ವಿಜಯನಗರ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 3.50 ಲಕ್ಷ ಅಕ್ರಮ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲಾಗಿದ್ದು, ಉಳಿದ 1 ಲಕ್ಷದಷ್ಟು ಪಂಪ್ ಸೆಟ್ ಗಳನ್ನು ಶೀಘ್ರದಲ್ಲೇ ಸಕ್ರಮಗೊಳಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಹಾಗೂ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಇಂಧನ ಇಲಾಖೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
“ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ, ಪಂಪ್ ಸೆಟ್ ಗಳ ಅಕ್ರಮ-ಸಕ್ರಮ ಯೋಜನೆಯಡಿ 4.5 ಲಕ್ಷ ಅರ್ಜಿಗಳು ಬಾಕಿ ಇದ್ದವು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಕಾರದಿಂದ ಈಗಾಗಲೇ 3.5 ಲಕ್ಷ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲಾಗಿದೆ. ಉಳಿದವುಗಳನ್ನು ಸಕ್ರಮಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ಮಧ್ಯೆ, ನವೀಕೃತ ಶೀಘ್ರ ಸಂಪರ್ಕ ಯೋಜನೆಯಡಿ ತಾವೇ ಮೂಲ ಸೌಕರ್ಯ ಕಲ್ಪಿಸಿಕೊಳ್ಳುವವರ ಸಂಪರ್ಕಗಳನ್ನು ಸಕ್ರಮಗೊಳಿಸಲಾಗುತ್ತಿದೆ,” ಎಂದರು.
“ವಿದ್ಯುತ್ ಜಾಲಕ್ಕೆ ಅಕ್ರಮವಾಗಿ ಹುಕ್ ಹಾಕಿ ವಿದ್ಯುತ್ ಪಡೆಯುವುದರಿಂದ ಲೋಡ್ ಹೆಚ್ಚಾಗಿ ಪರಿವರ್ತಕಗಳು ಹಾಳಾಗುತ್ತಿವೆ. ಇದನ್ನು ತಡೆಯುವ ಕೆಲಸ ಮಾಡಬೇಕು. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಅದಕ್ಕೇ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿಸಲಾಗುವುದು,” ಎಂದು ಸಚಿವರು ಎಚ್ಚರಿಕೆ ನೀಡಿದರು.
“ರೈತರಿಗೆ ಹಗಲು ಹೊತ್ತಿನಲ್ಲಿ ವಿದ್ಯುತ್ ನೀಡುವ ನಿಟ್ಟಿನಲ್ಲಿ ಕುಸುಮ್- ಬಿ ಹಾಗೂ ಕುಸುಮ್- ಸಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗುತ್ತಿದೆ. ಕುಸುಮ್- ಬಿ ಯೋಜನೆಗೆ ರಾಜ್ಯ ಸರ್ಕಾರ ಶೇ.50ರಷ್ಟು ಸಬ್ಸಿಡಿ ನೀಡುತ್ತಿದೆ. ಸೋಲಾರ್ ಪಂಪ್ಸೆಟ್ಗಳು ಸರಿಯಾಗಿ ಕೆಲಸ ಮಾಡುವುದಿಲ್ಲ ಎನ್ನುವ ಅನುಮಾನ ಬೇಡ. 10 ಹೆಚ್.ಪಿ. ವರೆಗೂ ಸೋಲಾರ್ ಪಂಪ್ ಸೆಟ್ ಗಳನ್ನು ಬಳಸಬಹುದಾಗಿದೆ,” ಎಂದು ಹೇಳಿದರು.
“ತಾಂಡಾ, ದೊಡ್ಡಿಗಳಲ್ಲಿ ಅಕ್ರಮ ವಿದ್ಯುತ್ ಸಂಪರ್ಕ ಹೆಚ್ಚಿವೆ. ಇವರಿಗೆ ಅಧಿಕೃತವಾಗಿ ವಿದ್ಯುತ್ ಪಡೆಯುವಂತೆ ಕ್ರಮ ವಹಿಸಬೇಕು. ಆದರೆ, ಏಕಾಏಕಿ ವಿದ್ಯುತ್ ಸಂಪರ್ಕ ಕಡಿತಗೊಳಿಸಬಾರದು,” ಎಂದು ಅಧಿಕಾರಿಗಳಿಗೆ ಸೂಚಿಸಿದರು.
“ಸಮರ್ಪಕ ವಿದ್ಯುತ್ ಪೂರೈಸಲು ಪ್ರಸಕ್ತ ವರ್ಷ 100 ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರತಿ ವರ್ಷವೂ ಹೊಸ ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸಲಾಗುವುದು. ಹೊಸ ಸಬ್ ಸ್ಟೇಷನ್ ನಿರ್ಮಾಣಕ್ಕೂ ಮುನ್ನ ಲಿಂಕ್ಲೈನ್ ಸರಿಯಾಗಿ ಮಾಡಬೇಕು,” ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
“ಹಾಳಾದ ವಿದ್ಯುತ್ ಪರಿವರ್ತಕಗಳನ್ನು ಬದಲಿಸುವಾಗ ಇಲಾಖೆಯ ವಾಹನದಲ್ಲಿಯೇ ಸಾಗಿಸಿ ಅಳವಡಿಸಿಬೇಕು. ರೈತರೇ ತಮ್ಮ ವಾಹನದಲ್ಲಿ ಟಿ.ಸಿ ಗಳನ್ನು ತರುವಂತಹ ಪರಿಸ್ಥಿತಿ ನಿರ್ಮಾಣವಾಗಬಾರದು. ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳ ಜತೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು,” ಎಂದು ಹೇಳಿದರು.
ಸಭೆಯಲ್ಲಿ ಸಂಸದ ಇ.ತುಕಾರಾಮ್ , ಶಾಸಕರಾದ ಹೆಚ್. ಆರ್. ಗವಿಯಪ್ಪ, ಕೆ. ನೇಮಿರಾಜ್ ನಾಯ್ಕ, ಡಾ. ಎನ್. ಟಿ. ಶ್ರೀನಿವಾಸ್, ಎಲ್. ಕೃಷ್ಣ ನಾಯ್ಕ್, ಲತಾ ಮಲ್ಲಿಕಾರ್ಜುನ, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ್ ಹರವಾಳ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ, ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೈ ಸೇರಿದಂತೆ ಹಲವರು ಇದ್ದರು.
110/11 ವಿದ್ಯುತ್ ಉಪಕೇಂದ್ರ ಲೋಕಾರ್ಪಣೆ
ಇಂಧನ ಇಲಾಖೆ ಪ್ರಗತಿ ಪರಿಶೀಲನಾ ಸಭೆಗೂ ಮನ್ನ ಸಚಿವ ಕೆ.ಜೆ.ಜಾರ್ಜ್ ಅವರು, ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಬೈಲೊದ್ದಿಗೆರೆ ಗ್ರಾಮದಲ್ಲಿ ಹೊಸ ವಿದ್ಯುತ್ ಉಪ ಕೇಂದ್ರವನ್ನು ಉದ್ಘಾಟಿಸಿದರಲ್ಲದೆ, ನಾಗೇನಹಳ್ಳಿ ಗ್ರಾಮದ ಬಳಿ 22.86 ಕೋಟಿ ರೂ., ಹೊಸಪೇಟೆ ಜಿಲ್ಲಾಧಿಕಾರಿಗಳ ಕಚೇರಿ ಬಳಿ 27.65 ಕೋಟಿ ರೂ. ವೆಚ್ಚದ ಎರಡು 110/11 ಕೆ.ವಿ. ವಿದ್ಯುತ್ ಉಪ ಕೇಂದ್ರ, ಕೂಡ್ಲಿಗಿ ತಾಲೂಕಿನ ನರಸಿಂಹಗಿರಿ ಗ್ರಾಮದ ಬೆಳಗಟ್ಟ ಬಳಿ 22.47 ಕೋಟಿ ರೂ. ವೆಚ್ಚದ 66/11 ಕೆ.ವಿ ವಿದ್ಯುತ್ ಉಪ ಕೇಂದ್ರದ ಭೂಮಿಪೂಜೆ ನೆರವೇರಿಸಿದರು.
ಛಲವಾದಿ ನಾರಾಯಣ ಸ್ವಾಮಿ, ಆರ್.ಅಶೋಕ್ ಗೆ ರಾಜಕೀಯ ವಿವೇಕ ಇಲ್ಲ: ಸಚಿವ ಎನ್ ಚಲುವರಾಯಸ್ವಾಮಿ ವಾಗ್ಧಾಳಿ
ಮಂಡ್ಯ ಕೃಷಿ ವಿವಿಗೆ ಮೂಲಸೌಕರ್ಯ ಕಲ್ಪಿಸಲು 100 ಕೋಟಿ ಅನುದಾನ: ಸಚಿವ ಎನ್.ಚಲುವರಾಯಸ್ವಾಮಿ








