ಕೋಲಾರ: ಬೆಂಗಳೂರು ಉತ್ತರ ವಿವಿಯ ಉಪಕುಲಪತಿ ಪ್ರೊ.ನಿರಂಜನ ವಾನಳ್ಳಿ ವಿರುದ್ಧ ಕೋಲಾರದ ಗಲ್ ಪೇಟೆ ಠಾಣೆಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು ಉತ್ತರ ವಿವಿಯ ಪತ್ರಿಕೋದ್ಯಮ ವಿಭಾಗದ ಅತಿಥಿ ಉಪನ್ಯಾಸಕ ಮಂಜುನಾಥ್ ಎಂಬುವರು ಕೋರ್ಟ್ ಗೆ ಈ ಸಂಬಂಧ ಪಿಸಿಆರ್ ದಾಖಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ್ದಂತ ಕೋರ್ಟ್ ಬೆಂಗಳೂರು ಉತ್ತರ ವಿವಿಯ ಪ್ರೊ.ನಿರಂಜನ ವಾನಳ್ಳಿ ವಿರುದ್ಧ ಎಫ್ಐಆರ್ ದಾಖಲಿಸಿ ವರದಿ ಸಲ್ಲಿಸುವಂತೆ ಆದೇಶಿಸಿತ್ತು.
ಈ ಆದೇಶದ ಹಿನ್ನಲೆಯಲ್ಲಿ ಕೋಲಾರದ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರೊ ನಿರಂಜನ ವಾನಳ್ಳಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಅಂದಹಾಗೇ ಮಹಿಳೆಯರ ಜೊತೆಗೆ ಅನುಚಿತ ವರ್ತನೆ ಆರೋಪದಡಿ ಬೆಂಗಳೂರು ಉತ್ತರ ವಿವಿಯಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಂತ ಮಂಜುನಾಥ್ ಅವರನ್ನು ಅಮಾನತುಗೊಳಿಸಲಾಗಿತ್ತು. ತಾನು ಯಾವುದೇ ಮಹಿಳೆಯ ಜೊತೆಗೆ ಅನುಚಿತವಾಗಿ ವರ್ತಿಸದೇ ಇದ್ದರೂ ವಿಸಿ ತಮ್ಮ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ಜಾತಿ ನಿಂದನೆ ಮಾಡಿ ನನ್ನ ಅವಮಾನಗೊಳಿಸಿದ್ದಾರೆ ಎಂಬುದಾಗಿ ಮಂಜುನಾಥ್ ಎಸ್ಪಿಗೆ ದೂರು ನೀಡಿದ್ದರೂ, ಪ್ರೊ.ನಿರಂಜನ ವಾನಳ್ಳಿ ವಿರುದ್ಧದ ದೂರು ಪಡೆದಿರಲಿಲ್ಲ.
ಈ ಹಿನ್ನಲೆಯಲ್ಲಿ ಅಮಾನತುಗೊಂಡಿದ್ದಂತ ಅತಿಥಿ ಉಪನ್ಯಾಸಕ ಮಂಜುನಾಥ್ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಅದರಲ್ಲಿ ತಮ್ಮ ವಿರುದ್ಧ ಯಾರೊಬ್ಬರು ದೂರು ನೀಡದಿದ್ದರೂ ಇಲ್ಲ ಸಲ್ಲದ ಆರೋಪ ಮಾಡಿ ತಮ್ಮ ವಿರುದ್ಧ ವಿಸಿ ನಿರಂಜನ ವಾನಳ್ಳಿ ಪಿತೂರಿ ನಡೆಸಿದ್ದಾರೆ. ಮಹಿಳಾ ಸಿಬ್ಬಂದಿ ಜೊತೆಗೆ ಅನುಚಿತ ವರ್ತನೆ ಮಾಡಿದಂತ ಸುಳ್ಳು ಆರೋಪದಾಡಿ ಅಮಾನತು ಮಾಡಿದ್ದಾರೆ. ಕೆಸಿ ಎಸ್ ಆರ್ ನಿಯಮದಡಿ ನನ್ನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ನನಗೆ ಜಾತಿ ನಿಂದನೆ ಮಾಡಿ ಸಮಾಜದಲ್ಲಿ ನನ್ನ ಗೌರವ ಹಾಳು ಮಾಡಿದ್ದಾರೆ ಎಂಬುದಾಗಿ ಕೋರ್ಟ್ ನಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲು ಮನವಿ ಮಾಡಿದ್ದರು.