ಬೆಂಗಳೂರು : ಕೆ.ಸಿ ವ್ಯಾಲಿ, ಹೆಚ್.ಎನ್ ವ್ಯಾಲಿಗಳಲ್ಲಿ ನೀರನ್ನು ಹರಿಸುವ ಮುನ್ನ ವೈಜ್ಞಾನಿಕ ಕ್ರಮಗಳ ಅನುಸಾರ ನೀರನ್ನು ಶುದ್ದೀಕರಿಸಲಾಗುತ್ತಿದೆ. ಈ ಯೋಜನೆಯ ಮೂಲಕ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗೆ ನೀರು ಹರಿಸಲಾಗುತಿದೆ. ಕೆರೆಗಳನ್ನು ತುಂಬಿಸುವ ಮೂಲಕ ಅಂತರ್ಜಲವನ್ನೂ ವೃದ್ಧಿಸಲಾಗುತ್ತಿದೆ. ಆದರೆ, ರಾಜಕೀಯ ಕಾರಣಗಳಿಗಾಗಿ ಉತ್ತಮ ಕೆಲಸಗಳಿಗೆ ಅನಗತ್ಯವಾಗಿ ಮಸಿ ಬಳಿಯುವುದು ಸರಿಯಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ವಿಧಾನಸಭೆಯಲ್ಲಿ ಅಸಮಾಧಾನ ಹೊರಹಾಕಿದರು.
ಮಂಗಳವಾರದ ವಿಧಾನಸಭೆಯಲ್ಲಿ ಶಾಸಕ ಸಮೃದ್ಧಿ.ವಿ.ಮಂಜುನಾಥ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಣ್ಣ ನೀರಾವರಿ ಸಚಿವರಾದ ಭೋಸರಾಜು ಅವರ ಪರವಾಗಿ ಉತ್ತರ ನೀಡಿದ ಅವರು, “ಪದೇ ಪದೇ ತಪ್ಪು ಮಾಹಿತಿ ಹರಡಿ ಜನರಿಗೆ ಗೊಂದಲ ಉಂಟು ಮಾಡಬಾರದು. ಕೆ.ಸಿ ವ್ಯಾಲಿ ಹಾಗೂ ಹೆಚ್.ಎನ್ ವ್ಯಾಲಿ ನೀರಿನ ಗುಣ್ಣಮಟ್ಟದ ಬಗ್ಗೆ ಯಾವುದೇ ವೈಜ್ಞಾನಿಕ ಅಧ್ಯಯನ, ಆಧಾರ ಇಲ್ಲದೆ ಅನಗತ್ಯವಾಗಿ ಮಾತನಾಡುವುದರಿಂದ ಸಾರ್ವಜನಿಕ ಹಿತ ಸಾಧ್ಯವಿಲ್ಲ” ಎಂದು ಅಸಮಾಧಾನ ಹೊರಹಾಕಿದರು.
2006 ರಲ್ಲಿ ಅಂದಿನ ಸರ್ಕಾರ ಕೋಲಾರಕ್ಕೆ ಭದ್ರಾ ನದಿಯಿಂದ ನೀರು ಕೊಡುವುದಾಗಿ ಹೇಳಿತ್ತು. ಗುದ್ದಲಿ ಪೂಜೆಯನ್ನೂ ಮಾಡಲಾಗಿತ್ತು. ಆದರೆ, ಭದ್ರಾ ನದಿಯಿಂದ ನೀರು ತರಲು ಸಾಧ್ಯವಾಗಿರಲಿಲ್ಲ. ಅಧಿಕಾರ ಇದ್ದಾಗ ಇವರು ಕೋಲಾರಕ್ಕೆ ಏನೂ ಮಾಡೋಕೆ ಆಗಿರಲಿಲ್ಲ. ಆದರೆ, ನಾವು ತೀರಾ ಹದಗೆಟ್ಟ ಪರಿಸ್ಥಿತಿಯಲ್ಲಿ ಪರಿಹಾರ ನೀಡಿದ್ದೇವೆ. ಯಾವ ರೈತರಿಗೂ ತೊಂದರೆ ಆಗುವುದನ್ನು ನೋಡಿಕೊಂಡು ನಮ್ಮ ಸರ್ಕಾರ ಸುಮ್ಮನೆ ಕೂರಲ್ಲ. ಕೆ.ಸಿ ವ್ಯಾಲಿ ಹಾಗೂ ಹೆಚ್.ಎನ್ ವ್ಯಾಲಿ ನೀರಿನ ಗುಣಮಟ್ಟವನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ವೈಜ್ಞಾನಿಕ ವರದಿ ಆಧಾರದಲ್ಲಿ ಏನೇ ಕ್ರಮ ಸೂಚಿಸಿದರೂ ಅದನ್ನು ಪಾಲಿಸಲು ನಮ್ಮ ಸರ್ಕಾರ ಸಿದ್ದವಾಗಿದೆ. ಅದನ್ನು ಬಿಟ್ಟು ಮಹತ್ವಾಕಾಂಕ್ಷೆಯ ಯೋಜನೆ ಬಗ್ಗೆ ಸುಮ್ಮನೆ ರಾಜಕೀಯ ಕಾರಣಗಳಿಗೆ ವಿರೋಧ ಮಾಡುವುದರಿಂದ ಜನರಿಗೇನು ಲಾಭ” ಎಂದು ವಿಷಾದಿಸಿದರು.
“ಕೆ.ಸಿ ವ್ಯಾಲಿ-ಹೆಚ್.ಎನ್ ವ್ಯಾಲಿ ನೀರಿನಿಂದ ತುಂಬಿದ ಕೆರೆಗಳ ವೀಕ್ಷಣೆಗೆ ವಿಶ್ವ ಬ್ಯಾಂಕ್ ಹಾಗೂ ವಿಶ್ವಸಂಸ್ಥೆ ಅಧ್ಯಕ್ಷರು ಸ್ಥಳಕ್ಕೆ ಬಂದು ಹೊಗಳಿ ಹೋಗಿದ್ದಾರೆ. ಕೇಂದ್ರ ಸರ್ಕಾರದ ಸಂಸದೀಯ ಸಮಿತಿ ಸ್ಥಳಕ್ಕೆ ಆಗಮಿಸಿ ಕೆರೆ ನೋಡಿ ಪ್ರಶಂಸಿಸಿದ್ದಾರೆ. ಅಲ್ಲದೆ, ಈ ಯೋಜನೆಯನ್ನು ದೇಶದಾದ್ಯಂತ ಅಳವಡಿಸಿಕೊಳ್ಳಬೇಕು ಎಂದು ಮೆಚ್ಚುಗೆ ಸೂಚಿಸಿದ್ದಾರೆ. ವಿಶ್ವಬ್ಯಾಂಕ್ ಈ ಯೋಜನೆಯನ್ನು ವಿಸ್ತರಿಸಲು ಸಾಲ ನೀಡಿದೆ. ಕಳೆದ ಸರ್ಕಾರದಲ್ಲಿ ಮಾಧುಸ್ವಾಮಿ ಅವರು ನೀರಾವರಿ ಸಚಿವರಾಗಿದ್ದಾರೆ ವೃಷಭಾವತಿ ಯೋಜನೆಗೆ ಅಂದಿನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ಅವರ ಬಳಿ ಮಾತನಾಡಿ ಸಚಿವ ಸಂಪುಟದ ಅನುಮತಿ ನೀಡಿದ್ದರು. ಅಷ್ಟೇ ಅಲ್ಲದೆ ಆ ನೀರನ್ನು ತುಮಕೂರಿಗೂ ಹರಿಸುವ ಪ್ರಯತ್ನ ಮಾಡಿದ್ದರು. ಇಂತಹ ಪರಿಸ್ಥಿತಿಯಲ್ಲಿ ವಿನಾಃ ಕಾರಣ ಎಲ್ಲೋ ಒಂದು ಬೆಳೆಗೆ ಹುಳ ಬಿತ್ತು ಎಂದ ತಕ್ಷಣ ಅದಕ್ಕೆ ಕೆಸಿ ವ್ಯಾಲಿ ಹೆಚ್.ಎನ್ ವ್ಯಾಲಿ ನೀರಿನ ಗುಣಮಟ್ಟವೇ ಕಾರಣ ಎಂದರೆ ಹೇಗೆ” ಎಂದು ಪ್ರಶ್ನಿಸಿದರು.
ನೀರಿನ ಗುಣಮಟ್ಟದ ಬಗ್ಗೆಯೂ ಗಮನ ಸೆಳೆದ ಅವರು, “ಕೆ.ಸಿ ವ್ಯಾಲಿ-ಹೆಚ್.ಎನ್ ವ್ಯಾಲಿ ನೀರಿನ ಗುಣಮಟ್ಟವನ್ನು ವಿಶ್ವದ ಪ್ರತಿಷ್ಠಿತ ಸಂಸ್ಥೆಗಳಲ್ಲೊಂದಾದ ಭಾರತೀಯ ವಿಜ್ಞಾನ ಸಂಸ್ಥೆ ವತಿಯಿಂದ 2017-18 ರಿಂದ ನಿರಂತರವಾಗಿ ಅಧ್ಯಯನ ಮಾಡಲಾಗುತ್ತಿದೆ. ಭಾರತೀಯ ವಿಜ್ಞಾನ ಸಂಸ್ಥೆ ಪ್ರತಿ ಮೂರು ತಿಂಗಳಿಗೊಮ್ಮೆ ನೀರು ಹಾಗೂ ಬೆಳೆಗಳ ಗುಣಮಟ್ಟ ಪರಿಶೀಲಿಸುತ್ತಿದೆ. ಈ ಕೆಲಸವನ್ನು ಮೊದಲು ಐದು ವರ್ಷಕ್ಕೆ ನೀಡಿದ್ದೆವು ಈಗ ಮತ್ತೆ ಐದು ವರ್ಷಕ್ಕೆ ವಿಸ್ತರಿಸಲಾಗಿದೆ. ತೆರೆದ ನೀರಿನ ಮೂಲಗಳ ಗುಣಮಟ್ಟ ಕಾಪಾಡಲು ಅಗತ್ಯವಾದ ಎಲ್ಲಾ ವೈಜ್ಞಾನಿಕ ಕ್ರಮಗಳನ್ನೂ ಪಾಲಿಸಲಾಗುತ್ತಿದೆ. ಇದಲ್ಲದೆ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ಕೇಂದ್ರ ಜಲ ಸಂಪನ್ಮೂಲ ಮಂಡಳಿ, ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ, ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿರುವ ಎಲ್ಲಾ ವೈಜ್ಞಾನಿಕ ಪರಿಕ್ರಮಗಳನ್ನೂ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ” ಎಂದು ವಿಧಾನಸಭೆಗೆ ಮಾಹಿತಿ ನೀಡಿದರು.








