ಕಲಬುರಗಿ : ಕಲಬುರಗಿ ಜಿಲ್ಲೆಯಲ್ಲಿ ಬೆಳೆ ವಿಮೆ ಹಾಗೂ ಬೆಳೆಹಾನಿ ಸೇರಿದಂತೆ 2,36,933 ರೈತರಿಗೆ ಒಟ್ಟು ₹667.73 ಕೋಟಿ ಪರಿಹಾರ ನೀಡಲಾಗುತ್ತಿದ್ದು, ರಾಜ್ಯ ಸರ್ಕಾರದಿಂದ ಜಿಲ್ಲೆಯ ರೈತರಿಗೆ ಇಷ್ಟು ದೊಡ್ಡ ಮೊತ್ತದ ಬೆಳೆ ವಿಮೆ ಪರಿಹಾರ ನೀಡುವ ಮೂಲಕ ನೂತನ ದಾಖಲೆ ಸೃಷ್ಟಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ತೊಗರಿ, ಹೆಸರು, ಉದ್ದು, ಸೋಯಾಬೀನ್, ಹತ್ತಿ ಹಾಗೂ ಇತರೆ ಬೆಳೆಗಳನ್ನು ಬೆಳೆದಿದ್ದ ಕಲಬುರಗಿ ಜಿಲ್ಲೆಯ 2,04,073 ರೈತರು, ಬೆಳೆ ವಿಮೆ ಯೋಜನೆಯಡಿ ವಿಮೆ ಪರಿಹಾರ ಕೋರಿ 2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ನೋಂದಾವಣೆ ಮಾಡಿಕೊಂಡಿದ್ದು, ₹575.194 ಕೋಟಿ ಬೆಳೆ ವಿಮೆ ಪರಿಹಾರ ಮಂಜೂರಾಗಿದೆ. ಜಿಲ್ಲೆಯಲ್ಲಿ 4.36 ಲಕ್ಷ ರೈತರು ತೊಗರಿ, ಹೆಸರು, ಉದ್ದು, ಸೋಯಾಬೀನ್, ಹತ್ತಿ ಮತ್ತಿತರೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಈ ಪೈಕಿ ಸ್ಥಳೀಯ ಪ್ರಕೃತಿ ವಿಕೋಪದಡಿ ದೂರುಗಳನ್ನು ಸಲ್ಲಿಸಿದ 2,01,847 ರೈತರಿಗೆ ಮಧ್ಯಂತರ ಪರಿಹಾರವಾಗಿ ₹76.34 ಕೋಟಿ ಪರಿಹಾರ ಈಗಾಗಲೇ ನೀಡಲಾಗಿದೆ ಎಂದು ಹೇಳಿದ್ದಾರೆ.
ಜಿಲ್ಲೆಯ ರೈತರು ಬೆಳೆಯುತ್ತಿರುವ ತೊಗರಿಗೆ ಕ್ವಿಂಟಾಲ್ ಒಂದಕ್ಕೆ ₹7550 ಬೆಂಬಲ ಬೆಲೆ ನಿಗದಿ ಮಾಡಿದ್ದು, ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್ಗೆ ₹450 ಪ್ರೋತ್ಸಾಹಧನವನ್ನು ನಿಗದಿ ಮಾಡಿದೆ. ಜಿಲ್ಲೆಯ 9189 ರೈತರಿಗೆ ₹108.30 ಕೋಟಿ ಸಹಾಯಧನವನ್ನು ವಿತರಿಸಲಾಗಿದೆ. 2024-25 ನೇ ಸಾಲಿನಲ್ಲಿ ಆಗಸ್ಟ್ ಕೊನೆಯ ವಾರ ಹಾಗೂ ಸೆಪ್ಟೆಂಬರ್ ತಿಂಗಳ ಮೊದಲನೆ ವಾರದಲ್ಲಿ ಸುರಿದ ಹೆಚ್ಚಿನ ಮಳೆಯಿಂದಾಗಿ ಒಟ್ಟು 16,373 ಹೆಕ್ಟೇರ್ನಷ್ಟು ಬೆಳೆ ಹಾನಿಯಾಗಿದ್ದು, ರಾಷ್ಟ್ರೀಯ ಹಾಗೂ ರಾಜ್ಯ ಬರ ಪರಿಹಾರ ನಿಧಿ ಮಾರ್ಗ ಸೂಚಿಯಂತೆ 35,086 ರೈತರಿಗೆ ₹13.47 ಕೋಟಿ ಪರಿಹಾರವನ್ನು ನೀಡಲಾಗಿದೆ ಎಂದರು.
ರೈತವಾರು ಮಾಹಿತಿಯನ್ನು ಸಂರಕ್ಷಣಾ ಪೋರ್ಟಲ್ನಲ್ಲಿ ದಾಖಲಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿಯೇ ಬೆಳೆ ವಿಮೆ ಪರಿಹಾರ ರೈತರ ಖಾತೆಗೆ ನೇರವಾಗಿ ಜಮೆಯಾಗಲಿದೆ. ರೈತರ ಹಿತ ಕಾಯುವುದಕ್ಕೆ ನಮ್ಮ ಸರ್ಕಾರ ಕಟಿಬದ್ಧವಾಗಿದ್ದು, ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ಬೆಳೆ ಹಾನಿ ಉಂಟಾಗಿ ನಷ್ಟ ಅನುಭವಿಸುವ ರೈತರಿಗೆ ಸೂಕ್ತ ಮತ್ತು ಸಕಾಲಿಕ ಪರಿಹಾರ ಒದಗಿಸುತ್ತಿದೆ. ಸಂಕಷ್ಟಕ್ಕೆ ಸಿಲುಕಿದ ಅನ್ನದಾತನಿಗೆ ಸದಾ ಒತ್ತಾಸೆಯಾಗಿ ನಿಲ್ಲುವ ಹೊಣೆಗಾರಿಕೆಯನ್ನು ಪ್ರದರ್ಶಿಸುತ್ತಿದೆ ಎಂದು ಹೇಳಿದ್ದಾರೆ.