೆ ಇನ್ನೆರಡು ತಿಂಗಳಲ್ಲಿ ಗ್ರಿಡ್ ಕೆಲಸವನ್ನು ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದರು.
ತ್ಯಾಗರ್ತಿ ಮೆಸ್ಕಾಂ ಕಚೇರಿಯಿಂದ ಗ್ರಿಡ್ ಸಂಪರ್ಕ ಕಾಮಗಾರಿ ಸ್ಥಳಕ್ಕೆ ನೂರಾರು ರೈತರು ಬೈಕ್ ರ್ಯಾಲಿ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿದರು. ಗ್ರಿಡ್ ಕಾರ್ಮಿಕರ ಮೇಲೆ ಹಲ್ಲೆ ಮಾಡಿದ ಆರು ಜನರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಈ ಸಂದರ್ಭದಲ್ಲಿ ಪ್ರಮುಖರಾದ ಇಡುವಳ್ಳಿ ಚರ್ಚ್ ಧರ್ಮಗುರು ಥಾಮಸ್, ಭೂನ್ಯಾಯ ಮಂಡಳಿ ಸದಸ್ಯ ಬಿ ಎಸ್ ವೀರೇಶ್, ಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಚೇತನ್ ರಾಜ್ ಕಣ್ಣೂರು, ಹಮೀದ್ ಖಾನ್, ಎಲ್ ಆರ್ ವೀರಪ್ಪ, ಕುಮಾರ್ ಗೌಡ, ಕನ್ನಪ್ಪ ಮುಳುಕೆರೆ, ಜಾನ್, ಕಿರಣ್ ದೊಡ್ಮನೆ, ಕೆಪಿಟಿಸಿಎಲ್ ಸೂಪರಿಂಟೆಂಡೆಂಟ್ ಇಂಜಿನಿಯರ್ ಸುರೇಶ್, ಎಕ್ಸಿಕ್ಯೂಟಿವ್ ಇಂಜಿನಿಯರ್ ರಘು, ಮೆಸ್ಕಾಂ ಶಾಖಾ ಅಧಿಕಾರಿ ಇಂದಿರೇಶ್, ಗ್ರಾಮಾಂತರ ಎಸ್ ಐ ಸಂತೋಷ್ ಶೆಟ್ಟಿ, ಆನಂದಪುರ ಪಿಎಸ್ಐ ಪ್ರವೀಣ್ ಸೇರಿದಂತೆ ಇತರರು ಉಪಸ್ಥಿತರಿದ್ದರು.








