ಬೆಂಗಳೂರು: ದೇಶದಲ್ಲಿ ಇಂಧನ (ಪೆಟ್ರೋಲ್ ಮತ್ತು ಡೀಸೆಲ್) ಕೊರತೆಯಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳು ಕೇವಲ ವದಂತಿಗಳಾಗಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ತಿಳಿಸಿದೆ.
ಈ ಕುರಿತು ಗ್ರಾಹಕರಿಗೆ ಸಂದೇಶ ರವಾನಿಸಿರುವ ಸಂಸ್ಥೆಯು ಈ ಕೆಳಗಿನ ಪ್ರಮುಖ ಅಂಶಗಳನ್ನು ಹಂಚಿಕೊಂಡಿದೆ. ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗಿದೆ ಎಂಬ ಸುದ್ದಿಗಳು ಆಧಾರರಹಿತ ಮತ್ತು ದಾರಿ ತಪ್ಪಿಸುವಂತಿವೆ. ದೇಶಾದ್ಯಂತ ಸಾಕಷ್ಟು ಪ್ರಮಾಣದ ಇಂಧನ ದಾಸ್ತಾನು ಲಭ್ಯವಿದ್ದು, ಪೂರೈಕೆ ವ್ಯವಸ್ಥೆ ಸುಗಮವಾಗಿದೆ.
ಆತಂಕ ಬೇಡ: ಸಾರ್ವಜನಿಕರು ಯಾವುದೇ ಭಯ ಅಥವಾ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಸಂಸ್ಥೆ ಭರವಸೆ ನೀಡಿದೆ.ಇಂಧನವನ್ನು ವಿವೇಕಯುತವಾಗಿ ಮತ್ತು ಮಿತವಾಗಿ ಬಳಸುವುದು ಯಾವಾಗಲೂ ಉತ್ತಮ ಎಂದು ಬಿಪಿಸಿಎಲ್ ಸಲಹೆ ನೀಡಿದೆ.
ಗ್ರಾಹಕರು ಯಾವುದೇ ಅನಧಿಕೃತ ಮೂಲಗಳಿಂದ ಬರುವ ಮಾಹಿತಿಯನ್ನು ನಂಬಬಾರದು ಮತ್ತು ಪ್ಯಾನಿಕ್ ಬುಕ್ಕಿಂಗ್ ಮಾಡಬಾರದು ಎಂದು ಕಂಪನಿ ವಿನಂತಿಸಿದೆ.








