ನವದೆಹಲಿ: ಗೌರವಯುತ ಋತುಚಕ್ರದ ಆರೋಗ್ಯ ನಿರ್ವಹಣೆಯು ಸಂವಿಧಾನಬದ್ಧ ‘ಬದುಕುವ ಹಕ್ಕಿನ’ ಅವಿಭಾಜ್ಯ ಅಂಗ ಎಂದು ಸುಪ್ರೀಂ ಕೋರ್ಟ್ ನೀಡಿದ್ದ ಐತಿಹಾಸಿಕ ತೀರ್ಪಿನ ಬೆನ್ನಲ್ಲೇ, ಕೇಂದ್ರ ಪ್ರೌಢಶಿಕ್ಷಣ ಮಂಡಳಿ (CBSE) ತನ್ನ ಸಂಯೋಜಿತ ಎಲ್ಲಾ ಶಾಲೆಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಬದುಕುವ ಹಕ್ಕಿನ ಭಾಗವಾಗಿ ಋತುಚಕ್ರದ ನೈರ್ಮಲ್ಯ
ಜನವರಿ 20 ರಂದು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿ ಮಾಚ್ 18 ರಂದು ಸಿಬಿಎಸ್ಇ ಸುತ್ತೋಲೆ ಹೊರಡಿಸಿದೆ. ಸಂವಿಧಾನದ 21ನೇ ವಿಧಿಯಡಿ (Article 21), ಹದಿಹರೆಯದ ಹೆಣ್ಣುಮಕ್ಕಳಿಗೆ ಶಿಕ್ಷಣದ ಸಮಾನ ಅವಕಾಶವನ್ನು ಖಚಿತಪಡಿಸಿಕೊಳ್ಳಲು ‘ಋತುಚಕ್ರದ ನೈರ್ಮಲ್ಯ ನಿರ್ವಹಣೆ’ (MHM) ಅತ್ಯಗತ್ಯ ಎಂದು ನ್ಯಾಯಾಲಯ ಪ್ರತಿಪಾದಿಸಿತ್ತು. ಶಾಲೆಗಳಲ್ಲಿ ಸರಿಯಾದ ಸೌಲಭ್ಯಗಳಿಲ್ಲದಿರುವುದು ಹೆಣ್ಣುಮಕ್ಕಳ ಹಾಜರಾತಿ ಮತ್ತು ಶಿಕ್ಷಣದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರುವುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತ್ತು.
ಶಾಲೆಗಳು ಕಡ್ಡಾಯವಾಗಿ ಪಾಲಿಸಬೇಕಾದ ನಿಯಮಗಳು:
ಸಿಬಿಎಸ್ಇ ತನ್ನ ಅಧೀನದ ಶಾಲೆಗಳಿಗೆ ಈ ಕೆಳಗಿನ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆದೇಶಿಸಿದೆ:
-
ಪ್ರತ್ಯೇಕ ಶೌಚಾಲಯ: ವಿದ್ಯಾರ್ಥಿನಿಯರಿಗಾಗಿ ಸುರಕ್ಷಿತ ಮತ್ತು ಪ್ರತ್ಯೇಕ ಶೌಚಾಲಯ ಹಾಗೂ ಕೈ ತೊಳೆಯುವ ಸೌಲಭ್ಯ ಕಡ್ಡಾಯ.
-
ಸ್ಯಾನಿಟರಿ ನ್ಯಾಪ್ಕಿನ್ ಲಭ್ಯತೆ: ಶಾಲೆಗಳಲ್ಲಿ ಸುಲಭವಾಗಿ ಕರಗಬಲ್ಲ (Biodegradable) ಸ್ಯಾನಿಟರಿ ನ್ಯಾಪ್ಕಿನ್ಗಳು ಲಭ್ಯವಿರುವಂತೆ ನೋಡಿಕೊಳ್ಳಬೇಕು.
-
MHM ಕಾರ್ನರ್: ಶಾಲಾ ಆವರಣದಲ್ಲಿ ಋತುಚಕ್ರದ ನೈರ್ಮಲ್ಯ ನಿರ್ವಹಣೆಗೆ ಸಂಬಂಧಿಸಿದ ಪ್ರತ್ಯೇಕ ‘ಎಂಎಚ್ಎಂ ಕಾರ್ನರ್’ಗಳನ್ನು ಸ್ಥಾಪಿಸಬೇಕು.
-
ವೈಜ್ಞಾನಿಕ ವಿಲೇವಾರಿ: ಬಳಸಿದ ಸ್ಯಾನಿಟರಿ ಪ್ಯಾಡ್ಗಳನ್ನು ಪರಿಸರಕ್ಕೆ ಹಾನಿಯಾಗದಂತೆ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ವ್ಯವಸ್ಥೆ ಇರಬೇಕು.
ಜಾಗೃತಿ ಮತ್ತು ಶಿಕ್ಷಣಕ್ಕೆ ಒತ್ತು
ಕೇವಲ ಸೌಲಭ್ಯ ಒದಗಿಸುವುದಷ್ಟೇ ಅಲ್ಲದೆ, ಋತುಚಕ್ರದ ಕುರಿತಾದ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಎನ್ಸಿಇಆರ್ಟಿ (NCERT) ಮಾರ್ಗಸೂಚಿಯಂತೆ ಶಾಲೆಗಳಲ್ಲಿ ವಿಶೇಷ ಸಂವಾದ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲು ಸೂಚಿಸಲಾಗಿದೆ. ಹದಿಹರೆಯದ ಬದಲಾವಣೆಗಳು ಮತ್ತು ಲಿಂಗತ್ವ ಸಂಬಂಧಿ ವಿಷಯಗಳ ಬಗ್ಗೆ ವಿದ್ಯಾರ್ಥಿನಿಯರಿಗೆ ಸೂಕ್ತ ಮಾಹಿತಿ ನೀಡಬೇಕೆಂದು ಮಂಡಳಿ ತಿಳಿಸಿದೆ.
ಪರಿಶೀಲನೆ ಮತ್ತು ಗಡುವು
ಈ ನಿಯಮಗಳು ಕೇವಲ ಕಾಗದಕ್ಕೆ ಸೀಮಿತವಾಗಬಾರದು ಎಂಬ ಉದ್ದೇಶದಿಂದ ಸಿಬಿಎಸ್ಇ ಕಠಿಣ ನಿಲುವು ತಳೆದಿದೆ:
-
ಜಿಲ್ಲಾ ಶಿಕ್ಷಣಾಧಿಕಾರಿಗಳು ಕಾಲಕಾಲಕ್ಕೆ ಶಾಲೆಗಳಿಗೆ ಭೇಟಿ ನೀಡಿ ಸೌಲಭ್ಯಗಳನ್ನು ಪರಿಶೀಲಿಸಲಿದ್ದಾರೆ.
-
ಶಾಲೆಗಳು ಪ್ರತಿ ತಿಂಗಳು ಅನುಸರಣಾ ವರದಿಯನ್ನು (Compliance Report) ಸಲ್ಲಿಸಬೇಕು.
-
ಈ ವರದಿಯನ್ನು ಸಲ್ಲಿಸಲು ಮಾರ್ಚ್ 31 ಮತ್ತು ಏಪ್ರಿಲ್ 30 ರ ಗಡುವು ನೀಡಲಾಗಿದೆ.
ಈ ಕ್ರಮವು ದೇಶದ ಲಕ್ಷಾಂತರ ಹೆಣ್ಣುಮಕ್ಕಳು ಶಿಕ್ಷಣದ ಹಾದಿಯಲ್ಲಿ ಎದುರಿಸುತ್ತಿದ್ದ ದೊಡ್ಡ ಅಡೆತಡೆಯೊಂದನ್ನು ನಿವಾರಿಸುವಲ್ಲಿ ಮೈಲಿಗಲ್ಲಾಗಲಿದೆ.
ಹೆಸರಿಗಷ್ಟೇ ‘ಕೇಂದ್ರ ಬಿಂದು’, ಸೌಕರ್ಯದಲ್ಲಿ ‘ಶೂನ್ಯ ಪಾಯಿಂಟ್’: ಇದು ತುಮಕೂರಿನ ಕೆ.ಬಿ.ಕ್ರಾಸ್ ಅವ್ಯವಸ್ಥೆಯ ದರ್ಶನ
SHOCKING : ಒಂದೇ ದೇಹಕ್ಕೆ ಅಂಟಿಕೊಂಡಂತೆ ಜನಿಸಿದ ಅವಳಿ ಮಕ್ಕಳು, ಆಘಾತದಿಂದ ತಾಯಿ ಸಾವು







