ಬೆಂಗಳೂರು : ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಶೀಘ್ರದಲ್ಲಿ ಮತ್ತೆ ತಿಹಾರ್ ಜೈಲಿಗೆ ಹೋಗುತ್ತಾರೆ.ಅವರಿಗೂ ಕೂಡ ಸೆಟ್ಲ್ಮೆಂಟ್ ಆಗುತ್ತದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆಗೆ ಶಾಸಕ ಪ್ರದೀಪ್ ಈಶ್ವರ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದು ಅಧಿಕಾರ ಕಳೆದುಕೊಂಡ ಕೆ ಎಸ್ ಈಶ್ವರಪ್ಪ ಚಪ್ಪಗೆ ಬಾಯಿ ಮುಚ್ಚಿಕೊಂಡು ಮನೆಯಲ್ಲಿ ಇದ್ದರೆ ಸರಿ ಹೋಗುತ್ತೆ ಎಂದು ನಾಲಿಗೆಯನ್ನು ಹರಿಬಿಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರಿಗೆ ಮಾನ ಮರ್ಯಾದೆ ಇಲ್ಲ. ಕಳೆದ ಹತ್ತು ವರ್ಷಗಳಲ್ಲಿ 5233 ಐಟಿ ಹಾಗೂ ಇಡಿ ಅಧಿಕಾರಿಗಳ ದಾಳಿ ನಡೆದಿದೆ. ಅದರಲ್ಲಿ ಇಡಿ ಅಧಿಕಾರಿಗಳು ಪ್ರೂವ್ ಮಾಡಿದ್ದು ಕೇವಲ 22. ಅಲ್ಲದೆ ಇದರಲ್ಲಿ 3000ಕ್ಕೂ ಹೆಚ್ಚು ಜನರನ್ನು ಕಾಂಗ್ರೆಸ್ ನಾಯಕರನ್ನೇ ಟಾರ್ಗೆಟ್ ಮಾಡಿದ್ದಾರೆ ಎಂದು ತಿಳಿಸಿದರು.
ಬಿಜೆಪಿಯ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹಿರಿಯ ರಾಜಕಾರಣಿ. ಅಧಿಕಾರ ಕಳೆದುಕೊಂಡ ಅವರು ಸ್ವಲ್ಪ ತೆಪ್ಪಗೆ ಬಾಯಿ ಮುಚ್ಚಿಕೊಂಡು ಮನೆಯಲ್ಲಿ ಇದ್ದರೆ ಸರಿ ಹೋಗುತ್ತದೆ ಎಂದು ಗೌರವಾನ್ವಿತ ಈಶ್ವರಪ್ಪ ಗೆ ಹೇಳಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.
ಶಿವಕುಮಾರ್ ಅವರನ್ನು ಮುಟ್ಟುವ ತಾಕತ್ತು ಯಾರಿಗೂ ಇಲ್ಲ, ಅವರು ಕೇವಲ ಕನಕಪುರದ ಬಂಡೆಯಲ್ಲ ಕರ್ನಾಟಕದ ಬಂಡೆ ಕೇವಲ ಈಶ್ವರಪ್ಪ ಹಾಸ್ಟೆಲ್ ಇಡೀ ಬಿಜೆಪಿ ನಾಯಕರು ಒಂದೇ ಕಡೆ ನಿಂತುಕೊಳ್ಳಲಿ ನಮ್ಮಬಂಡೆನ ಎದುರಿಸಲಿ ನೋಡೋಣ ಎಂದು ಈಶ್ವರ್ ಸವಾಲು ಹಾಕಿದರು.
ಶಿವಕುಮಾರ್ ಮತ್ತು ಸಿದ್ದರಾಮಯ್ಯ ತಾಕತ್ತು ಬಿಜೆಪಿಯವರಿಗೆ ಗೊತ್ತಿಲ್ಲ, ನಿನ್ನೆ ಗೃಹ ಸಚಿವ ಅಮಿತ್ ಶಾ ಅವರು ಮಾತಾಡುವಾಗ, ಸಿಎಂ ಮತ್ತು ಡಿಸಿಎಂ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿ ಗೆಲ್ಲಬೇಕು ಅಂತ ಯಾಕೆ ಹೇಳಿದರು? ಯಾಕೆ ಅವರಿಗೆ ಅಲ್ಲಿ ಸೋಲೋ ಭಯಾನ? ಯಾಕೆ ಅಮಿತ್ ಶಾ ಹಾಗೆ ಹೇಳಿದ್ದು ಅನ್ನೋದನ್ನು ರಾಜ್ಯ ಬಿಜೆಪಿ ನಾಯಕರು ತಿಳಿದುಕೊಳ್ಳಲಿ ಎಂದು ಈಶ್ವರ್ ಹೇಳಿದರು.