ಮಂಡ್ಯ : ಮದ್ದೂರು ನಗರ ವ್ಯಾಪ್ತಿಯಲ್ಲಿ ಬೆಂಗಳೂರು ಮಾದರಿಯ ಉದ್ಯಾನಗಳ ಅಭಿವೃದ್ಧಿ, ನಗರವನ್ನು ಸುಂದರ ಹಾಗೂ ಹಸಿರೀಕರಣ, ಸುಸಜ್ಜಿತ ಮಾರುಕಟ್ಟೆ, ಮದ್ದೂರು, ಸೋಮನಹಳ್ಳಿ ಕೆರೆಗಳ ಅಭಿವೃದ್ಧಿ ಹಾಗೂ ವಿದ್ಯುತ್ ಚಿತಾಗಾರ ನಿರ್ಮಾಣ ಸೇರಿದಂತೆ ಈ ಬಾರಿಯ ಮದ್ದೂರು ನಗರಸಭೆ ಬಜೆಟ್ 2025–26ರಲ್ಲಿ ಆದ್ಯತೆ ನೀಡಲಾಗಿದೆ.
ನಗರಸಭೆಯ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಧಿಕಾರಿ ಹಾಗೂ ಆಡಳಿತಾಧಿಕಾರಿ ಡಾ.ಕುಮಾರ ಅವರು 2025-26 ನೇ ಸಾಲಿನ ಪರಿಷ್ಕೃತ ಹಾಗೂ 2026-27 ನೇ ಸಾಲಿನ ಅಂದಾಜು ಬಜೆಟ್ ಮಂಡಿಸಿದರು.
ಆರಂಭಿಕ ಶಿಲ್ಕು 8.63 ಕೋಟಿ ಹಾಗೂ 2025 -26 ನೇ ಸಾಲಿಗೆ ನಗರಸಭೆಯ ಸ್ವಂತ ಸಂಪನ್ಮೂಲಗಳಿಂದ ನಿರೀಕ್ಷಿತ ಆದಾಯ 15.88 ಕೋಟಿ ಹಾಗೂ ಕೇಂದ್ರದ ಅನುದಾನ 18.95 ಕೋಟಿ ಮತ್ತು ರಾಜ್ಯ ಸರ್ಕಾರದಿಂದ 75 ಕೋಟಿ ನಿರೀಕ್ಷಿತ ಅನುದಾನ ಸೇರಿ ಒಟ್ಟು 120.66 ಕೋಟಿ ಆದಾಯ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.
2026-27 ನೇ ಸಾಲಿಗೆ ನೌಕರರ ವೇತನ, ನಿರ್ವಹಣಾ ವೆಚ್ಚ, ಬಂಡವಾಳ ಕಾಮಗಾರಿಗಳು, ಕಲ್ಯಾಣ ಕಾರ್ಯಕ್ರಮಗಳು ಮತ್ತು ಸರ್ಕಾರಕ್ಕೆ ಪಾವತಿಸಬೇಕಾದ ಕರಗಳು ಹಾಗೂ ಶಾಸನಬದ್ಧ ತೆರಿಗೆಗಳು ಸೇರಿದಂತೆ ಒಟ್ಟಾರೆ 119.50 ಕೋಟಿ ಅಂದಾಜು ವೆಚ್ಚವಾಗಲಿದ್ದು, 1.15 ಕೋಟಿ ಉಳಿತಾಯದ ಆಯವ್ಯಯವನ್ನು ಆಡಳಿತಾಧಿಕಾರಿ ಡಾ.ಕುಮಾರ ಮಂಡಿಸಿದರು.
ಅಮೃತ್ 2.0 ಯೋಜನೆಯಡಿ ಮದ್ದೂರು ನಗರದಲ್ಲಿರುವ ಉದ್ಯಾನವನಗಳ ನಿರ್ವಹಣೆ ಮತ್ತು ಅಭಿವೃದ್ಧಿ, ಕೆರೆ ಅಭಿವೃದ್ಧಿ, ನಗರ ಹಸಿರುಕರಣಕ್ಕಾಗಿ 6 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಪ್ರಮುಖ ಆದಾಯ ನಿರೀಕ್ಷೆ:
ನೀರು ಬಳಕೆದಾರರ ಶುಲ್ಕ 2.50 ಕೋಟಿ, ಒಳಚರಂಡಿ ಸಂಪರ್ಕ ಮತ್ತು ಬಳಕೆದಾರರ ಶುಲ್ಕ ಸಂಗ್ರಹಣೆಯಿಂದ – 25 ಲಕ್ಷ, ಉದ್ದಿಮೆ ಪರವಾನಿಗೆ ಶುಲ್ಕ 20 ಲಕ್ಷ, ಘನತ್ಯಾಜ್ಯ ವಸ್ತು ನಿರ್ವಹಣೆ ಶುಲ್ಕ– 25 ಲಕ್ಷ, ಖಾತಾ ಬದಲಾವಣೆ ಶುಲ್ಕ–10 ಲಕ್ಷ, ಬ್ಯಾಂಕ್ ಖಾತೆಗಳ ಮೇಲಿನ ಬಡ್ಡಿ ಸಂಗ್ರಹಣೆ–8 ಲಕ್ಷ, ಅಭಿವೃದ್ಧಿ ಮತ್ತು ಅಭಿವೃದ್ಧಿ ಮೇಲ್ವಿಚಾರಣೆ ಶುಲ್ಕ -1 ಕೋಟಿ, ಕಟ್ಟಡ ಪರವಾನಗಿ ಶುಲ್ಕ -40 ಲಕ್ಷ, ಅನುಪಯುಕ್ತ ವಸ್ತುಗಳ ಮಾರಾಟದಿಂದ – 10 ಲಕ್ಷ, ಟ್ಯಾಕ್ಸಿ, ಖಾಸಗಿ, ಸಂತೆ ಹಾಗೂ ಕಸಾಯಿ ಖಾನೆ ಶುಲ್ಕ- 20 ಲಕ್ಷ, ಎಸ್.ಎಫ್.ಸಿ. ಮುಕ್ತ ನಿಧಿ ಅನುದಾನ– 4 ಕೋಟಿ, ಎಸ್.ಎಫ್.ಸಿ. ವಿಶೇಷ ಅನುದಾನ– 1 ಕೋಟಿ, ನಗರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಅನುದಾನ– 4 ಕೋಟಿ, ಆಸ್ತಿ ತೆರಿಗೆಯೊಂದಿಗೆ ವಸೂಲಿಸಲಾಗುವ ಕರಗಳು, ಗುತ್ತಿಗೆದಾರರು ಸರಬರಾಜುದಾರರು ಹಾಗೂ ನೌಕರರ ವೇತನದ ಕಟಾವಣೆಗಳಿಂದ 1.50 ಕೋಟಿ ಆದಾಯ ನಿರೀಕ್ಷಿಸಲಾಗಿದೆ.
ಪ್ರಮುಖ ವೆಚ್ಚಗಳು:
ನಗರಸಭಾ ವ್ಯಾಪ್ತಿಯ ಕುಡಿಯುವ ನೀರು ಸೌಲಭ್ಯ ಕಲ್ಪಿಸಲು ಮತ್ತು ನಿರ್ವಹಣೆಗೆ 1.50 ಕೋಟಿ ಮೀಸಲಿಡಲಾಗಿದೆ.
ನಗರಸಭಾ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಬೀದಿ ದೀಪ ದುರಸ್ತಿ ಮತ್ತು ನಿರ್ವಹಣೆಗೆ 60 ಲಕ್ಷ, ಬೆಂಗಳೂರು ನಗರ ಮಾದರಿಯಲ್ಲಿ ಉದ್ಯಾನವನಗಳಲ್ಲಿ ಆಕರ್ಷಕ ಅಲಂಕಾರಿಕ ಗಿಡಗಳಾದ ತಬೂಬಿಯಾ ರೋಸಿಯಾ ಗಿಡ ಬೆಳೆಸಲು 10 ಲಕ್ಷ,
ನಗರಸಭೆ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾದ 4 ಗ್ರಾಮ ಪಂಚಾಯಿತಿಗಳ 10 ಗ್ರಾಮಗಳಿಗೆ ಮೂಲ ಸೌಕರ್ಯ ಕಲ್ಪಿಸಲು -40 ಕೋಟಿ ರಸ್ತೆ ಸ್ವಾಗತ ಕಮಾನು ಅಳವಡಿಕೆಗೆ 1 ಕೋಟಿ, ಮಾರುಕಟ್ಟೆ ನಿರ್ಮಾಣ ಕಾಮಗಾರಿಗೆ 9 ಕೋಟಿ, ವಿದ್ಯುತ್ ಚಿತಾಗಾರಕ್ಕೆ 4 ಕೋಟಿ ಡಿಪಿಆರ್ ತಯಾರಿಸಲು, ಬೀದಿನಾಯಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲು ಹಾಗೂ ರೇಬಿಸ್ ಚುಚ್ಚುಮದ್ದು ಹಾಕುವ ಉದ್ದೇಶಕ್ಕೆ 30 ಲಕ್ಷ, ಸಮುದಾಯ ಹಾಗೂ ಸಾರ್ವಜನಿಕ ಶೌಚಗೃಹ ನಿರ್ವಹಣೆ ಮತ್ತು ನಿರ್ಮಾಣ ಉದ್ದೇಶಕ್ಕೆ 90 ಲಕ್ಷ, ನಮ್ಮ ಕ್ಲಿನಿಕ್ ನಿರ್ವಹಣೆ ಮತ್ತು ಔಷಧ ಖರೀದಿಗಾಗಿ 30 ಲಕ್ಷ ರೂ ಮೀಸಲಿರಿಸಲಾಗಿದೆ ಎಂದು ವಿವರಿಸಿದರು.
ಶಾಸಕ ಕೆ.ಎಂ.ಉದಯ್, ಯೋಜನಾ ನಿರ್ದೇಶಕ ಟಿ.ಎನ್.ನರಸಿಂಹಮೂರ್ತಿ ಪೌರಾಯುಕ್ತೆ ಎಸ್.ಎನ್.ರಾಧಿಕಾ ಇದ್ದರು.
ಪ್ರಮುಖ ಯೋಜನೆಗಳು
* 10 ಕೋಟಿ ವೆಚ್ಚದಲ್ಲಿ ಸುಸಜ್ಜಿತ ನೂತನ ನಗರಸಭಾ ಕಛೇರಿ ನಿರ್ಮಾಣ.
* ನಗರದ ಪ್ರಮುಖ ವೃತ್ತಗಳ ಅಭಿವೃದ್ಧಿ ಮತ್ತು ಮಹನೀಯರ ಪುತ್ತಳಿಗಳ ನಿರ್ಮಾಣ.
* ನಿವೇಶನ ರಹಿತರಿಗೆ ದೇವರಾಜ ಅರಸ್ ವಿಶೇಷ ವಸತಿ ಯೋಜನೆಯಡಿ 616 ಬೀಡಿ ಕಾರ್ಮಿಕರಿಗೆ ಜಿ+3 ಮಾದರಿಯಲ್ಲಿ ಕದಲೂರು ಗ್ರಾಮದಲ್ಲಿ 4 ಎಕರೆ 14 ಗುಂಟೆಯಲ್ಲಿ ವಸತಿ ಸಮುಚ್ಚಯ ನಿರ್ಮಾಣ.
* ನಗರಸಭಾ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ಬಸ್ ತಂಗುದಾಣ ನಿರ್ಮಾಣ
* ನಗರಸಭಾ ವ್ಯಾಪ್ತಿಯ ಮದ್ದೂರು ಕೆರೆ ಮತ್ತು ಸೋಮನಹಳ್ಳಿ ಕೆರೆಗಳ ಅಭಿವೃದ್ಧಿ.
* ಪೌರಕಾರ್ಮಿಕರಿಗೆ ವಿಶ್ರಾಂತಿ ಗೃಹ, ಹೆಲ್ತ್ ಚೆಕಪ್, ಬೆಳಗಿನ ಉಪಹಾರ.
* ಮದ್ದೂರು ನಗರಸಭಾ ಕಛೇರಿ ಆವರಣದಲ್ಲಿ ಬ್ಯಾಂಕ್ ಕೌಂಟರ್ ಸ್ಥಾಪನೆ.
* ಗೆಜ್ಜಲಗೆರೆ, ಚಾಮನಹಳ್ಳಿ, ಗೊರವನಹಳ್ಳಿ ಹಾಗೂ ಸೋಮನಹಳ್ಳಿ ಗ್ರಾಮ ಪಂಚಾಯಿತಿ ಕಟ್ಟಡಗಳಲ್ಲೇ ನಗರಸಭಾ ವಲಯ ಕಛೇರಿ ಸ್ಥಾಪನೆ.
ಬಜೆಟ್ ಕುರಿತ ಶಾಸಕ ಕೆ.ಎಂ.ಉದಯ್ ಮಾತನಾಡಿ, ಮದ್ದೂರು ನಗರಸಭೆಯಲ್ಲಿ ಮೊದಲ ಬಾರಿಗೆ ಮಂಡನೆಯಾಗಿರುವ ಬಜೆಟ್ ಅಭಿವೃದ್ಧಿ ವಿಷಯದಲ್ಲಿ ಇತಿಹಾಸದ ಪುಟ ಸೇರಲಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಹಲವು ವರ್ಷಗಳ ನಂತರ ನಗರದಲ್ಲಿ ಅಭಿವೃದ್ಧಿ ಪರ್ವಕ್ಕೆ ಮುನ್ನುಡಿ ಬರೆಯಲಾಗಿದ್ದು, ಎಲ್ಲಾ ವರ್ಗದ ಜನರ ಹಾಗೂ ವಲಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಜಿಲ್ಲಾಧಿಕಾರಿಗಳು ಹಾಗೂ ನಗರಸಭಾ ಅಧಿಕಾರಿಗಳು ಅತ್ಯುತ್ತಮವಾದ ಬಜೆಟ್ ಮಂಡಿಸಿದ್ದಾರೆ ಎಂದರು.
120 ಕೋಟಿಗೂ ಮೀರಿದ ಬಜೆಟ್ ಇದ್ದಾಗಿದ್ದು, ಲೋಕೋಪಯೋಗಿ, ನೀರಾವರಿ ಇಲಾಖೆಗಳ ಅನುದಾನಗಳ ಸದ್ಬಳಕೆ ಮಾಡಿಕೊಂಡು ನಗರವನ್ನು ಸ್ವಚ್ಛ ಹಾಗೂ ಹಸಿರು ನಗರವನ್ನಾಗಿ ಮಾಡಲಾಗುವುದು. ಇದಕ್ಕೆ ಸಾರ್ವಜನಿಕರು ಸಹ ಅಗತ್ಯ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಇನ್ನು ನಗರಸಭೆಗೆ ಹೊಸದಾಗಿ ಸೇರಿರುವ ಗ್ರಾಪಂ ವ್ಯಾಪ್ತಿಗಳ ಹಳ್ಳಿಗಳಿಗೆ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ನೀಡುವ ಜತೆಗೆ 24×7 ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ವರದಿ : ಗಿರೀಶ್ ರಾಜ್, ಮಂಡ್ಯ
ನನ್ನ ಮತ್ತು ಮೋದಿ ನಡುವಿನ ಮೈತ್ರಿ 2014ರಲ್ಲಿಯೇ ಆರಂಭ: ಖರ್ಗೆ ಟೀಕೆಗೆ ಹೆಚ್.ಡಿ ದೇವೇಗೌಡ ತಿರುಗೇಟು
EPFO ಮಾಸ್ಟರ್ ಪ್ಲಾನ್: 10,181 ಕೋಟಿ ರೂ. ಹಕ್ಕು ಪಡೆಯದ ಹಣ ಪಾವತಿಗೆ ‘ಆಟೋ-ಸೆಟಲ್ಮೆಂಟ್’ ಫೀಚರ್ ಜಾರಿ!








