ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸತತವಾಗಿ ಏರುತ್ತಿರುವ ತಾಪಮಾನವು ನಗರದ ಶ್ರಮಿಕ ವರ್ಗದ ಮೇಲೆ ಭೀಕರ ಪರಿಣಾಮ ಬೀರಿದೆ. ವಿಶೇಷವಾಗಿ ಬಿಸಿಲಿನಲ್ಲಿ ಕೆಲಸ ಮಾಡುವ ಪೌರಕಾರ್ಮಿಕರು ಮತ್ತು ತ್ಯಾಜ್ಯ ವಿಲೇವಾರಿ ಮಾಡುವವರ ಬದುಕು ದುಸ್ತರವಾಗಿದ್ದು, ‘ಹೀಟ್ ವಾಚ್’ (HeatWatch) ವರದಿಯ ಪ್ರಕಾರ ಶೇ. 86ರಷ್ಟು ಕಾರ್ಮಿಕರ ಕೆಲಸದ ಸಾಮರ್ಥ್ಯ ಕುಸಿದಿದೆ.
ತೀವ್ರ ಶಾಖ ಮತ್ತು ಸೆಕೆಯಿಂದಾಗಿ ಪೌರಕಾರ್ಮಿಕರು ಬೇಗನೇ ಸುಸ್ತಾಗುತ್ತಿದ್ದು, ದಿನವಿಡೀ ಕೆಲಸ ಮಾಡುವುದು ಸವಾಲಾಗಿದೆ. ಶೇ. 92ರಷ್ಟು ಕಾರ್ಮಿಕರು ಶಾಖದ ಅಲೆಯು ತಮ್ಮ ಕೆಲಸವನ್ನು ಕಷ್ಟಕರ ಮತ್ತು ನಿಧಾನಗತಿಯನ್ನಾಗಿಸಿದೆ ಎಂದು ತಿಳಿಸಿದ್ದಾರೆ.
ಬಿಸಿಲಿನಲ್ಲಿ ನಿರಂತರವಾಗಿ ಕೆಲಸ ಮಾಡುವುದರಿಂದ ನಿರ್ಜಲೀಕರಣ (Dehydration), ತಲೆಸುತ್ತು, ಚರ್ಮದ ಸೋಂಕು ಮತ್ತು ಅತಿಯಾದ ಆಯಾಸದಂತಹ ಸಮಸ್ಯೆಗಳಿಂದ ಕಾರ್ಮಿಕರು ಬಳಲುತ್ತಿದ್ದಾರೆ.
ತ್ಯಾಜ್ಯ ವಿಂಗಡನಾ ಕೇಂದ್ರಗಳಲ್ಲಿ (DWCC) ಸರಿಯಾದ ಫ್ಯಾನ್ ವ್ಯವಸ್ಥೆ ಇಲ್ಲದಿರುವುದು, ಕುಡಿಯುವ ನೀರು ಮತ್ತು ಶೌಚಾಲಯದ ಕೊರತೆಯು ಕಾರ್ಮಿಕರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ವರದಿ ಹೇಳಿದೆ.
ಆರೋಗ್ಯ ಸಮಸ್ಯೆಯಿಂದಾಗಿ ಕಾರ್ಮಿಕರು ಆಗಾಗ ಕೆಲಸಕ್ಕೆ ರಜೆ ಹಾಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಅವರ ದೈನಂದಿನ ಆದಾಯದ ಮೇಲೆ ನೇರ ಪರಿಣಾಮ ಬೀರುತ್ತಿದೆ.








