ಲೈಂಗಿಕ ಸಾಮರ್ಥ್ಯ ಮತ್ತು ಉತ್ತಮ ಲೈಂಗಿಕ ಜೀವನವನ್ನು ಕಾಪಾಡಿಕೊಳ್ಳುವುದು ಒಟ್ಟಾರೆ ಆರೋಗ್ಯದ ಒಂದು ಪ್ರಮುಖ ಭಾಗವಾಗಿದೆ. ಜೀವನಶೈಲಿಯಲ್ಲಿ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ವೈದ್ಯಕೀಯ ಚಿಕಿತ್ಸೆಯಿಲ್ಲದೆಯೇ ಲೈಂಗಿಕ ಕ್ರಿಯೆಯನ್ನು ಸುಧಾರಿಸಿಕೊಳ್ಳಲು ಸಾಧ್ಯವಿದೆ.
ಯೂನಿವರ್ಸಿಟಿ ಆಫ್ ಅಯೋವಾ ಹೆಲ್ತ್ ಕೇರ್ (UI Health Care) ಶಿಫಾರಸು ಮಾಡಿರುವ ಆರು ಪ್ರಮುಖ ಜೀವನಶೈಲಿ ಬದಲಾವಣೆಗಳು ಇಲ್ಲಿವೆ:
ಲೈಂಗಿಕ ಸಾಮರ್ಥ್ಯ ಹೆಚ್ಚಿಸಲು 6 ಜೀವನಶೈಲಿ ಬದಲಾವಣೆಗಳು
1. ದೇಹದ ತೂಕದ ನಿರ್ವಹಣೆ
ಹೆಚ್ಚಿನ ತೂಕವು ದೇಹದಲ್ಲಿ ಉರಿಯೂತವನ್ನು (inflammation) ಹೆಚ್ಚಿಸುತ್ತದೆ. ಇದು ‘ರಿಯಾಕ್ಟಿವ್ ಆಕ್ಸಿಜನ್ ಸ್ಪೀಸಿಸ್’ (ROS) ಎಂಬ ಅಂಶಗಳನ್ನು ಉತ್ಪಾದಿಸಿ, ಲೈಂಗಿಕ ಕ್ರಿಯೆಗೆ ಅಗತ್ಯವಿರುವ ನೈಟ್ರಿಕ್ ಆಕ್ಸೈಡ್ (Nitric Oxide) ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತದೆ. ತೂಕ ಇಳಿಸಿಕೊಳ್ಳುವುದರಿಂದ ಈ ಉರಿಯೂತ ಕಡಿಮೆಯಾಗಿ, ರಕ್ತ ಪರಿಚಲನೆ ಸುಧಾರಿಸುತ್ತದೆ.
2. ಪೌಷ್ಟಿಕ ಆಹಾರ ಸೇವನೆ
ಉತ್ತಮ ಪೋಷಕಾಂಶಗಳು ತೂಕ ನಿರ್ವಹಣೆಗೆ ಮಾತ್ರವಲ್ಲದೆ, ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತವೆ. ವಿಶೇಷವಾಗಿ ಮಧುಮೇಹ ಇರುವವರಲ್ಲಿ ಸಕ್ಕರೆ ಪ್ರಮಾಣ ಏರಿಕೆಯಾದಾಗ ROS ಮಟ್ಟ ಹೆಚ್ಚಾಗಿ ಲೈಂಗಿಕ ಸಮಸ್ಯೆಗಳು ಉಂಟಾಗುತ್ತವೆ. ಹಣ್ಣುಗಳು, ತರಕಾರಿ, ಧಾನ್ಯಗಳು ಮತ್ತು ಒಮೆಗಾ-3 ಸಮೃದ್ಧವಾಗಿರುವ ಮೀನುಗಳನ್ನು ಸೇವಿಸುವುದು ಉತ್ತಮ.
3. ನಿಯಮಿತ ವ್ಯಾಯಾಮ
ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ವೇಗವಾಗಿ ನಡೆಯುವುದು, ಸೈಕ್ಲಿಂಗ್ ಅಥವಾ ಈಜುವುದು ಲೈಂಗಿಕ ಆರೋಗ್ಯಕ್ಕೆ ವರದಾನ. ವ್ಯಾಯಾಮವು ಜನನಾಂಗಗಳಿಗೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ರಕ್ತನಾಳಗಳ ಆರೋಗ್ಯವನ್ನು ಸುಧಾರಿಸುತ್ತದೆ. ಅಧ್ಯಯನಗಳ ಪ್ರಕಾರ, ನಿಯಮಿತ ವ್ಯಾಯಾಮ ಮಾಡುವ ಪುರುಷರಲ್ಲಿ ನಪುಂಸಕತ್ವದ (ED) ಅಪಾಯ 30% ರಷ್ಟು ಕಡಿಮೆಯಿರುತ್ತದೆ.
4. ಒತ್ತಡ ನಿರ್ವಹಣೆ
ಮಾನಸಿಕ ಒತ್ತಡವು ದೇಹದಲ್ಲಿ ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸಿ, ಲೈಂಗಿಕ ಹಾರ್ಮೋನ್ ಆದ ಟೆಸ್ಟೋಸ್ಟೆರಾನ್ (Testosterone) ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಯೋಗ, ಧ್ಯಾನ ಅಥವಾ ಆಪ್ತರೊಂದಿಗೆ ಸಮಯ ಕಳೆಯುವ ಮೂಲಕ ಒತ್ತಡ ಕಡಿಮೆ ಮಾಡಿಕೊಂಡರೆ ಲೈಂಗಿಕ ಬಯಕೆ ಮತ್ತು ಸಾಮರ್ಥ್ಯ ಹೆಚ್ಚುತ್ತದೆ.
5. ಧೂಮಪಾನ ಮತ್ತು ಮದ್ಯಪಾನಕ್ಕೆ ಬ್ರೇಕ್
ಧೂಮಪಾನವು ರಕ್ತನಾಳಗಳನ್ನು ಕಿರಿದಾಗಿಸಿ ರಕ್ತ ಪರಿಚಲನೆಗೆ ಅಡ್ಡಿಪಡಿಸುತ್ತದೆ, ಇದು ಲೈಂಗಿಕ ಸಾಮರ್ಥ್ಯ ಕುಂದಲು ಪ್ರಮುಖ ಕಾರಣ. ಹಾಗೆಯೇ ಅತಿಯಾದ ಮದ್ಯಪಾನವು ನರಮಂಡಲದ ಮೇಲೆ ಪರಿಣಾಮ ಬೀರಿ ಲೈಂಗಿಕ ಸಂವೇದನೆಯನ್ನು ಕಡಿಮೆ ಮಾಡುತ್ತದೆ.
6. ಸಮರ್ಪಕ ನಿದ್ರೆ
ಹಾರ್ಮೋನ್ಗಳ ಸಮತೋಲನಕ್ಕೆ ಪ್ರತಿ ದಿನ 7 ರಿಂದ 9 ಗಂಟೆಗಳ ಕಾಲ ಗುಣಮಟ್ಟದ ನಿದ್ರೆ ಅಗತ್ಯ. ನಿದ್ರೆಯ ಕೊರತೆಯು ಟೆಸ್ಟೋಸ್ಟೆರಾನ್ ಮಟ್ಟವನ್ನು ಕುಗ್ಗಿಸಿ, ಲೈಂಗಿಕ ಆಸಕ್ತಿಯನ್ನು ಕಡಿಮೆ ಮಾಡುತ್ತದೆ.
ಸೂಚನೆ: ಈ ಬದಲಾವಣೆಗಳನ್ನು ಮಾಡಿಕೊಂಡ ನಂತರವೂ ಯಾವುದೇ ಸುಧಾರಣೆ ಕಂಡುಬರದಿದ್ದರೆ ಅಥವಾ ಗಂಭೀರ ಸಮಸ್ಯೆಗಳಿದ್ದರೆ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.
ರಾಜ್ಯ ಪ್ರಶಸ್ತಿಗಳ ಘೋಷಣೆ: ದೇವನೂರು ಮಹಾದೇವ ಅವರಿಗೆ ‘ಪಂಪ ಪ್ರಶಸ್ತಿ’, ಸಿದ್ದರಾಮ ಶರಣರಿಗೆ ‘ಬಸವ ಪುರಸ್ಕಾರ’








