ಬೆಂಗಳೂರು : ಇನ್ನೊಬ್ಬರ ಮನೆ ಮುಂದೆ ಆಹಾರಕ್ಕೆ ಕೈಚಾಚಬಾರದು ಎಂದು ಉಚಿತ ಅಕ್ಕಿ ವಿತರಿಸಲಾಗುತ್ತಿದೆ ಎಂದು ವಿಶ್ವ ಆಹಾರ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದರು. ಇಂದು ವಿಧಾನಸೌಧದ ಬ್ಯಾಂಕ್ವೈಟ್ ಹಾಲ್ ನಲ್ಲಿ ವಿಶ್ವ ಆಹಾರ ದಿನಾಚರಣೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ನಾವೆಲ್ಲ ಮುದ್ದೆ ತಿನ್ನುತ್ತಿದ್ವಿ. ನೆಂಟರು ಬಂದಾಗ ಮಾತ್ರ ಅನ್ನ ತಿಂತಾ ಇದ್ದೆವು. ಉತ್ತರ ಕರ್ನಾಟಕ ಭಾಗದಲ್ಲಿ ಜೋಳದ ರೊಟ್ಟಿ ಮತ್ತು ಚಪಾತಿ ತಿನ್ನುತ್ತಿದ್ದರು. ನಮ್ಮಜ್ಜಿ ಹೊಟ್ಟೆ ತುಂಬಾ ಹಿಟ್ಟು, ಬಾಯಿ ತುಂಬಾ ಅನ್ನ ತಿನ್ನುತ್ತಿದ್ದರು. ನಮ್ಮ ಅಮ್ಮನ ಬಳಿ ಬಂದು ತುತ್ತು ಅನ್ನಕ್ಕಾಗಿ ಕಾಯುತ್ತಿದ್ದರು. ಇದಕ್ಕಾಗಿ ನಾನು ಸಿಎಂ ಆದ ಮೇಲೆ 1 ರೂಪಾಯಿಗೆ ಅಕ್ಕಿ ಕೊಟ್ಟೆ.
2013ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಉಚಿತ ಅಕ್ಕಿ ಕೊಟ್ಟೆ. ಇವತ್ತು ಯಾರು ಅನ್ನ ಇಲ್ಲದೆ ಮಲಗಬಾರದು ಎನ್ನುವ ಉದ್ದೇಶದಿಂದ ಎಲ್ಲರಿಗೂ ಉಚಿತವಾಗಿ ಅಕ್ಕಿ ವಿತರಿಸಲಾಗುತ್ತಿದೆ ಎಂದು ವಿಶ್ವ ಆಹಾರ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದರು.