ಬೆಂಗಳೂರು: ಭೂಮಿಗೆ ಸಂಬಂಧಿಸಿದ ಸರ್ಕಾರದ ಎಲ್ಲಾ ಸೇವೆಗಳನ್ನು ಒಂದೇ ವ್ಯವಸ್ಥೆಯ ಅಡಿಯಲ್ಲಿ ತರುವ ಮಹಾತ್ವಕಾಂಕ್ಷಿ ULMS (Unified Land Management System) ಯೋಜನೆಯ ಅನುಷ್ಠಾನಕ್ಕೆ ಸರ್ಕಾರದ ದೃಢ ಹೆಜ್ಜೆಯನ್ನು ಇಟ್ಟಿದೆ ಎಂಬುದಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ಈ ಕುರಿತಂತೆ ಎಲ್ಲಾ ಸಂಬಂಧಿಸಿದ (ಕಂದಾಯ, ನಗರಾಭಿವೃದ್ಧಿ, ನೋಂದಣಿ, ಲೋಕೋಪಯೋಗಿ, ನೀರಾವರಿ, ವಸತಿ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಇತ್ಯಾದಿ ಇಲಾಖೆಗಳ) ಹಿರಿಯ ಅಧಿಕಾರಿಗಳ ಸಭೆಯನ್ನು ಮಾನ್ಯ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ULMS ಗಣಕೀಕೃತ ಏಕ ವ್ಯವಸ್ಥೆಯಡಿ ಸರ್ವೆ, ಭೂ ಪರಿವರ್ತನೆ, ಬಡಾವಣೆ ಪ್ಲಾನ್ ಮಂಜೂರಿ, ಮನೆ ಪ್ಲಾನ್ ಮಂಜೂರಿ, ನಿವೇಶನ ಮಾರಾಟ, ಇ-ಖಾತಾ ಸೃಜನೆ (ಸ್ಥಳೀಯ ಸಂಸ್ಥೆಯಲ್ಲಿ), ಆಸ್ತಿ ತೆರಿಗೆ ಸಂಗ್ರಹ, ಭೂಸ್ವಾಧೀನ ಹಾಗೂ ಇನ್ನೂ ಅನೇಕ ಭೂ ಸಂಬಂಧಿತ ಚಟುವಟಿಕೆಗಳನ್ನು ಸರಾಗ, ಸುಲಭ, ಪಾರದರ್ಶಕ ಮತ್ತು ಜನಸ್ನೇಹಿಯಾದ ಒಂದೇ ಆನ್ಲೈನ್ ವ್ಯವಸ್ಥೆಗೆ ತರುವ ಯೋಜನೆಯಾಗಿದೆ. ಇದರಿಂದ ಜನರಿಗೆ ಬೇರೆ ಬೇರೆ ಕಛೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ ಭೂಮಿಗೆ ಸಂಬಂಧಿಸಿದ ಸೇವೆಗಳನ್ನು ಸರಳವಾಗಿ ಪಡೆದುಕೊಳ್ಳಬಹುದಾದ ಅತ್ಯಂತ ಪ್ರಮುಖ ಆಡಳಿತ ಸುಧಾರಣಾ ಕ್ರಮವಾಗಿದೆ.
ULMS ಮುಖಾಂತರ ಭೂ ಮಾಲಿಕತ್ವದ ಮೂಲ ದಾಖಲೆಗಳನ್ನು ದೃಢಪಡಿಸುವುದು, ಸರ್ವೆ ನಕ್ಷೆಯನ್ನು ಡಿಜಿಟಲ್ ರೂಪದಲ್ಲಿ ಒದಗಿಸುವುದು, ಭೂ ಪರಿವರ್ತನೆ, ಬಡಾವಣೆಗಳ ಅನುಮೋದನೆ, ಕಟ್ಟಡ ನಕ್ಷೆ ಅನುಮೋದನೆ, ಖಾತೆ ಪಡೆಯುವುದು ಇತ್ಯಾದಿ ಪ್ರಕ್ರಿಯೆಗಳನ್ನು ಏಕೀಕೃತ ನೇರ ಆನ್ಲೈನ್ ವ್ಯವಸ್ಥೆಯಡಿಯಲ್ಲಿ ತರಲಾಗುವುದು. ಇದರಿಂದ ಭೂಮಿ ಬಡಾವಣೆ ನಿವೇಶನದ ದಾಖಲೆಗಳು ಒಂದೇ ಕಡೆ ದೊರೆಯುವಂತಾಗುತ್ತದೆ. ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಸರಾಗವಾಗಿ, ವಿವಿಧ ಕಛೇರಿ ಇಲಾಖೆಗಳಿಗೆ ಆನ್ಲೈನ್ನಲ್ಲಿ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸುವ ಅವಶ್ಯಕತೆ ಇಲ್ಲದೆ, ಸ್ವಯಂಚಾಲಿತವಾಗಿ ಕಡತ ಸಾಗುವ ವ್ಯವಸ್ಥೆ ಇದು. ಕಾಲಮಿತಿಯೊಳಗೆ ತೀರ್ಮಾನಿಸುವ ವ್ಯವಸ್ಥೆಯಿರುವುದರಿಂದ ವಿಳಂಬಕ್ಕೆ ಕಡಿವಾಣ ಬೀಳಲಿದೆ. ಈ ವ್ಯವಸ್ಥೆಯಿಂದ ನಕಲಿ/ಅಕ್ರಮ ಭೂ ವ್ಯವಹಾರಗಳಿಗೆ ಕಡಿವಾಣ ಬೀಳಲಿದೆ. ಹಾಗೆಯೇ ಇದು ಅಮಾಯಕರಿಗೆ ವಂಚನೆಯಿಂದ ರಕ್ಷಣೆ ನೀಡಲಿದೆ. ಇದರಿಂದ ಭೂ ವ್ಯವಹಾರ, ಮಾಲಿಕತ್ವದ ಗೊಂದಲ ಗೋಜುಗಳಿಗೆ ಮುಕ್ತಿ ನೀಡಿ ವ್ಯಾಜ್ಯಗಳನ್ನು ತಗ್ಗಿಸಿ, ಭೂಮಾಲಿಕತ್ವದ ಖಚಿತತೆ ಸಾಧಿಸಬಹುದು.
ಹಾಲಿ ವ್ಯವಸ್ಥೆಯಲ್ಲಿ ದಾಖಲೆಗಳ ಖಚಿತತೆ, ದೃಢೀಕರಣ ಸಮರ್ಪಕವಾಗಿ ಆಗುತ್ತಿಲ್ಲ ಮತ್ತು ಕಾಗದದಲ್ಲಿ ದೃಢೀಕರಣ ಮಾಡುವ ಪದ್ಧತಿ ನೈಜತೆಯನ್ನು ಖಾತ್ರಿಪಡಿಸುತ್ತಿಲ್ಲ. ಆನ್ಲೈನ್ ವ್ಯವಸ್ಥೆಯಲ್ಲಿ ಮೂಲ ದಾಖಲೆಗಳನ್ನು ನೇರವಾಗಿ ಅಧಿಕೃತ ಅಧಿಕಾರಿಯಿಂದ ಪಡೆಯಲಾಗುವುದು. ಬಲ್ಲ/ನಂಬಿಕಾರ್ಹ ಮೂಲ/ಅಧಿಕಾರಿ/ಪ್ರಾಧಿಕಾರದ ಮೂಲಕ ದಾಖಲೆ ಪಡೆಯಲಾಗುವುದರಿಂದ ಕಾಗದಗಳ ನೈಜತೆಯ ಅನುಮಾನಕ್ಕೆ ಮುಂದೆ ಅವಕಾಶವಿರುವುದಿಲ್ಲ. ಸರ್ವೆ ನಕ್ಷೆಯನ್ನು ಸಂಬಂಧಿಸಿದ ಅಧಿಕಾರಿ ನೇರವಾಗಿ ಒದಗಿಸಬೇಕಾಗಿರುತ್ತದೆ. ಇದರಿಂದ ಸ್ಪಷ್ಟ ಜವಾಬ್ದಾರಿ ನಿಗದಿಯಾಗುವುದರಿಂದ ತಪ್ಪುಗಳಿಗೆ ಕಡಿವಾಣ ಬೀಳಲಿದೆ. ಮೂಲ ದಾಖಲೆಗಳ ಅಸಲೀತನ ಖಾತರಿಪಡಿಸಿಕೊಂಡರೆ ಮುಂದೆ ಆಗಬಹುದಾದ ಅನೇಕ ತಕರಾರು, ವ್ಯಾಜ್ಯಗಳನ್ನು ತಪ್ಪಿಸಿ ನೆಮ್ಮದಿಯ ಮಾಲಿಕತ್ವ ನೀಡಬಹುದು. ದಾಖಲೆಗಳು ದೃಢೀಕೃತವಾದರೆ, ನಕಲಿ/ಅಕ್ರಮ/ವ್ಯಾಜ್ಯಗಳು ತಗ್ಗಿದರೆ ಭ್ರಷ್ಟಾಚಾರವೂ ತಗ್ಗುತ್ತದೆ. ಸರಾಗವಾಗಿ ಭೂ ವ್ಯವಹಾರ ನಡೆಸಲು ಇದು ಸಹಕಾರಿಯಾದ ಹೆಜ್ಜೆ. ಇದರಿಂದ ಭೂಮಿಯ ನೈಜ ಆರ್ಥಿಕ ಮೌಲ್ಯ ಮತ್ತು ಆದಾಯ ಹೆಚ್ಚಾಗುತ್ತದೆ. ಇತರೆ ಆರ್ಥಿಕ ಚಟುವಟಿಕೆಗಳಿಗೂ ಪ್ರೋತ್ಸಾಹವಾಗುತ್ತದೆ ಹಾಗೂ ಆಡಳಿತ ಸರಳೀಕರಣವಾಗುತ್ತದೆ. ಒಂದೇ ಕಡೆ ಆಸ್ತಿ ವ್ಯವಹಾರ/ಖರೀದಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಲಭ್ಯವಾಗುವುದರಿಂದ ದಾಖಲೆ ಪರಿಶೀಲಿಸುವುದು/ದೃಢಪಡಿಸಿಕೊಳ್ಳುವುದು ಸುಲಲಿತವಾಗಲಿದೆ. ಈ ವ್ಯವಸ್ಥೆಯ ಮುಖಾಂತರ ಮುಂದಿನ ಪ್ರತಿಯೊಂದು ಭೂ ಆಸ್ತಿಗೆ ತನ್ನದೇ ಆದಂತ ಏಕಮಾತ್ರ ಭೂಮಿ ಗುರುತಿನ ಸಂಖ್ಯೆ (ULPIN) ಅಥವಾ ಭೂ ಆಧಾರ್ ನೀಡುವುದರಿಂದ ಸಂಪೂರ್ಣ ಪಾರದರ್ಶಕತೆ, ಖಚಿತತೆ, ಮಾಲಿಕತ್ವದ ಗ್ಯಾರಂಟಿ ನೀಡಬಹುದು.
ULMS ಭೂಮಿ ವ್ಯವಹಾರ, ನಕ್ಷೆ ಮಂಜೂರಾತಿ ಇಂತಹ ಚಟುವಟಿಕೆಗಳಿಗೂ ಮೀರಿದ ಹಲವು ಹೆಜ್ಜೆ ಮುಂದೆ ಹೋಗಿ ಭೂ ಸ್ವಾಧೀನ, ಆಸ್ತಿ ತೆರಿಗೆ, ಮಾಸ್ಟರ್ ಪ್ಲಾನ್, ನಗರಾಭಿವೃದ್ಧಿ ಪ್ರಾಧಿಕಾರಗಳ ನಿವೇಶನ ಹಂಚಿಕೆ ಹೀಗೆ ಅನೇಕ ಸೇವೆ/ಚಟುವಟಿಕೆಗಳನ್ನು ಏಕ ವ್ಯವಸ್ಥೆಗೆ ತರಲಿದೆ. ಇದರಿಂದ ಭೂಸ್ವಾಧೀನ ತ್ವರಿತಗೊಳ್ಳಲಿದೆ ಮತ್ತು ಈ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ವ್ಯವಸ್ಥಿತ ಅಕ್ರಮಗಳಿಗೂ ಕಡಿವಾಣ ಬೀಳಲಿದೆ. ಆಸ್ತಿ ತೆರಿಗೆ ವ್ಯವಸ್ಥೆಯಲ್ಲಿರುವ ತಾರತಮ್ಯಗಳು ಅಂದರೆ ಅಸ್ತಿ ತೆರಿಗೆ ವಂಚನೆ, ಕಡಿಮೆ ಪಾವತಿಸುವುದು ಇವುಗಳನ್ನು ಸರಿಪಡಿಸಿ, ಗ್ರಾಮ ಪಂಚಾಯ್ತಿ ಮತ್ತು ನಗರಾಡಳಿತ ಸಂಸ್ಥೆಗಳನ್ನು ಆರ್ಥಿಕವಾಗಿ ಬಲಪಡಿಸುವುದು ಸಾಧ್ಯವಾಗಲಿದೆ.
ಇಂದು ಅನೇಕರಿಗೆ ಭೂ ಮಾಲಿಕತ್ವದ ವ್ಯವಸ್ಥೆ ಆರ್ಥಿಕ ಶಕ್ತಿ ಮತ್ತು ನೆಮ್ಮದಿ ನೀಡುವುದರ ಬದಲಿಗೆ ಗೊಂದಲ, ಅನಿಶ್ಚಿತತೆ, ವ್ಯಾಜ್ಯಗಳು ಗೂಡಾಗಿ ಪರಿಣಮಿಸಿದೆ. ಹಾಲಿ ವ್ಯವಸ್ಥೆ ಆಸ್ತಿಗಳ ಆರ್ಥಿಕ ಮೌಲ್ಯ, ಆದಾಯ, ಉತ್ಪಾದನೆಯನ್ನು ತಗ್ಗಿಸುತ್ತಿದೆ. ಜನಗಳಿಗೆ ನೆಮ್ಮದಿಯಿಲ್ಲ ಮತ್ತು ಸಮಾಜಕ್ಕೆ ಲಾಭವಿಲ್ಲ. ದೇಶದ ನ್ಯಾಯಾಲಯಗಳಲ್ಲಿರುವ ಶೇ. 50ಕ್ಕೂ ಹೆಚ್ಚು ವ್ಯಾಜ್ಯಗಳು ಭೂಮಿ/ಮಾಲಿಕತ್ವ ಸಂಬಂಧಿಸಿದವುಗಳು. ಈ ಭೂವ್ಯಾಜ್ಯಗಳಿಂದ ಮತ್ತು ಅನಿಶ್ಚಿತತೆಯಿಂದ ನಾವು ಭೂ ಗ್ಯಾರಂಟಿಯಡಿಗೆ ಸಾಗಲು ULMS ಪರಿಣಾಮಕಾರಿ ಮಾರ್ಗವಾಗಲಿದೆ. ಇದರಿಂದ ಜನಗಳ ಕೇಂದ್ರಿತ, ಜನಪರ ಆಡಳಿತ ಸುಧಾರಣೆ ಸಾಧ್ಯ. ಈ ಏಕೀಕೃತ ವ್ಯವಸ್ಥೆಯನ್ನು ಸಂಬಂಧಿಸಿದ ಎಲ್ಲಾ ಇಲಾಖೆಗಳು ಮುಂದಿನ 6 ತಿಂಗಳುಗಳಲ್ಲಿ ಅನುಷ್ಠಾನಕ್ಕೆ ತರಬೇಕೆಂದು ಸೂಚಿಸಲಾಯಿತು.
ಗಂಡ ಸತ್ತ ಒಂದು ವಾರದಲ್ಲೇ ಪತ್ನಿ ಹಿಂದೆ ಬಿದ್ದ ಪೊಲೀಸಪ್ಪ: ಕಿರುಕುಳಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆ
ಬೆಂಗಳೂರಲ್ಲಿ ಓರ್ವ ಡ್ರಗ್ ಪೆಡ್ಲರ್ ಅರೆಸ್ಟ್, 3.8 ಲಕ್ಷ ಮೌಲ್ಯದ 35 ಗ್ರಾಂ ಮಾದಕ ವಸ್ತು ವಶಕ್ಕೆ








