ಬೆಂಗಳೂರು : ಮುಡಾ ಹಗರಣದಿಂದ ಸಿಎಂ ಸಿದ್ದರಾಮಯ್ಯ ಸಹಜವಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಲ್ಲದೆ ಹೈಕೋರ್ಟ್ ಕೂಡ ನಿನ್ನೆ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಯಾವುದೇ ಆದೇಶ ನೀಡದೆ ಆಗಸ್ಟ್ 29ರವರೆಗೆ ವಿಚಾರಣೆ ಮುಂದೂಡಿ ಎಂದು ಆದೇಶ ಹೊರಡಿಸಿದೆ.ಈ ಮಧ್ಯ ನಾನು ಸಾಮಾಜಿಕ ಅಸಮಾನತೆಯ ವಿರುದ್ಧವಾಗಿದ್ದೇನೆ, ಹಾಗಾಗಿ ಬಿಜೆಪಿಗೆ ನನ್ನ ಮೇಲೆ ಕೋಪ ಎಂದು ವಾಗ್ದಾಳಿ ನಡೆಸಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ನಡೆದ ರಾಜೀವ್ ಗಾಂಧಿ ಹಾಗೂ ದೇವರಾಜ್ ಅರಸ್ ಜನ್ಮ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಂಗ್ರೆಸ್ ಅಸಮಾನತೆಯ ವಿರುದ್ಧವಾಗಿದೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಅದಕ್ಕೆ ನನ್ನ ವಿರುದ್ಧ ಕೋಪ. ಅದಕ್ಕೆ ಮಾಡಬಾರದ್ದನ್ನು ಮಾಡ್ತಾರೆ. ಕೇಸ್ ಹಾಕಿಸಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ ಸಬ್ಕಾ ಸಾಥ್ ಸಬ್ಕಾ ವಿಕಾಸ್ ಅನ್ನುತ್ತಿದೆ. ಆದರೆ ಅದು ಸಬ್ಕಾ ವಿನಾಶ್. ಯಾವತ್ತೂ ಬಡವರು, ದಲಿತರ ಪರವಾಗಿ ಇರಲಿಲ್ಲ. ಬಿಜೆಪಿಯ ಬಾಯಿ ಮಾತು ಕೃತಿ ಸಂಬಂಧ ಇಲ್ಲ ಎಂದು ಕಿಡಿಕಾರಿದರು.ರಾಜೀವ್ ಗಾಂಧಿ ಸಾಮಾಜಿಕ ನ್ಯಾಯದ ಪರವಾಗಿದ್ದರು. ಚುನಾವಣೆಯಲ್ಲಿ ಮತದಾನದ ಹಕ್ಕನ್ನು 21 ರಿಂದ 18 ಕ್ಕೆ ನೀಡಿದರು. ರಾಜೀವ್ ಗಾಂಧಿ ಇದ್ದಿದ್ದರೆ ದೇಶದಲ್ಲಿ ವಾಸ್ತವಿಕವಾಗಿ ಬದಲಾವಣೆ ನಡೆಯುತ್ತಿತ್ತು ಎಂದರು.
ದೇವರಾಜ್ ಅರಸ್ ದೀರ್ಘ ಕಾಲ ರಾಜ್ಯದ ಸಿಎಂ ಆಗಿದ್ದರು. ಸಾಮಾಜಿಕ ನ್ಯಾಯದ ಹರಿಕಾರ ಎಂದು ಕರೆಯುತ್ತೇವೆ ಅವರನ್ನು ಸಮಾಜದ ಕಟ್ಟಕಡೆಯ ಮನುಷ್ಯರಿಗೂ ವಿಧಾನಸೌಧದ ಮೆಟ್ಟಿಲು ಹತ್ತಿಸಲು ಅವಕಾಶ ನೀಡಿದವರು. ಮಲ ಹೊರುವ ಪದ್ದತಿ ರದ್ದು ಮಾಡಿದ್ದು ದೇವರಾಜ್ ಅರಸ್. ಸಾಲಾ ಮನ್ನಾ ಸೇರಿದಂತೆ ಪ್ರಗತಿಪರ ಕಾನೂನು ಜಾರಿಗೆ ತಂದರು. ಹಿಂದುಳಿದವರು, ದಲಿತರು, ಬಡವರ ಪರವಾಗಿ ಕೆಲಸ ಮಾಡಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.