ಶಿವಮೊಗ್ಗ: ಮಾ. 8ರಂದು ನಡೆಯಲಿರುವ ಸಾಗರದ ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ಚುನಾವಣೆಯಲ್ಲಿ ನಮ್ಮ ತಂಡ ಬಹುಮತ ಪಡೆಯುವ ಎಲ್ಲಾ ಸಾಧ್ಯತೆ ಇದೆ ಎಂದು ಮಾರಿಕಾಂಬಾ ಹಿತರಕ್ಷಣಾ ವೇದಿಕೆ ಸಂಚಾಲಕ ಎಂ.ಡಿ. ಆನಂದ್ ಅಭಿಪ್ರಾಯ ಪಟ್ಟಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 13 ವರ್ಷಗಳಿಂದ ಹಾಲಿ ಸಮಿತಿ ವಿರುದ್ಧ ನಿರಂತರ ಹೋರಾಟ ನಡೆಸಿದ್ದರ ಫಲವಾಗಿ ಚುನಾವಣೆ ಘೋಷಣೆಯಾಗಿದೆ. ನಮ್ಮ ಸಮಿತಿ ಮತದಾರರ ಬಳಿ ಸದುದ್ದೇಶ ಇರಿಸಿಕೊಂಡು ಮತಯಾಚನೆ ಮಾಡುತ್ತಿದ್ದು, ಮತದಾರರು ಪೂರಕವಾಗಿ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು.
ಹಾಲಿ ಸಮಿತಿ ನಡೆಸುತ್ತಿದ್ದ ಸಾಕಷ್ಟು ಲೋಪಗಳನ್ನು ಜನರ ಎದುರು ತೆರೆದಿಡುವ ಕೆಲಸ ನಮ್ಮ ಸಮಿತಿ ಮಾಡಿದೆ. ಪ್ರಸ್ತುತ ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತಿರುವ ನಮ್ಮ ತಂಡ, ಹೋರಾಟದ ಪ್ರತಿಫಲವಾಗಿ 5 ಮಹಿಳೆಯರಿಗೆ ಅವಕಾಶ ಕಲ್ಪಿಸಲು ಯಶಸ್ವಿಯಾಗಿದೆ. ನಮ್ಮ ಸಮಿತಿ ಆಯ್ಕೆಯಾಗಿ ಬಂದರೆ ದೇವಸ್ಥಾನದಲ್ಲಿ ನಿತ್ಯದಾಸೋಹ ವ್ಯವಸ್ಥೆ, ನಗರದ ಕೆಲವು ಭಾಗಗಳಲ್ಲಿ ಕುಡಿಯುವ ನೀರಿನ ಸೌಲಭ್ಯ, ಕಲ್ಯಾಣ ಮಂಟಪ ನಿರ್ಮಾಣ ಕಾಮಗಾರಿ ಚುರುಕುಗೊಳಿಸುವುದು ಸೇರಿ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದು, ಮತದಾರರು ನಮ್ಮ ತಂಡವನ್ನು ಬೆಂಬಲಿಸಬೇಕು ಎಂದು ತಿಳಿಸಿದರು.

ಸಮಿತಿ ಕಾನೂನು ಸಲಹೆಗಾರ ವಿ. ಶಂಕರ್ ಮಾತನಾಡಿ, ಹಾಲಿ ಸಮಿತಿಯ ಬೈಲಾ ವಿರೋಧಿ ನೀತಿ, ಅಧಿಕಾರ ದಾಹ, ವ್ಯಾಪಕ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ನಮ್ಮ ಸಮಿತಿ ಕಾನೂನು ಮತ್ತು ಪ್ರಜಾಪ್ರಭುತ್ವ ಮಾದರಿಯಲ್ಲಿ ಹೋರಾಟ ಮಾಡಿದೆ. 13ವರ್ಷ ಅನಧಿಕೃತವಾಗಿ ಸಮಿತಿ ಆಡಳಿತ ನಡೆಸಿದೆ. ಜಿಲ್ಲಾ ನ್ಯಾಯಾಲಯ ಚುನಾವಣೆಗೆ ಆದೇಶ ಮಾಡಿದ್ದರೂ ಹಾಲಿ ಸಮಿತಿ ಅದರ ವಿರುದ್ಧ ತಡೆಯಾಜ್ಞೆ ತಂದಿತ್ತು. ರಾಜ್ಯ ಉಚ್ಚ ನ್ಯಾಯಾಲಯ ಚುನಾವಣೆ ನಡೆಸಿ ಎಂದು ಹೇಳಿದ್ದರೂ ಚುನಾವಣಾಧಿಕಾರಿ ಅದನ್ನೂ ಮುಂದೂಡಿದ್ದು ವಿಚಿತ್ರವಾಗಿದೆ. ನಮ್ಮ ತಂಡ ಪ್ರಚಾರಕ್ಕೆ ಹೋದ ಕಡೆ ವ್ಯಾಪಕ ಬೆಂಬಲ ಸಿಕ್ಕಿದೆ. ನಾಲ್ಕು ಜನರು ಅವಿರೋಧವಾಗಿ ಆಯ್ಕೆಯಾಗಿದ್ದು ನಮ್ಮ ಶಕ್ತಿ ಹೆಚ್ಚಿಸಿದೆ. ಎಲ್ಲರೂ ನಮ್ಮ ತಂಡವನ್ನು ಬೆಂಬಲಿಸಿ ಎಂದು ಹೇಳಿದರು.
ಈ ಸುದ್ದಿಗೋಷ್ಟಿಯಲ್ಲಿ ಆರ್. ಶ್ರೀನಿವಾಸ್, ಧರ್ಮರಾಜ್, ನಿತ್ಯಾನಂದ ಶೆಟ್ಟಿ, ಜನಾರ್ದನ ಆಚಾರಿ, ರಾಮಪ್ಪ, ನಂಜುಂಡಸ್ವಾಮಿ, ಜಿ.ಕೆ. ಭೈರಪ್ಪ, ಗುರುಬಸವನಗೌಡ, ಬಸವರಾಜ್, ನಾಗರಾಜ್, ಶ್ರೀಧರ್, ಶರಾವತಿ ಸಿ. ರಾವ್, ಪ್ರೇಮ್ ಸಿಂಗ್, ದಿನಕರ್ ಇನ್ನಿತರರು ಹಾಜರಿದ್ದರು.
ಚರಕ ನೈಸರ್ಗಿಕ ಉತ್ಪನ್ನಗಳ ಮೇಳ ಉದ್ಘಾಟಿಸಿದ ವಿದುಷಿ ವಸುಧಾ ಶರ್ಮ: ನೈಸರ್ಗಿಕ ಉತ್ಪನ್ನಗಳ ಬಳಕೆಗೆ ಕರೆ








