ಕೋಲಾರ : ನವವಿವಾಹಿತೆ ಒಬ್ಬಳು ಮದುವೆಯಾಗಿ ವರ್ಷ ಕಳೆಯುವಷ್ಟರಲ್ಲಿ ಪತಿಯ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇನ್ನು ನವವಿವಾಹಿತೆಯ ಕುಟುಂಬಸ್ಥರು ಪತಿಯೇ ಇದಕ್ಕೆ ಕಾರಣ ಎಂದು ಆತನ ಮನೆಯ ಮುಂದೇನೆ ಮಗಳ ಅಂತ್ಯಸಂಸ್ಕಾರಕ್ಕೆ ಪ್ರಯತ್ನಿಸಿರುವ ಘಟನೆ ಕೋಲಾರ ತಾಲೂಕಿನ ತೂರಾಂಡಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹೌದು ಕೋಲಾರ ತಾಲೂಕಿನ ತೂರಾಂಡಹಳ್ಳಿ ಗ್ರಾಮದಲ್ಲಿರುವ ಪತಿ ಉಲ್ಲಾಸ್ ಗೌಡ ಮನೆಯ ಎದುರು ಪತ್ನಿ ಮಾನಸ ಗೌಡ (24) ಅವರ ಶವವನ್ನಿಟ್ಟು ಪ್ರತಿಭಟನೆ ಮಾಡಲಾಗಿದೆ. ಕಳೆದ ಒಂದು ವರ್ಷಗಳ ಹಿಂದೆ ಮಾನಸ ಗೌಡ ಹಾಗೂ ಉಲ್ಲಾಸ್ ಗೌಡ ನಡುವೆ ಕಳೆದ ವರ್ಷ ಅದ್ದೂರಿಯಾಗಿ ಮದುವೆ ನಡೆದಿತ್ತು.
ಮದುವೆಯ ಹೊಸತರಲ್ಲಿ ಎಲ್ಲವು ಚೆನ್ನಾಗಿತ್ತು. ಆದರೆ ಸ್ವಲ್ಪ ದಿನ ಕಳೆಯುವಷ್ಟರಲ್ಲಿ ಉಲ್ಲಾಸ್ ಗೌಡನಿಂದ ಮಾನಸಗೆ ವರದಕ್ಷಿಣೆ ಕಿರುಕುಳ ಶುರುವಾಗಿದೆ. ಇದರಿಂದ ಬೇಸತ್ತ ಮಾನಸ ಗೌಡ ಕೆಲವು ದಿನಗಳ ಹಿಂದೆ ತವರು ಮನೆ ಸೇರಿಕೊಂಡಿದ್ದಳು.ಶನಿವಾರ ರಾತ್ರಿ ಡೆತ್ ನೋಟ್ ಬರೆದಿಟ್ಟು ಮಾನಸ ಗೌಡ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ವೇಳೆ ಪತಿ ಉಲ್ಲಾಸ್ ಗೌಡ ಮತ್ತು ಕುಟುಂಬಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ಮಾಡಲಾಗುತ್ತಿದೆ.
ಇನ್ನೂ ಮಗಳ ಸಾವಿಗೆ ನ್ಯಾಯ ಒದಗಿಸುವಂತೆ ಪೋಷಕರು ಒತ್ತಾಯ ಮಾಡಿದ್ದಾರೆ. ವರದಕ್ಷಿಣೆ ಕಿರುಕುಳ ನೀಡಿ ಮಗಳ ಸಾವಿಗೆ ಉಲ್ಲಾಸ್ ಗೌಡ ಕುಟುಂಬ ಕಾರಣವಾಗಿದೆ ಎಂದು ದೂರಿದ್ದಾರೆ.ವರನ ಮನೆಯ ಬಾಗಿಲಲ್ಲೇ ಅಂತ್ಯಸಂಸ್ಕಾರ ಮಾಡಲು ಮುಂದಾಗಿದ್ದ ಮೃತ ಮಾನಸ ಪೋಷಕರಿಗೆ ಸಮಾಧಾನ ಮಾಡುವಲ್ಲಿ ಪೊಲೀಸರು ಕೊನೆಗೆ ಯಶ ಕಂಡಿದ್ಬದಾರೆ. ಬಳಿಕ ಮನೆಯ ಕೈತೋಟದಲ್ಲಿಯೇ ಅಂತ್ಯ ಸಂಸ್ಕಾರ ನೆರವೇರಿದೆ.