ಬೆಂಗಳೂರು : ಬಿಗ್ ಬಾಸ್ 11ನೇ ಸೀಸನ್ ನಲ್ಲಿ ಕರ್ನಾಟಕದ ಕ್ರಶ್ ಎಂದೇ ಖ್ಯಾತಿ ಪಡೆದು ಬಳಿಕ ಶೋನಿಂದ ಹೊರಗಡೆ ಬಂದ ಲಾಯರ್ ಜಗದೀಶ್ ಅವರು ಬಿಗ್ ಬಾಸ್ ಮನೆಯಲ್ಲಿ ತಮಗೆ ಆದಂತಹ ಅನುಭವ ಹಾಗೂ ಸಂತಸದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
ಮನೆಯೊಳಗೆ ಇಷ್ಟು ದಿನ ಇರುತ್ತೇನೆ ಎಂಬುದನ್ನು ಲೆಕ್ಕಾಚಾರ ಹಾಕಿ ನಾನು ಅಲ್ಲಿಗೆ ಹೋಗಿರಲಿಲ್ಲ. ನಮ್ಮ ಲೆಕ್ಕಾಚಾರ ಏನು ಎಂಬುದನ್ನು ಜನರು ನೋಡಿದ್ದಾರೆ. ನನ್ನನ್ನು ಜನರು ಇಷ್ಟಪಟ್ಟಿದ್ದಾರೆ.ಆ ಮನೆಯಲ್ಲಿ 16 ಜನರ ಒಂದು ಗುಂಪು ಆಗಿತ್ತು. ನಾನು ಒಬ್ಬನೇ ಆಗಿದ್ದೆ. ನನಗೆ ಏನೂ ಬೇಜಾರು ಇಲ್ಲ. ಒಂಟಿಯಾಗಿ ಎದುರಿಸಲು ನಾನು ಸಿದ್ಧನಾಗಿದ್ದೆ. ಅವರ ಮೇಲೆ ಅಟ್ಯಾಕ್ ಮಾಡಲು ನಾನು ಮಾನಸಿಕವಾಗಿ ಸಿದ್ಧನಾಗಿದ್ದೆ ಎಂದಿದ್ದಾರೆ.
ಬಿಗ್ ಬಾಸ್ ಕಾರ್ಯಕ್ರಮವನ್ನು ಕೋಟ್ಯಂತರ ಜನರು ನೋಡುತ್ತಾರೆ. ಅವರು ಯಾಕೆ ನಮ್ಮನ್ನು ನೋಡಬೇಕು ಎಂಬುದನ್ನು ನಾವೇ ಪ್ರಶ್ನೆ ಮಾಡಿಕೊಂಡಾಗ ನಾವು ಏನು ಮಾಡಬೇಕು ಎಂಬುದು ಗೊತ್ತಾಗುತ್ತದೆ. ಅಲ್ಲಿ ಪೈಪೋಟಿ ಅಲ್ಲ, ಒಬ್ಬರಿಗೊಬ್ಬರು ಹೊಡೆದಾಡುವುದೂ ಅಲ್ಲ. ಅಲ್ಲಿ ಪರ್ಫಾರ್ಮೆನ್ಸ್ ಬೇಕಾಗಿದೆ. ಅಲ್ಲಿ ಸೋಲು-ಗೆಲುವು ಮುಖ್ಯ ಅಲ್ಲ. ನಿಮಗೆ ಕೊಡುವ ಟಾಸ್ಕ್ಗಳನ್ನು ವಿಭಿನ್ನವಾಗಿ ಮಾಡುವುದು ಮುಖ್ಯ ಎಂದು ತಿಳಿಸಿದರು.
ನಾನು ಬಿಗ್ ಬಾಸ್ನಲ್ಲಿ ಸಖತ್ ಎಂಜಾಯ್ ಮಾಡಿದ್ದೇನೆ. ಇದು ನನಗೆ ಹೊಸ ಪ್ರಯೋಗ, ಹೊಸ ಕ್ಷೇತ್ರ. ಇಲ್ಲಿ ನಾನು ಎ, ಬಿ, ಸಿ, ಡಿ ಕಲಿಯುತ್ತಿರುವ ವಿದ್ಯಾರ್ಥಿ. ಅಲ್ಲಿ ಇರುವ ಎಲ್ಲರೂ ಪಿಹೆಚ್ಡಿ ಪಡೆದವರು. ಸಿನಿಮಾ, ಧಾರಾವಾಹಿಯಿಂದ ಬಂದವರು. ಅಂಥವರ ಮುಂದೆ ನಾನು ಏನು ಪ್ರಯತ್ನ ಮಾಡಿದೆನೋ ಗೊತ್ತಿಲ್ಲ. ನಾನು ತಯಾರಿ ಮಾಡಿಕೊಂಡು ಅಲ್ಲಿಗೆ ಹೋಗಿರಲಿಲ್ಲ. ಮಾಂಜಾ ಕೊಡಬೇಕು ಅಂತ ಹೋಗಿದ್ದೆ. ಮಾಂಜಾ ಕೊಟ್ಟೆ ಎಂದು ತಿಳಿಸಿದ್ದಾರೆ.
ಬಿಗ್ ಬಾಸ್ ನಿಂದ ಅವರು ಹೊರಬಂದಿದೆ ತಡ, ಇತ್ತ ಸಾಮಾಜಿಕ ಜಾಲತಾಣದಲ್ಲಿ ಲಾಯರ್ ಜಗದೀಶ್ ಅವರ ಪರವಾಗಿ ಅಪಾರ ಅಭಿಮಾನಿಗಳು ನೀವು ಮತ್ತೆ ಬಿಗ್ ಬಾಸ್ ಮನೆಗೆ ಹೋಗಬೇಕು, ನಿಮ್ಮಿಂದಲೇ ಬಿಗ್ ಬಾಸ್ ಶೋ ಎಂಜಾಯ್ ಮಾಡ್ತಿದೀವಿ, ಬಿಗ್ ಬಾಸ್ ಮನೆಯಲ್ಲಿ ನಿಮ್ಮಷ್ಟು ಎಂಟರ್ಟೈನ್ಮೆಂಟ್ ಯಾರು ಕೊಟ್ಟಿಲ್ಲ ಎಂದು ಅವರ ಕುರಿತು ಅನೇಕ ರೀತಿಯ ಪೋಸ್ಟ್ಗಳನ್ನು ಮಾಡಿದ್ದಾರೆ. ಲಾಯರ್ ಜಗದೀಶ್ ಅವರು ಮತ್ತೆ ಬಿಗ್ ಬಾಸ್ ಗೆ ಕಾಲಿಡುತ್ತಾರಾ ಎಂಬುದು ಕಾದು ನೋಡಬೇಕಾಗಿದೆ.