ಬೆಳಗಾವಿ : ವೀರಭದ್ರ ದೇವರ ವಿಚಾರಗಳ ರಕ್ಷಣೆ ಜವಾಬ್ದಾರಿ ನಮ್ಮ ಮೇಲಿದೆ. ದೇವರು ಬೇಕು ಇಲ್ಲವಾದರೆ ಬದುಕಿಗೆ ಅರ್ಥ ಕೊಡಲು ಸಾಧ್ಯವಿಲ್ಲ. ಈ ದೇಶಕ್ಕೆ ಶಿವನೇ ದೊಡ್ಡಮೂಲ. ಭಕ್ತರಿಗೂ ಭಗವಂತನಿಗೆ ವ್ಯವಹಾರ ಮಾಡುವ ಸ್ಥಳ ದೇವಸ್ಥಾನ. ದೇವರು ವರನು ಕೊಡಲ್ಲ ಶಾಪನು ಕೊಡಲ್ಲ ಆದರೆ ಅವಕಾಶ ಕೊಡುತ್ತಾನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರಿನಲ್ಲಿ ಧರ್ಮೋತ್ಥಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನ್ನ ಮಿತ್ರ ಗಣೇಶ್ ಈ ಭಾಗದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಪ್ರಭಾಕರ ಕೋರೆ ದೊಡ್ಡ ಕ್ರಾಂತಿ ಮಾಡಿದ್ದಾರೆ. ನಾನು ಡಿಸಿಎಂ ಅಂತ ಈ ಕಾರ್ಯಕ್ರಮಕ್ಕೆ ಬಂದಿಲ್ಲ. ಶ್ರೀಗಳು ಮಾಡುತ್ತಿರುವ ಕೆಲಸದ ಬಗ್ಗೆ ನಾನು ತಿಳಿದುಕೊಂಡಿದ್ದೇನೆ. ನಾನು ವೀರಗಂಗಾಧರ ಅಜ್ಜನ ಪರಮಶಿಷ್ಯ. ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವದಲ್ಲಿ ಶಾಂತಿ. ವೀರಗಂಗಾಧರ ಶ್ರೀಗಳು ಸಂದೇಶ ಕೊಟ್ಟಿದ್ದಾರೆ. ನಾವೆಲ್ಲರೂ ಅದೇ ಮಾರ್ಗದಲ್ಲಿ ಹೋಗುತ್ತಿದ್ದೇವೆ.
ಪಂಚಪೀಠದ ಶ್ರೀಗಳು ದೇಶಕ್ಕೆ ಶಕ್ತಿ ಮಾರ್ಗದರ್ಶನ ಕೊಡುತ್ತಿದ್ದಾರೆ. ಇದನ್ನು ನಾವೆಲ್ಲರೂ ಉಳಿಸಿಕೊಂಡು ಹೋಗಬೇಕು. ಏನು ಬೇಕಾದರೂ ಗಳಿಸುವ ಶಕ್ತಿ ನಮಗೆ ದೇವರು ನೀಡುತ್ತಾನೆ. ಆದರೆ ಮಾನಸಿಕ ನೆಮ್ಮದಿ ಬೇಕು ಅಂದರೆ ಇಂತಹ ಮಠಗಳು ಬೇಕು. ಈ ಭಾಗದ ನೀರಾವರಿ ಕ್ಷೇತ್ರದ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಹಾಗೂ ನಮ್ಮ ಸರ್ಕಾರದ ಮೇಲೆ ಇರಲಿ ಎಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡಿಯೂರಿನಲ್ಲಿ ಧರ್ಮೋತ್ಥಾನ ಸಮಾರಂಭದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.








