ಬೆಂಗಳೂರು: ಇಂದು ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶುತೋಷ್ ಕುಮಾರ್ ಸಿಂಗ್ ಸುದ್ದಿಗೋಷ್ಠಿ ನಡೆಸಿ, ಬೆಂಗಳೂರು ಪ್ರದೇಶದ ವಿವಿಧ ರೈಲ್ವೆ ಮೂಲಸೌಕರ್ಯ ಯೋಜನೆಗಳ ಕುರಿತು ಮಾಹಿತಿ ಹಂಚಿಕೊಂಡರು. ಆ ಸುದ್ದಿಗೋಷ್ಠಿಯ ಪ್ರಮುಖ ಹೈಲೈಟ್ಸ್ ಮುಂದಿದೆ ಓದಿ.
ಪತ್ರಿಕಾ ಗೋಷ್ಠಿಯಲ್ಲಿ , ಬೆಂಗಳೂರು ಪ್ರದೇಶದಲ್ಲಿ ಮತ್ತು ಸುತ್ತಮುತ್ತಲಿನ ವಿವಿಧ ನಡೆಯುತ್ತಿರುವ ರೈಲ್ವೆ ಮೂಲಸೌಕರ್ಯ ಯೋಜನೆಗಳು ಮತ್ತು ಅಂತಿಮ ಸ್ಥಳ ಸಮೀಕ್ಷೆಗೆ ಅನುಮೋದನೆ(Final Location Survey) ನೀಡಲಾದ ರೈಲ್ವೆ ಯೋಜನೆಗಳ ಕುರಿತು ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ವಿವರ ನೀಡಿದರು.
ಬೆಂಗಳೂರು ಕಂಟೋನ್ಮೆಂಟ್ ನಿಂದ ವೈಟ್ಫೀಲ್ಡ್ ಚತುಷ್ಪಥ ಹಳಿ ಯೋಜನೆಯು ಅಂದಾಜು ರೂ. 492.87 ಕೋಟಿ ರೂ ವೆಚ್ಚದಲ್ಲಿ ನಡೆಯುತ್ತಿದೆ. ಇದು 38 ಕಿಲೋಮೀಟರ್ ಒಳಗೊಂಡಿದೆ. ಇದರ ಸಂಪೂರ್ಣವನ್ನು ವೆಚ್ಚವನ್ನು ರೈಲ್ವೆ ಭರಿಸುತ್ತದೆ ಎಂದು ಅವರು ಮಾಹಿತಿ ನೀಡಿದರು. ಈ ಯೋಜನೆಯಲ್ಲಿ ಇದುವರೆಗೆ ಅರ್ಥ್ ವರ್ಕ್, ರೀಟೇನಿಂಗ್ ವಾಲ್ಸ್ ಮತ್ತು ಹಲವು ಸೇತುವೆ ವಿಸ್ತರಣೆ ಕಾಮಗಾರಿಗಳು ಸೇರಿದಂತೆ 75% ಕಾಮಗಾರಿಗಳು ಪೂರ್ಣಗೊಂಡಿವೆ. ಈ ಯೋಜನೆಯು ಈ ಮಾರ್ಗದ ಸಾಮರ್ಥ್ಯವನ್ನು ಹೆಚ್ಚಿಸಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಮೂಲಕ ಸಮಯವನ್ನು ಉಳಿಸುತ್ತದೆ. ಬೆಂಗಳೂರಿನೊಳಗೆ ಪ್ರಯಾಣವನ್ನು ವೇಗವಾಗಿ ಹೆಚ್ಚಿಸುವುದು ಮಾತ್ರವಲ್ಲದೆ ಸುಲಭವಾಗಿಸುತ್ತದೆ ಎಂದರು.
ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣವನ್ನು ರೂ 484.58 ಕೋಟಿ ರೂ. ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲಾಗುತ್ತಿದೆ. ಈ ಪುನರಾಭಿವೃದ್ಧಿಯಲ್ಲಿ ದಕ್ಷಿಣ ಮತ್ತು ಉತ್ತರ ಭಾಗಗಳಲ್ಲಿ ಹೊಸ ನಿಲ್ದಾಣ ಕಟ್ಟಡಗಳು ಬರಲಿವೆ. ನಿಲ್ದಾಣವು ಏರ್ ಕಾನ್ಕೋರ್ಸ್ಗಳು, ನಿರೀಕ್ಷಣಾ ಕೊಠಡಿಗಳು, ವಿಐಪಿ ಲಾಂಜ್ಗಳು, ಲಿಫ್ಟ್ಗಳು, ಎಸ್ಕಲೇಟರ್ಗಳು, ವಿಶ್ರಾಂತಿ ಕೊಠಡಿಗಳು, ಡಾರ್ಮಿಟರಿಗಳು ಮತ್ತು ನೆಲಮಾಳಿಗೆಯ ಪಾರ್ಕಿಂಗ್ನಂತಹ ಆಧುನಿಕ ಸೌಲಭ್ಯಗಳನ್ನು ಹೊಂದಿರುತ್ತದೆ. ಮೇಲ್ಛಾವಣಿಯ ಸೌರ ಫಲಕ ಅಳವಡಿಕೆ, ಒಳಚರಂಡಿ ಸಂಸ್ಕರಣಾ ಘಟಕ ಮತ್ತು ಮಳೆನೀರು ಕೊಯ್ಲು ವ್ಯವಸ್ಥೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು.
ಯಶವಂತಪುರ ರೈಲು ನಿಲ್ದಾಣವು ಅಂದಾಜು 377.86 ಕೋಟಿ ರೂ. ವೆಚ್ಚದಲ್ಲಿ ಪ್ರಮುಖ ಪುನರಾಭಿವೃದ್ಧಿಗೆ ಒಳಗಾಗುತ್ತಿದ್ದು, ನಿಲ್ದಾಣವನ್ನು 2 ಹಂತಗಳಲ್ಲಿ ಪುನರಾಭಿವೃದ್ಧಿ ಮಾಡಲಾಗುತ್ತಿದೆ ಎಂದರು. ಹಂತ 1 ರಲ್ಲಿ ಲಿನಿನ್ ಕೇಂದ್ರ, ಆರ್ಪಿಎಫ್ ಕಟ್ಟಡ, ಬಹು-ಹಂತದ ಪಾರ್ಕಿಂಗ್, ಪೂರ್ವ ಭಾಗದ ಎಲಿವೇಟೆಡ್ ಆಗಮನ/ನಿರ್ಗಮನ ಪ್ಲಾಜಾ, ಇತ್ಯಾದಿ ಸೌಲಭ್ಯಗಳು ಇರಲಿವೆ. ಹಂತ 2 ರಲ್ಲಿ, 4 ಅಂತಸ್ತಿನ ಪಶ್ಚಿಮ ಭಾಗದ ಹೊಸ ಕಟ್ಟಡ , ಪ್ರವೇಶ ಮತ್ತು ನಿರ್ಗಮನಕ್ಕಾಗಿ ಪ್ರತ್ಯೇಕ ಮಾರ್ಗ, ಪ್ಲಾಟ್ಫಾರ್ಮ್ಗಳ ಮೇಲೆ ಏರ್ ಕಾನ್ಕೋರ್ಸ್, ಪಾರ್ಕಿಂಗ್ ಗೆ ದಾರಿ ಇತ್ಯಾದಿಗಳನ್ನು ಒದಗಿಸಲಾಗುವುದು. ನಿಲ್ದಾಣದಲ್ಲಿ ಲಿಫ್ಟ್ಗಳು ಮತ್ತು ಎಸ್ಕಲೇಟರ್ಗಳನ್ನು ಒದಗಿಸಲಾಗುವುದು ಎಂದರು.
ಯಶವಂತಪುರದಿಂದ ಚನ್ನಸಂದ್ರ 25 ಕಿಲೋಮೀಟರ್ಗಳ ಡಬ್ಲಿಂಗ್ ಕಾಮಗಾರಿ ರೂ 683.57 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿದೆ. 48 ಕಿಲೋಮೀಟರ್ಗಳ ಬೈಯಪ್ಪನಹಳ್ಳಿಯಿಂದ ಹೊಸೂರು ಡಬ್ಲಿಂಗ್ ಯೋಜನೆಗೆ ರೂ 1148 ಕೋಟಿ. ವೆಚ್ಚವಾಗಲಿದ್ದು, 83% ಪ್ರಗತಿ ಕಂಡಿದೆ. ಕಾರ್ಮೆಲರಾಂ ನಿಂದ ಹೀಲಲಿಗೆವರೆಗಿನ ಭಾಗವು 2022-23 ರಲ್ಲಿ ಪೂರ್ಣಗೊಂಡಿದ್ದು ಉಳಿದ ಭಾಗದ ಕಾಮಗಾರಿ ಮುಂದುವರೆದಿದೆ ಎಂದರು.
ಮಾರಿಕುಪ್ಪಂನಿಂದ ಕುಪ್ಪಂವರೆಗಿನ ಹೊಸ ಮಾರ್ಗ ಯೋಜನೆಯು 23.7 ಕಿಲೋಮೀಟರ್ಗಳನ್ನು ಒಳಗೊಂಡಿದೆ. ಮಾರಿಕುಪ್ಪಂನಿಂದ ವಿರೂಪಾಕ್ಷಪುರ ವಿಭಾಗದ (4.3 ಕಿಮೀ) ಕೆಲಸ ಈಗ ನಡೆಯುತ್ತಿದೆ, ವಿರೂಪಾಕ್ಷಪುರದಿಂದ ಕುಪ್ಪಂ ವಿಭಾಗದ ಕಾಮಗಾರಿಗೆ ಟೆಂಡರ್ ಶೀಘ್ರದಲ್ಲೇ ಕರೆಯಲಾಗುವುದು. ಬೆಟ್ಟಹಲಸೂರುನಿಂದ ರಾಜನುಕುಂಟೆಗೆ 6.14 ಕಿಲೋಮೀಟರ್ಗಳ ಬೈಪಾಸ್ ಮಾರ್ಗಕ್ಕೆ 248.24 ಕೋಟಿ ರೂ.ಗಳಗೆ ಮಂಜೂರಾತಿ ನೀಡಲಾಗಿದ್ದು, ಪ್ರಸ್ತುತ ಭೂಸ್ವಾಧೀನ ಪ್ರಗತಿಯಲ್ಲಿದೆ.
ಬೆಂಗಳೂರಿನ ಸುತ್ತಮುತ್ತಲಿನ ಹಲವಾರು ರೈಲ್ವೆ ಯೋಜನೆಗಳಿಗೆ ಅಂತಿಮ ಸ್ಥಳ ಸಮೀಕ್ಷೆಗೆ ಅನುಮೋದನೆ ದೊರೆತಿದೆ. ಬೆಂಗಳೂರು ನಗರದ ಸುತ್ತಲಿನ ಸರ್ಕ್ಯುಲರ್ ರೈಲು ಯೋಜನೆಗೆ ಆಗಸ್ಟ್ 2025 ರೊಳಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಲ್ಲಿಸಲಾಗುವುದು.
ಯಲಹಂಕದಿಂದ ದೇವನಹಳ್ಳಿಗೆ ಡಬ್ಲಿಂಗ್ ಯೋಜನೆಯ (23.7 ಕಿಲೋಮೀಟರ್) ಡಿಪಿಆರ್ ಸಲ್ಲಿಸಲಾಗಿದೆ. 125 ಕಿಲೋಮೀಟರ್ ಉದ್ದದ ದೇವನಹಳ್ಳಿ-ಕೋಲಾರ-ಬಂಗಾರಪೇಟೆ ಡಬ್ಲಿಂಗ್ ಯೋಜನೆಯು ಡಿಪಿಆರ್ ಸಿದ್ಧತೆ ಹಂತದಲ್ಲಿದೆ. 47 ಕಿಲೋಮೀಟರ್ ಉದ್ದದ ವೈಟ್ಫೀಲ್ಡ್ನಿಂದ ಬಂಗಾರಪೇಟೆ ಚತುಷ್ಪಥ ಯೋಜನೆಗೆ ಡಿಪಿಆರ್ ಸಲ್ಲಿಸಲಾಗಿದೆ. ಬೈಯಪ್ಪನಹಳ್ಳಿ- ಹೊಸೂರು ಚತುಷ್ಫಥ ಯೋಜನೆಗೆ ಡಿಪಿಆರ್ ಸಲ್ಲಿಸಲಾಗಿದೆ. ಬೆಂಗಳೂರು- ತುಮಕೂರು 70 ಕಿಲೋಮೀಟರ್ ಉದ್ದದ ಚತುಷ್ಪಥ ಯೋಜನೆಯ ಡಿಪಿಆರ್ ಸಿದ್ಧಗೊಳ್ಳುತ್ತಿದೆ. ಚಿಕ್ಕಬಾಣಾವರ-ಕುಣಿಗಲ್-ಹಾಸನ ಜೋಡಿ ಮಾರ್ಗ ಯೋಜನೆಗೆ ಸಮೀಕ್ಷೆ ಪೂರ್ಣಗೊಂಡಿದ್ದು, ಇದು 166 ಕಿಲೋಮೀಟರ್ ಉದ್ದವಾಗಿದ್ದು, ಆಗಸ್ಟ್ 2025 ರೊಳಗೆ ಡಿಪಿಆರ್ ಸಲ್ಲಿಸಲಾಗುವುದು. ಬೆಂಗಳೂರು-ಮೈಸೂರು ಚತುಷ್ಪಥ ಯೋಜನೆ ಮತ್ತು ಬಂಗಾರಪೇಟೆ-ಜೋಲಾರಪೇಟೆ ಚತುಷ್ಪಥ ಯೋಜನೆಯ ಡಿಪಿಆರ್ಗಳನ್ನು ರೈಲ್ವೆ ಮಂಡಳಿಗೆ ಕಳುಹಿಸಲಾಗುವುದು ಎಂದು ಶ್ರೀ ಅಶುತೋಷ್ ಕುಮಾರ್ ಸಿಂಗ್ ಅವರು ಮಾಹಿತಿ ನೀಡಿದರು.
ಬೆಂಗಳೂರು ಪ್ರದೇಶದ ಪ್ರಮುಖ ರೈಲ್ವೆ ಮೂಲಸೌಕರ್ಯ ಯೋಜನೆಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ – ಅಶುತೋಷ್ ಮಾಥುರ್ ಮತ್ತು ಶ್ರೀ ಪರೀಕ್ಷಿತ್ ಮೋಹನ್ ಪುರಿಯಾ; ಮುಖ್ಯ ಎಂಜಿನಿಯರ್ (ನಿರ್ಮಾಣ), ಪ್ರೇಮ್ ನಾರಾಯಣ್ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಬೆಂಗಳೂರು ನೈರುತ್ಯ ರೈಲ್ವೆ ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಾಣೇಶ್ ಕೆ ಎನ್ ಮಾಹಿತಿ ಹಂಚಿಕೊಂಡಿದ್ದಾರೆ.
BREAKING : ಮೇ ತಿಂಗಳ `ಗೃಹಲಕ್ಷ್ಮಿ’ ಹಣ ಬಿಡುಗಡೆ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ