ಬೆಂಗಳೂರು; 2026-27 ನೇ ಆಯವ್ಯಯದಲ್ಲಿ ರಾಜ್ಯದ ಜನರ ಭರವಸೆಗಳನ್ನು ಈಡೇರಿಸುವ ಜೊತೆಗೆ ವಿತ್ತೀಯ ಶಿಸ್ತನ್ನೂ ಪಾಲಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಗೃಹ ಕಛೇರಿ ಕೃಷ್ಣಾದಲ್ಲಿ 2026 – 2027ನೇ ಸಾಲಿನ ಬಜೆಟ್ ಕುರಿತಾಗಿ ಮಾಧ್ಯಮಗೋಷ್ಠಿ ನೆಡೆಸಿ ಮಾತನಾಡಿದರು.
2017 ರಲ್ಲಿ ಜಿಎಸ್ ಟಿ ಜಾರಿಗೆ ಬಂದಿದ್ದು, 8 ವರ್ಷಗಳ ನಂತರ ದರ ತರ್ಕಬದ್ಧಗೊಳಿಸಿದರು. ಇದರಿಂದ ಶೇ.10 ರಷ್ಟಿದ್ದ ರಾಜ್ಯದ ತೆರಿಗೆ ಸಂಗ್ರಹಣೆ, ಈಗ ಶೇ. 4 ಕ್ಕೆ ಇಳಿದಿದೆ. ಕೆಲವು ರಾಜ್ಯಗಳು ಕೇಂದ್ರದ ಈ ನಿರ್ಧಾರದಿಂದ ದರಪರಿಷ್ಕರಣೆಯಿಂದ ತೊಂದರೆಗೊಳಗಾಗಿದ್ದು, ಇದುವರೆಗೂ ಚೇತರಿಸಿಕೊಂಡಿಲ್ಲ. ಜಿಎಸ್ ಟಿ ಸಂಗ್ರಹಣೆಯಲ್ಲಿ ಮಹಾರಾಷ್ಟ್ರ ನಂತರ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಕೇಂದ್ರದ ಈ ಹೊಸ ನೀತಿಯಿಂದ ಸುಮಾರು ರಾಜ್ಯಕ್ಕೆ ಸುಮಾರು 10 ಸಾವಿರ ಕೋಟಿಯಷ್ಟು ನಷ್ಟವಾಗಿದೆ. ಮುಂದಿನ ವರ್ಷ 15000 ಕೋಟಿ ಯಷ್ಟು ನಷ್ಟವಾಗಲಿದೆ. ಕೇಂದ್ರ ಸರ್ಕಾರದ ಅಸಹಕಾರ ಮತ್ತು ಮಲತಾಯಿ ಧೋರಣೆ ತೋರುತ್ತಿದೆ. ನಮ್ಮ ಬಜೆಟ್ನಲ್ಲಿ ಹೆಚ್ಚು ವಿತ್ತೀಯ ಶಿಸ್ತಿನ ಉಲ್ಲಂಘನೆಯಾಗಿಲ್ಲ ಎಂದು ತಿಳಿಸಿದರು.
ಕೇಂದ್ರಕ್ಕಿಂತ ರಾಜ್ಯದ ಬೆಳವಣಿಗೆ ಉತ್ತಮವಾಗಿದೆ
ರಾಜ್ಯದ ಜಿಎಸ್ ಡಿಪಿಯು 2025-26 ರಲ್ಲಿ ಬೆಳವಣಿಗೆ 8.1 ರಷ್ಟಿದೆ. ರಾಷ್ಟ್ರದ ಜಿಡಿಪಿ ಬೆಳವಣೆಗೆ 7.4 ರಷ್ಟಿದೆ. ಕೇಂದ್ರಕ್ಕಿಂತ ನಮ್ಮ ರಾಜ್ಯದ ಬೆಳವಣಿಗೆ ಉತ್ತಮವಾಗಿದೆ. ಗ್ಯಾರಂಟಿ ಯೋಜನೆಗಳಿಗೆ 52 000 ಕೋಟಿ ಕೊಟ್ಟಿದ್ದೇವೆ. ಇಲ್ಲಿಯವರೆಗೆ ಗ್ಯಾರಂಟಿಗಳಿಗೆ 121591 ಕೋಟಿ ವೆಚ್ಚ ಮಾಡಲಾಗಿದೆ. ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲಾಗಿದೆ. ಅದರ ಜೊತೆಗೆ ವಿತ್ತಿಯ ಶಿಸ್ತನ್ನೂ ಪಾಲಿಸಲಾಗಿದೆ. 2023-24 ರಿಂದ ಮೂರು ವರ್ಷವೂ ಕೂಡ ಆರ್ಥಿಕ ಶಿಸ್ತು ಕಾಯ್ದೆಯ ಮಾನದಂಡಗಳ ಪಾಲನೆಯಾಗಿದೆ. ಈ ಬಾರಿ ಕೇಂದ್ರದ ಅನುದಾನದಲ್ಲಿ ರಾಜ್ಯಕ್ಕೆ 10,000 ಕೋಟಿ ಗಳ ಕೊರತೆ ಆಗಿದೆ ಎಂದರು.
ಜೆಜೆಎಂ ನಡಿ ಕೇಂದ್ರದ ಪೂರ್ಣ ಪಾಲು ಬಂದಿಲ್ಲ
ಜಲಜೀವನ ಮಿಷನ್ ನ ಯೋಜನಾ ವೆಚ್ಚ. ಒಟ್ಟು 69488 ಕೋಟಿ ಆಗಿದ್ದು ಕೇಂದ್ರದ ಪಾಲು 30880 ಕೋಟಿ, ಆದರೆ ಈವರೆಗೆ ನಮಗೆ ದೊರೆತಿರುವ ಕೇಂದ್ರದ ಅನುದಾನ ಕೇವಲ 11786 ಕೋಟಿ ನೀಡಿದ್ದಾರೆ. ಈ ಯೋಜನೆಗೆ 38600 ರಾಜ್ಯ ಸರ್ಕಾರ ಈಗಾಗಲೇ ವೆಚ್ಚ ಮಾಡಿದೆ. 15500 ಕೋಟಿ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ವೆಚ್ಚ ಮಾಡಿದೆ ಎಂದು ವಿವರಿಸಿದರು.
ಪ್ರಧಾನಿ ಮೋದಿಯವರ ಅವಧಿಯಲ್ಲಿ ದೇಶದ ಸಾಲ 165 ಲಕ್ಷ ಕೋಟಿ
ಈ ವರ್ಷ ಕೇಂದ್ರದ ವಿತ್ತೀಯ ಕೊರತೆ 4.4 ರಷ್ಟಿದ್ದು, ಕೇಂದ್ರಸರ್ಕಾರದಲ್ಲಿ 218 ಲಕ್ಷ ಕೋಟಿ ಸಾಲವಿದೆ. ಬಿಜಿಪಿಯು ನಮ್ಮ ಪ್ರಶ್ನಿಸಲು ಯಾವ ನೈತಿಕತೆ ಇದೆ. ಸಾಲ ಮಾಡದೇ ಯಾವ ದೇಶ, ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಆದರೆ ಸಾಲದ ಮಿತಿ ಮಾನದಂಡಗಳಲ್ಲಿ ತಿಳಿಸಿದ ಮಿತಿಯಲ್ಲಿರಬೇಕು. 2014ರ ಮೊದಲು, 53.11 ಲಕ್ಷ ಕೋಟಿಯಿದ್ದ ದೇಶದ ಸಾಲ ಈಗ ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದ ನಂತರ 165 ಲಕ್ಷ ಕೋಟಿ ಯಾಗಿದೆ. ಪ್ರತಿಪಕ್ಷ ನಾಯಕ ಅಶೋಕರವರು ರಾಜ್ಯಸರ್ಕಾರ ಸಾಲ ಮಾಡುತ್ತಿದೆ ಎಂಬ ಟೀಕೆ ಮಾಡಲು ಯಾವುದೇ ನೈತಿಕತೆ ಇಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುವಾಗ, 55,33,847 ಕೋಟಿ ಸಾಲವಿತ್ತು. ಎಲ್ಲ ಸರ್ಕಾರಗಳ ಅವಧಿಯಲ್ಲಿ ಸಾಲಗಳನ್ನು ಮಾಡಲಾಗಿದೆ ಎಂದರು.
ಮನರೇಗಾ ಯೋಜನೆಯನ್ನು ಮರುಸ್ಥಾಪಿಸಲು ಕೇಂದ್ರಕ್ಕೆ ಒತ್ತಾಯ
2005 ರಲ್ಲಿ ಮನರೇಗಾ ಯೋಜನೆಯಡಿ ಪೂರ್ಣ ಅನುದಾನ ಕೇಂದ್ರ ಸರ್ಕಾರವೇ ನೀಡುತ್ತಿತ್ತು. ಆದರೆ ಪ್ರಸ್ತುತ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಜಾರಿಗೆ ತಂದು, ಕೇಂದ್ರ ಸರ್ಕಾರ ಶೇ. 60 ಮತ್ತು ರಾಜ್ಯ ಶೇ. 40 ರಷ್ಟು ಅನುದಾನವನ್ನು ನೀಡಬೇಕೆಂದು ಸೂಚಿಸಿದ್ದಾರೆ. ಕೇಂದ್ರದ ಈ ಕಾಯ್ದೆಯಿಂದ ರಾಜ್ಯಗಳಿಗೆ ಆಗುವ ಅನಾಹುತಗಳ ಬಗ್ಗೆ ಬಜೆಟ್ ನಲ್ಲಿ ತಿಳಿಸಲಾಗಿದೆ. 12.16 ಕೋಟಿ ದೀನದಲಿತರು, ಬಡ ಕಾರ್ಮಿಕರು, ಮಹಿಳೆಯರಿಗೆ ಉಪಯೋಗವಾಗುತ್ತಿತ್ತು. ಕರ್ನಾಟಕದಲ್ಲಿ ವರ್ಷದ 100 ದಿನಗಳು 77 ಲಕ್ಷ ಜನರಿಗೆ ಇದರಿಂದ ಉದ್ಯೋಗ ದೊರೆಯುತ್ತಿತ್ತು. ಜನರ ಉದ್ಯೋಗದ ಹಕ್ಕನ್ನು ವಿಬಿಜಿರಾಮ್ ಜಿ ಕಸಿದುಕೊಂಡಿದೆ. ಗ್ರಾಮಸಭೇಗಳಿಗೆ ನೀಡಿರುವ ಅಧಿಕಾರವನ್ನು ಮೊಟಕುಗೊಳಿಸಲಾಗಿದ್ದು, ಸಂವಿಧಾನದ 73 ಕಲಂ ಕ್ಕೆ ಚ್ಯುತಿ ಮಾಡಿದಂತಾಗಿದೆ. ಈ ಕಾಯ್ದೆಯನ್ನು ರದ್ದುಗೊಳಿಸಿ, ಮನರೇಗಾ ಯೋಜನೆಯನ್ನು ಮರುಸ್ಥಾಪಿಸಲು ಕೇಂದ್ರವ್ನು ಒತ್ತಾಯಿಸಲಾಗುತ್ತಿದೆ. ಈ ಕಾಯ್ದೆಯಿಂದ ರಾಜ್ಯ ಸರ್ಕಾರಕ್ಕೆ 3000 ಕೋಟಿ ರೂ.ಗಳ ಹೆಚ್ಚಿಗೆ ಆರ್ಥಿಕ ಹೊರೆ ಬೀಳಲಿದೆ ಎಂದರು.
ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ
ಈ ಬಾರಿ ಬಜೆಟ್ ನಲ್ಲಿ ಖಾಲಿ ಹುದ್ದೇಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುದೆಂದು ತಿಳಿಸಲಾಗಿದೆ. ಕಾರಣಾಂತರಗಳಿಂದ ವಿಳಂಬಗಳಾಗಿದ್ದು, ಈ ವರ್ಷ 56432 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ವಿಳಂಬವಾಗಿದ್ದರ ಕಾರಣ, ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆಯನ್ನು ನೀಡಲಾಗಿದೆ. ರಾಜ್ಯದ ಅಭಿವೃದ್ಧಿ ಮತ್ತು ಪ್ರಾದೇಶೀಕ ಅಸಮತೋಲನ ನಿವಾರಿಸಲು ಪ್ರೊ.ಎಂ.ಗೋವಿಂದರಾವ್ ಸಮಿತಿಯ ಶಿಫಾರ್ಸುಗಳನ್ನು ಸಚಿವ ಸಂಪುಟಗ ಅಂಗೀಕರಿಸಿದ್ದು, ವಿಧಾನಸಭೆಯಲ್ಲಿ ಮಂಡಿಸಲಾಗುವುದು. ಈ ಶಿಫಾರಸ್ಸುಗಳ ಹಂತ ಹಂತವಾಗಿ ಜಾರಿಗೊಳಿಸಲು ಸರ್ಕಾರ ಬದ್ಧವಾಗಿದ್ದು, ಈ ವರ್ಷ 4291 ಕೋಟಿ ಗಳನ್ನು ಮೀಸಲಿಡಲಾಗಿದೆ ಎಂದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ
2026-27 ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿ ಅಭಿವೃದ್ಧಿಗಾಗಿ 5000 ಕೋಟಿ ರೂ.ಗಳ ಯೋಜನೆ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಈ ವರ್ಷ 4000 ಕೋಟಿ ಖರ್ಚಾಗಿದ್ದು, ಉಳಿದ ಅನುದಾನವನ್ನು ಖರ್ಚು ಮಾಡಲಾಗುವುದು ಎಂದರು.
ಕೃಷ್ಣಾ ಮೇಲ್ದಂಡೆ ಯೋಜನೆ 3 ಹಂತ
ಕೃಷ್ಣಾ ಮೇಲ್ದಂಡೆ ಯೋಜನೆ 3 ಹಂತ ಅನುಷ್ಠಾನಗೊಳಿಸುವ ಸಂಬಂಧ, ಡ್ಯಾಂನ ಎತ್ತರವನ್ನು ಹೆಚ್ಚಿಸಿದಾಗ ಮುಳುಗಡೆಯಾಗುವ ಜಮೀನುಗಳಿಗೆ ಪರಿಹಾರ ನೀಡಲಾಗುವುದು. 1ಲಕ್ಷ ಕೋಟಿ ಎಕರೆ ಮುಳುಗಡೆಯಾಗುತ್ತಿದ್ದು, ಪರಿಹಾರ ನೀಡಲಾಗುವುದು. ಕೃಷ್ಣಾ ಮೇಲ್ದಂಡೆ ಯೋಜನೆ 3 ಹಂತ ಖುಷ್ಕಿ ಜಮೀನಿಗೆ 30 ಲಕ್ಷ , ನೀರಾವರಿ ಜಮೀನಿಗೆ 40 ಲಕ್ಷ ಪರಿಹಾರ ನೀಡಲು ನಿರ್ಣಯ ಕೈಗೊಂಡಿದ್ದು, 4 ವರ್ಷದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಇದಕ್ಕಾಗಿ ಪೂರಕ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ನೀಡಲಾಗುವುದು ಎಂದರು.
ತುಂಗಭದ್ರಾ ಜಲಾಶಯದಲ್ಲಿ ಎಲ್ಲ ಗೇಟುಗಳು ಶಿಥಿಲವಾಗಿದ್ದು, ಜೂನ್ ಮಾಹೆಯೊಳಗೆ ಎಲ್ಲ ಗೇಟುಗಳನ್ನು ಬದಲಾಯಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ಹಿಂದಿನ ಬಜೆಟ್ ಗಳಿಗಿಂತ ಈ ವರ್ಷದ ಆಯವ್ಯಯ ಭಿನ್ನವಾಗಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ವಿತ್ತೀಯ ಶಿಸ್ತು ಮೊದಲಿನಿಂದಲೂ ಪಾಲನೆ ಮಾಡಲಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ಮೀಸಲಿಟ್ಟ ಅನುದಾನ ನೀಡಿದ್ದರೆ, ರಾಜ್ಯಕ್ಕೆ ಕೊರತೆಯಾಗುತ್ತಿರಲಿಲ್ಲ ಎಂದರು.
ಕರಾವಳಿ ಪ್ರವಾಸೋದ್ಯಮಕ್ಕೆ ಬಿಜೆಪಿಯವರು ಅವರ ಅವಧಿಯಲ್ಲಿ ಏನೂ ಮಾಡಲಿಲ್ಲ. ಟೀಕೆ ಮಾಡುವುದು ಸುಲಭ . ಬಿಜೆಪಿಯವರಿಗೆ ನಮ್ಮನ್ನ ಪ್ರಶ್ನಿಸಲು ಯಾವುದೇ ನೈತಿಕತೆಇಲ್ಲ ಎಂದರು.
16 ವರ್ಷದ ಮಕ್ಕಳಿಗೆ ಮೊಬೈಲ್ ಇದ್ದರೂ, ಸೋಷಿಯಲ್ ಮೀಡಿಯಾ ನಿರ್ಬಂಧಿಸಲಾಗಿದೆ. ಇದಕ್ಕೆ ಬೇಕಾದ ನೀತಿ ನಿಯಮಗಳನ್ನು ಸಧ್ಯದಲ್ಲಿಯೇ ರೂಪಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ, ಕಾನೂನು ಸಲಹೆಗಾರರಾದ ಎ ಎಸ್ ಪೊನ್ನಣ್ಣ, ಸಚಿವರಾದ ಬೈರತಿ ಸುರೇಶ್, ಡಾ ಎಂ ಸಿ ಸುಧಾಕರ್ ,ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ರಿತೇಶ್ ಕುಮಾರ್ ಸಿಂಗ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ನಾಳೆ ಬೆಂಗಳೂರಲ್ಲಿ ‘ಏಡ್ಸ್ ನಿಯಂತ್ರಣ’ ಸಂಬಂಧ ‘ಸುರಕ್ಷಾ ಸಂಕಲ್ಪ ಕಾರ್ಯಾಗಾರ’ ಆಯೋಜನೆ








