ಮಂಗಳೂರು : ಮಹಿಳೆಯೊಬ್ಬರಿಗೆ ಯಾರೋ ಮಾಟ, ಮಂತ್ರ ಮಾಡಿಸಿದ್ದಾರೆಂದು ನಂಬಿಸಿ, ಚಿಕಿತ್ಸೆಯ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ್ದು ಅಲ್ಲದೇ 1 ಲಕ್ಷ ರೂ.ಗಳನ್ನು ಪಡೆದು ವಂಚಿಸಿದ ಆರೋಪದಲ್ಲಿ ಕೂಳೂರು ಉಸ್ತಾದ್, ಗುರುವಾಯನಕೆರೆಯ ನಿವಾಸಿ ಜಿ. ಅಬ್ದುಲ್ ಕರೀಮ್ನನ್ನು ಮಂಗಳೂರು ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ.
2022ರಲ್ಲಿ ಸಂತ್ರಸ್ತೆಗೆ ಖಿನ್ನತೆಯ ಸಮಸ್ಯೆ ಉಂಟಾಗಿದ್ದು, ಆಕೆ ತನ್ನ ಅಕ್ಕನ ಗಂಡನ ಸಲಹೆಯಂತೆ ಆಗ ಹೆಜಮಾಡಿಯಲ್ಲಿದ್ದ ಉಸ್ತಾದ್ ಅಬ್ದುಲ್ ಕರೀಮ್ ಮನೆಗೆ ಹೋಗಿದ್ದರು. ಅಲ್ಲಿ ಕೂಳೂರು ಉಸ್ತಾದ್ ಎಂಬ ಹೆಸರಿನ ಈ ಅಬ್ದುಲ್ ಕರೀಮ್ ಎಂಬಾತ ಮಹಿಳೆಯನ್ನು ನೋಡಿ ನಿಮಗೆ ಯಾರೋ ಮಾಟ ಮಂತ್ರ ಮಾಡಿಸಿದ್ದಾರೆ ಎಂದು ನಂಬಿಸಿ ಅದನ್ನು ತೆಗೆಸಬೇಕು ಎಂದು ಹೇಳಿದನೆನ್ನಲಾಗಿದೆ.
ಮಾಟ ಮಂತ್ರ ನಿವಾರಿಸುವ ಚಿಕಿತ್ಸೆ ಕೊಡುತ್ತೇನೆ ಎಂದು ನಂಬಿಸಿ ಆ ಮಹಿಳೆಯನ್ನು ಆಗಾಗ ಬರಲು ತಿಳಿಸಿದ್ದಾನೆ ಈ ಅಬ್ದುಲ್ ಕರೀಮ್. ಮಹಿಳೆ ತನ್ನ ಅಕ್ಕನ ಜೊತೆ ಈ ವ್ಯಕ್ತಿ ಬಳಿ ಹಲವು ಬಾರಿ ಹೋಗಿದ್ದಾರೆ. ಅಲ್ಲಿ ಈತ ಕೆಲವು ಬಾರಿ ಮಹಿಳೆಗೆ ಕುರ್ಆನ್ ಓದಿಸಿರುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆಕೆ ಹೇಳಿದ್ದಾರೆ.
2022ರ ಫೆ. 10ರಂದು ಸಂತ್ರಸ್ತೆಯ ಅಕ್ಕನಿಗೆ ಕೆಲಸ ಇದ್ದ ಕಾರಣ ಸಂತ್ರಸ್ತೆ ಒಬ್ಬಳೇ ಹೆಜಮಾಡಿ ಮನೆಗೆ ಹೋಗಿದ್ದು, ಅಲ್ಲಿ ಉಸ್ತಾದ್ ಆಕೆಯಲ್ಲಿ ಕುರಾನ್ ಓದಿಸಿ ಆಕೆಯ ಮೈಮುಟ್ಟಿ ಕಿರುಕುಳ ನೀಡಿದ್ದ. ಅಲ್ಲದೆ ಮಹಿಳೆಯಿಂದ 55 ಸಾವಿರ ರೂ. ಪಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಒಟ್ಟು ಸುಮಾರು ಒಂದು ಲಕ್ಷ ರೂ. ಪಡೆದು ವಂಚಿಸಿದ್ದಾನೆ ಎಂದು ಮಹಿಳೆ ದೂರಿದ್ದಾರೆ.
ಈ ವ್ಯಕ್ತಿ ಇದೇ ರೀತಿ ಮಾಟ ಮಂತ್ರ ನಿವಾರಿಸುವ ಉಸ್ತಾದ್ ಎಂಬ ಸೋಗಿನಲ್ಲಿ ಇನ್ನೂ ಹಲವರಿಗೆ ವಂಚಿಸಿರುವ ಹಾಗೂ ಕಿರುಕುಳ ನೀಡಿರುವ ಬಗ್ಗೆ ದೂರುಗಳಿವೆ ಎಂದು ತಿಳಿದು ಬಂದಿದೆ. ಕುಟುಂಬಕ್ಕೆ ಮಾಟ ಮಂತ್ರದಿಂದ ಮುಕ್ತಿ ಸಿಗಲು ತಾನು ಹೇಳಿದಂತೆ ಮಾಡಬೇಕು ಎಂದು ಅವರನ್ನು ಮೌಢ್ಯದಲ್ಲಿ ಮುಳುಗಿಸಿ ಅವರನ್ನು ವಂಚಿಸುತ್ತಿದ್ದ ಈ ವ್ಯಕ್ತಿ ಅವರಿಗೆ ದೈಹಿಕವಾಗಿಯೂ ಕಿರುಕುಳ ನೀಡಿದ್ದಾನೆ ಎಂದು ತಿಳಿದು ಬಂದಿದೆ.