ಬೆಂಗಳೂರು : ಸತತ ಮಳೆ ಆಗುತ್ತಿರುವುದರಿಂದ ಬೆಂಗಳೂರಿನ ಜನತೆ ಸಂಪೂರ್ಣವಾಗಿ ತತ್ತರಿಸಿ ಹೋಗಿದ್ದು ಮನೆಯಿಂದ ಹೊರಗಡೆ ಕಾಲಿಡಲು ಸಹ ಸಾಧ್ಯವಾಗುತ್ತಿಲ್ಲ. ಇದೀಗ ಇಂದು ಬೆಂಗಳೂರಿನಲ್ಲಿ ಮತ್ತೆ ಭಾರಿ ಮಳೆಯಾಗಿದ್ದು ಅದರಲ್ಲೂ, ರಿಚ್ಮಂಡ್ ಟೌನ್ ಬಳಿ ರಸ್ತೆ ಸಂಪೂರ್ಣವಾಗಿ ಜಲಾವೃತವಾಗಿದೆ.
ಇದೇ ವೇಳೆ ಬೆಂಗಳೂರಿನ ರಿಚ್ಮಂಡ್ ಟೌನ್ ಬಳಿ ರಸ್ತೆಯ ಪಕ್ಕ ನಿಲ್ಲಿಸಿದ್ದ ಸುಮಾರು 30ಕ್ಕೂ ಅಧಿಕ ಬೈಕ್ ಗಳು ಅರ್ಧದಷ್ಟು ನೀರಿನಲ್ಲಿ ಮುಳುಗಿವೆ. ಈ ಸಂದರ್ಭದಲ್ಲಿ ಮರ ಒಂದು ಬೈಕ್ ಗಳ ಮೇಲೆ ಬಿದ್ದಿರುವ ಘಟನೆ ನಡೆದಿದೆ.ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಲ್ಲದೆ ಫುಟ್ ಪಾತ್ ನಲ್ಲಿದ್ದ ಸಣ್ಣಪುಟ್ಟ ಅಂಗಡಿಗಳಿಗೂ ಸಹ ಮಳೆ ನೀರು ನುಗ್ಗಿದೆ.
ಬೆಂಗಳೂರು ಮಹಾನಗರದ ವಿಧಾನಸೌಧ, ಕೆ ಆರ್ ಸರ್ಕಲ್, ಮೈಸೂರು ಬ್ಯಾಂಕ್ ಸರ್ಕಲ್, ಮೆಜೆಸ್ಟಿಕ್, ಕೆ ಆರ್ ಮಾರ್ಕೆಟ್, ಕಾರ್ಪೊರೇಷನ್ ಸರ್ಕಲ್, ಶಾಂತಿನಗರ, ರಿಚ್ಮಂಡ್ ಸರ್ಕಲ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ.