ಶಿವಮೊಗ್ಗ: ರೈತರ ಪರವಾಗಿ ಕೆಲಸ ಮಾಡೋದು ಬಿಟ್ಟು, ರೈತರನ್ನೇ ಒಕ್ಕಲೆಬ್ಬಿಸೋದನ್ನು ನಾನು ಸಹಿಸುವುದಿಲ್ಲ. ರೈತರನ್ನು ಒಕ್ಕಲೆಬ್ಬಿಸಿದರೇ ಸುಮ್ಮನಿರುವುದಿಲ್ಲ ಎಂಬುದಾಗಿ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಅರಣ್ಯಾಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಇಂದು ಸಾಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರೈತರು ಎದುರಿಸುತ್ತಿರುವ ಅರಣ್ಯ ಮತ್ತು ಕಂದಾಯ ಭೂಮಿ ಸಮಸ್ಯೆಗಳ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಶಾಸಕ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರಾದ ಗೋಪಾಲಕೃಷ್ಣ ಬೇಳೂರು ಅವರ ಅಧ್ಯಕ್ಷತೆಯಲ್ಲಿ ಶಿವಮೊಗ್ಗದ ಪ್ರವಾಸಿ ಮಂದಿರದಲ್ಲಿ (IB) ಮಹತ್ವದ ಸಭೆ ನಡೆಸಿದರು.
ಘಟನೆಯ ಹಿನ್ನೆಲೆ: ಮುರಕ್ಕಿ ಗ್ರಾಮದ ರೈತನ ಜಮೀನು ತೆರವು
ಸಾಗರ ತಾಲ್ಲೂಕಿನ ಅಂಬಾರಗೋಡ್ಲು ಸಮೀಪದ ಮುರಕ್ಕಿ ಗ್ರಾಮದ ರೈತ ಯೋಗರಾಜ್ ಎಂಬುವವರ ಜಮೀನಿನ ಬೇಲಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ತೆರವುಗೊಳಿಸಿದ್ದರು. ಈ ವಿಚಾರ ಶಾಸಕರ ಗಮನಕ್ಕೆ ಬರದೇ ನಡೆದಿರುವುದು ಬೇಳೂರು ಅವರ ಕೆಂಗಣ್ಣಿಗೆ ಗುರಿಯಾಗಿದೆ. “ಜನಪ್ರತಿನಿಧಿಗಳ ಗಮನಕ್ಕೆ ತಾರದೇ ಏಕಾಏಕಿ ರೈತರ ಜಮೀನಿನ ಬೇಲಿ ಕಿತ್ತು ಹಾಕಿರುವುದು ಎಷ್ಟು ಸರಿ?” ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಅರಣ್ಯಾಧಿಕಾರಿಗಳಿಗೆ ಶಾಸಕರ ಪ್ರಮುಖ ಸೂಚನೆಗಳು:
ಸಭೆಯಲ್ಲಿ ಅರಣ್ಯ ಇಲಾಖೆಯ ಡಿ.ಎಫ್.ಒ (DFO), ಆರ್.ಎಫ್.ಒ (RFO) ಹಾಗೂ ವೈಲ್ಡ್ ಲೈಫ್ ಅಧಿಕಾರಿಗಳ ಸಮ್ಮುಖದಲ್ಲಿ ಶಾಸಕರು ಈ ಕೆಳಗಿನ ಸೂಚನೆಗಳನ್ನು ನೀಡಿದರು:
-
ಒಕ್ಕಲೆಬ್ಬಿಸುವಂತಿಲ್ಲ: ಯಾವುದೇ ಕಾರಣಕ್ಕೂ ಸಾಗುವಳಿ ಮಾಡುತ್ತಿರುವ ರೈತರನ್ನು ಜಮೀನಿನಿಂದ ಒಕ್ಕಲೆಬ್ಬಿಸಬಾರದು. ಒಂದು ವೇಳೆ ಅಂತಹ ಪ್ರಯತ್ನ ನಡೆದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.
-
ಪೂರ್ವಾನುಮತಿ ಕಡ್ಡಾಯ: ಇನ್ಮುಂದೆ ನನ್ನ ಗಮನಕ್ಕೆ ತಾರದೇ ಯಾವುದೇ ರೈತರ ಜಮೀನು ತೆರವು ಕಾರ್ಯಾಚರಣೆ ಅಥವಾ ಕಿರುಕುಳ ನೀಡುವ ಕೆಲಸ ಮಾಡಬಾರದು.
-
ಬಗರ್ ಹುಕುಂ ವಿಲೇವಾರಿ: ದಶಕಗಳಿಂದ ಜಮೀನು ನಂಬಿ ಬದುಕುತ್ತಿರುವ ರೈತರ ಬಗರ್ ಹುಕುಂ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು.
ಜಂಟಿ ಸರ್ವೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಸೂಚನೆ
ಸಾಗರ ಕ್ಷೇತ್ರದಲ್ಲಿ ಕಂದಾಯ ಮತ್ತು ಅರಣ್ಯ ಭೂಮಿಯ ಗೊಂದಲ ದಶಕಗಳಿಂದಲೂ ಇದ್ದು, ಇದನ್ನು ಬಗೆಹರಿಸಲು ಕಂದಾಯ ಮತ್ತು ಅರಣ್ಯ ಇಲಾಖೆಗಳು ಸಮನ್ವಯದೊಂದಿಗೆ ಜಂಟಿ ಸರ್ವೆ ಕಾರ್ಯವನ್ನು ಅತ್ಯಂತ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆಯು ರೈತರ ಜಮೀನುಗಳನ್ನು ಏಕಾಏಕಿ ತೆರವುಗೊಳಿಸುತ್ತಿರುವ ಬಗ್ಗೆ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಇಂತಹ ಕಾರ್ಯಾಚರಣೆಗಳನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಅರಣ್ಯಾಧಿಕಾರಿಗಳಿಗೆ ಆದೇಶಿಸಿದರು.
ರೈತರ ಸಮಸ್ಯೆಗಳ ಜೊತೆಗೆ ಸಾರ್ವಜನಿಕ ಸುರಕ್ಷತೆಗೂ ಆದ್ಯತೆ ನೀಡಿದ ಶಾಸಕರು, ಗಾಳಿ-ಮಳೆಗೆ ಶಾಲಾ-ಕಾಲೇಜುಗಳ ಬಳಿ ಹಾಗೂ ಮನೆಗಳ ಪಕ್ಕದಲ್ಲಿ ಅಪಾಯಕಾರಿಯಾಗಿರುವ ಮರಗಳನ್ನು ಗುರುತಿಸಿ, ಯಾವುದೇ ಅನಾಹುತ ಸಂಭವಿಸುವ ಮುನ್ನವೇ ಅವುಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಕ್ಷೇತ್ರದ ಶೈಕ್ಷಣಿಕ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಸಾಗರ ವಿಧಾನಸಭಾ ಕ್ಷೇತ್ರಕ್ಕೆ ಮಂಜೂರಾಗಿರುವ ಕಾರ್ಮಿಕ ವಸತಿ ಶಾಲೆಗಾಗಿ ಕಂದಾಯ ಇಲಾಖೆಯ ಜಾಗವನ್ನು ಕೂಡಲೇ ಗುರುತಿಸಿ ಮಂಜೂರಾತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಅದೇ ರೀತಿ, ಕ್ಷೇತ್ರದ ವಿದ್ಯುತ್ ಸಮಸ್ಯೆ ನಿವಾರಣೆಗೆ ಪೂರಕವಾಗಿ 110/11 ಕೆವಿ ವಿದ್ಯುತ್ ಉಪಕೇಂದ್ರಗಳನ್ನು (ಗ್ರಿಡ್) ಸ್ಥಾಪಿಸಲು ಅಗತ್ಯವಿರುವ ಸರ್ಕಾರಿ ಜಮೀನನ್ನು ತಕ್ಷಣವೇ ಮಂಜೂರು ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅಧಿಕಾರಿಗಳ ಭಾಗಿ
ಈ ಸಭೆಯಲ್ಲಿ ಜಿಲ್ಲಾಧಿಕಾರಿಗಳು, ಶಿವಮೊಗ್ಗ ಮತ್ತು ಸಾಗರ ವಿಭಾಗದ ಡಿ.ಎಫ್.ಒಗಳು, ಸಾಗರ ಉಪವಿಭಾಗಾಧಿಕಾರಿಗಳು, ಹೊಸನಗರ ತಹಶೀಲ್ದಾರರು, ಮೈನ್ಸ್ ಡಿ.ಡಿ ಹಾಗೂ ಅರಣ್ಯ ಇಲಾಖೆಯ ಆರ್.ಎಫ್.ಒ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ರೈತರ ಹಿತರಕ್ಷಣೆ ಮತ್ತು ಅರಣ್ಯ ಸಂರಕ್ಷಣೆಯ ನಡುವೆ ಸಮನ್ವಯ ಸಾಧಿಸುವಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಇದೇ ಸಂದರ್ಭದಲ್ಲಿ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.








