ಬೆಂಗಳೂರು: SIT ತನಿಖೆಯಿಂದ ಧರ್ಮಸ್ಥಳದ ಅಪಪ್ರಚಾರ ಹಿಂದಿನ ಮುಖವಾಡ ಕಳಚಲಿದೆ. ಸತ್ಯ ಬಯಲಿಗೆ ಬರಲಿದೆ ಎಂಬುದಾಗಿ ಮುಜರಾಯಿ ಮತ್ತು ಸಾರಿಗೆ ಸಚಿವ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಇಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಧರ್ಮಸ್ಥಳ ಕ್ಷೇತ್ರದ ಮತ್ತು ಧರ್ಮಾಧಿಕಾರಿಗಳ ಪರ ವಿರೋಧ ಹಾಗೂ ಅಪಪ್ರಚಾರ ನನಗೆ ತಿಳಿದಿರುವಂತೆ ಸುಮಾರು ಏಳೆಂಟು ವರುಷಗಳಿಂದ ನಡೆಯುತ್ತಾ ಬಂದಿದೆ. ಬಿ.ಜೆ.ಪಿ ಅಧಿಕಾರದಲ್ಲಿದ್ದ ಅವಧಿಯಿಂದಲೂ ನಡೆಯುತ್ತಲೇ ಬಂದಿದೆ ಎಂದಿದ್ದಾರೆ.
ಬಿ.ಜೆ.ಪಿ.ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರರವರು ಈಗ ಧರ್ಮ ರಕ್ಷಣೆಗೆ ಕರೆ ನೀಡಿದ್ದಾರೆ. ಇವರ ತಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದರು, ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದರು, ವಿಪಕ್ಷ ನಾಯಕರಾದ ಅಶೋಕ್ ಅವರು ಹಿರಿಯ ಮಂತ್ರಿಗಳಾಗಿದ್ದರು, ಅರಗ ಜ್ಞಾನೇಂದ್ರ ಅವರು ಗೃಹ ಸಚಿವರಾಗಿದ್ದರು ಆಗ ಇವರಾರು ಒಂದೇ ಒಂದು ಮಾತು ಆಡಲಿಲ್ಲ. ಅಪಪ್ರಚಾರ ಹೋಗಲಾಡಿಸಿ ಷಡ್ಯಂತ್ರ ಬಯಲಿಗೆಳೆಯಲು ಯಾವುದೇ ಕ್ರಮ ಇವರಿಂದ ಆಗಿಲ್ಲ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತು ಗೃಹ ಸಚಿವ ಪರಮೇಶ್ಚರ್ ಅವರು SIT ರಚಿಸಿರುವ ಉದ್ದೇಶ, ಸತ್ಯ ಹೊರ ಬರಲಿ, ಅಪಪ್ರಚಾರ ಅಂತ್ಯ ಕಾಣಲಿ, ಈ ಪ್ರಕರಣದ ಹಿಂದಿನ ಜಾಲ ಬಯಲಿಗೆ ಎಳೆಯಬೇಕು ಎನ್ನುವುದಾಗಿದೆ ಎಂದು ತಿಳಿಸಿದ್ದಾರೆ.
SIT ಅವರು ಮುಸುಕುದಾರಿ ಹೇಳಿದ ರೀತಿ ಗುಂಡಿ ಅಗೆಯದೆ ಇದ್ದಿದ್ದರೇ,ಅಲ್ಲಿ ಏನಿದೆ ಎಂದು ಯಾರಿಗೂ ತಿಳಿಯುತ್ತಿರಲಿಲ್ಲ, ಅನುಮಾನ, ಅಪಪ್ರಚಾರ, ಷಡ್ಯಂತ್ರ ಮುಂದುವರೆಯುತ್ತಿತ್ತು. ಕ್ಲಾರಿಟಿ ಸಿಗುತ್ತಿರಲಿಲ್ಲ, ಮತ್ತದೇ ವಿಷಯ ಸ್ವಲ್ಪ ದಿನಗಳ ನಂತರ ಮರುಕಳಿಸುತ್ತಿತ್ತು. ಆದರೆ ಈಗ SIT ತನಿಖೆಯಿಂದ ಅಲ್ಲಿ ಏನು ಸಿಗದಿರುವುದು ಗೊತ್ತಾಗಿದೆ. ಎಲ್ಲಾ ಅನುಮಾನಗಳಿಗೆ ಉತ್ತರ ಸಿಕ್ಕಂತಾಗಿದೆ. ಈ ಬಗ್ಗೆ ಖುದ್ದು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವಿರೇಂದ್ರ ಹೆಗ್ಗಡೆ ಅವರೇ SIT ರಚನೆಯನ್ನು ಸ್ವಾಗತಿಸಿದ್ದಾರೆ. ನಿನ್ನೆ ಸಹ ತನಿಖೆ ನಡೆಯುತ್ತಿರುವುದರಿಂದ ನಾನು ಏನು ಹೆಚ್ಚು ಮಾತನಾಡುವುದಿಲ್ಲ ಸಂಪೂರ್ಣ ತನಿಖೆಯಾಗಲಿ, ಸತ್ಯ ಹೊರಬರಲಿ ಎಂದು ಹೇಳಿಕೆ ನೀಡಿದ್ದಾರೆ ಎಂಬುದಾಗಿ ಗುಡುಗಿದ್ದಾರೆ.
SIT ರಚನೆ ಮಾಡಿದ್ದರಿಂದಲೇ ಈ ಅಪಪ್ರಚಾರದ ಕಥೆಗೆ ತಾರ್ಕಿಕ ಅಂತ್ಯ ಕಾಣಲು ಸಾಧ್ಯವಾಗಿದೆ ಎಂಬ ಸತ್ಯ ಈಗ ಬಿ.ಜೆ.ಪಿಯ ಅರಿವಿಗೆ ಬಂದಿದೆ. ಬಿ.ಜೆ.ಪಿ ಯವರಿಗೆ ಈಗ ಭಯ ಶುರುವಾಗಿದೆ. ಎಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ, ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಅವರಿಗೆ ಒಳ್ಳೆ ಹೆಸರು ಬರುತ್ತದೆಯೋ ಎಂಬ ಅಭ್ರದತೆಯಿಂದ ತಲೆಗೊಬ್ಬರು ದಿನಂಪ್ರತಿ ಹೇಳಿಕೆ ನೀಡುತ್ತಿದ್ದಾರೆ ಎಂಬುದಾಗಿ ವಾಗ್ಧಾಳಿ ನಡೆಸಿದ್ದಾರೆ.
ಯೂಟ್ಯೂಬರ್ಸ್ ಗಳು ಯಾರು ? ಅವರಲ್ಲೂ ಪರ ವಿರೋಧ ಮಾಡುವವರು ಇಬ್ಬರೂ ಇದ್ದಾರೆ, ಎಲ್ಲಾ ಜಾತಿ ಜನಾಂಗದವರು ಅವರಲ್ಲಿ ಇದ್ದಾರೆ, ಒಬ್ಬ ಅನ್ಯಧರ್ಮಿಯನಾಗಿದ್ದು, ಉಳಿದವರೆಲ್ಲರೂ ಹಿಂದುಗಳೆ, ಬಿ.ಜೆ.ಪಿ ಕಾಲದಿಂದಲೂ ಸಾಮಾಜಿಕ ಜಾಲತಾಣ ಮತ್ತು ಯೂಟ್ಯೂಬರ್ಸ್ ಗಳು ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಲೇ ಬಂದಿದ್ದಾರೆ. ಅಷ್ಟೇ ಸಂಖ್ಯೆಯಲ್ಲಿ ಯೂಟ್ಯೂಬರ್ಸ್ ಗಳು ಧರ್ಮಸ್ಥಳದ ಪರ ವಹಿಸಿ ಕೂಡ ಪ್ರಚಾರ ಮಾಡುತ್ತಾ ಬಂದಿದ್ದಾರೆ. ಬಿ.ಜೆ.ಪಿ ಅವರು ಯಾಕೆ ಆಗ ಕ್ರಮ ತೆಗೆದುಕೊಳ್ಳಲಿಲ್ಲ, ಅವರದೇ ಆಡಳಿತವಿತ್ತು. ಬಿ.ಜೆ.ಪಿ.ಅವರಿಗೆ ಒಂದೇ ಒಂದು ವೋಟು ಸಿಗುತ್ತದೆ ಅಂದರೆ ಸಾಕು ಅದರಲ್ಲಿಯೂ ರಾಜಕೀಯ ಮಾಡುತ್ತಾರೆ ಎಂದಿದ್ದಾರೆ.
SIT ತನಿಖೆಯಿಂದ ಧರ್ಮಸ್ಥಳದ ಅಪಪ್ರಚಾರ ಹಿಂದಿನ ಮುಖವಾಡವನ್ನು ಕಳಚುವುದು, ಸತ್ಯ ಬಯಲಿಗೆಳೆಯುವುದು, ನಮ್ಮ ಸರ್ಕಾರದ ಬದ್ಧತೆಯಾಗಿದೆ. ಅದರಲ್ಲಿ ನಮ್ಮ ನಿಲುವು ಸ್ವಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಹುಬ್ಬಳ್ಳಿ ಪತ್ರಕರ್ತೆ ಚಿಕಿತ್ಸೆಗೆ 1.25 ಲಕ್ಷ ಪರಿಹಾರ ಮಂಜೂರು ಮಾಡಿದ ಸಿಎಂ ಸಿದ್ಧರಾಮಯ್ಯ
BIG NEWS : ಸಂದರ್ಭ ಬಂದಾಗ ಡಿಸಿಎಂ ಡಿಕೆ ಶಿವಕುಮಾರ್ ‘CM’ ಆಗ್ತಾರೆ : ಸಚಿವ ಚೆಲುವರಾಯಸ್ವಾಮಿ ಹೇಳಿಕೆ