ಶಿವಮೊಗ್ಗ : ಸಾಗರದ ಐತಿಹಾಸಿಕ ಪ್ರಸಿದ್ಧವಾದ ಶ್ರೀ ಮಾರಿಕಾಂಬಾ ದೇವಿಯ 9 ದಿನಗಳ ಜಾತ್ರೆಗೆ ಮಂಗಳವಾರ ವಿದ್ಯುಕ್ತ ಚಾಲನೆ ದೊರೆಯಿತು. ಬೆಳಗಿನ ಜಾವ ಶ್ರೀ ದೇವಿಗೆ ವಿಶೇಷ ಪೂಜೆ ಜೊತೆಗೆ ಮಾಂಗಲ್ಯಧಾರಣೆ ಶಾಸ್ತ ನಡೆಯಿತು. ದೇವಸ್ಥಾನದ ಅರ್ಚಕ ವೃಂದ ಶ್ರೀ ಮಾರಿಕಾಂಬಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಮೊದಲ ದಿನದ ಸಾಗರದ ಮಾರಿಕಾಂಬ ದೇವಿಯ ಉಲ್ ಅಪ್ ಡೇಟ್ ಮುಂದೆ ಓದಿ..
ಮಾರಿಕಾಂಬಾ ತವರುಮನೆಯಲ್ಲಿ ಪ್ರತಿಷ್ಟಾಪನೆಗೊಂಡಿರುವ ಅಮ್ಮನವರು ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲು ಶಾಸಕ ಗೋಪಾಲಕೃಷ್ಣ ಬೇಳೂರು ಸ್ಥಳದಲ್ಲಿಯೇ ಹಾಜರಿದ್ದರು. ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ಎಎಸ್ಪಿ ಡಾ. ಬೆನಕ ಪ್ರಸಾದ್, ತಹಶೀಲ್ದಾರ್ ರಶ್ಮಿ ಹಾಲೇಶ್, ಮಾರಿಕಾಂಬ ನ್ಯಾಸ ಪ್ರತಿಷ್ಠಾನ ಸಮಿತಿಯ ಅಧ್ಯಕ್ಷರಾದಂತ ಕೆ.ಎನ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಬಿ.ಗಿರಿಧರ ರಾವ್, ಕೋಶಾಧ್ಯಕ್ಷ ನಾಗೇಂದ್ರ ಕುಮಟ, ರವಿನಾಯ್ಡು, ಗಂಗಾಧರ ಜಂಬಿಗೆ ಇನ್ನಿತರರು ಉಪಸ್ಥಿತರಿದ್ದರು.

ಅಮ್ಮನ ದರ್ಶನಕ್ಕೆ ಸರದಿ ಸಾಲು
ಶ್ರೀ ಮಾರಿಕಾಂಬೆ ದರ್ಶನಕ್ಕೆ ಭಕ್ತರು ನೂಗುನುಗ್ಗಲು ಮಾಡಿದ್ದು ಕಂಡು ಬಂದಿದೆ. ರಾತ್ರಿ 9 ಗಂಟೆಯಿAದಲೇ ಮಾರಿಕಾಂಬಾ ದೇವಿ ಪೂಜೆಗೆ ಜನರು ಸರದಿ ಸಾಲಿನಲ್ಲಿ ನಿಂತಿದ್ದರು. ರಾತ್ರಿ ನಿಂತವರಿಗೆ ಬೆಳಿಗ್ಗೆ 5 ಗಂಟೆಗೆ ಅಮ್ಮನ ದರ್ಶನವಾದರೆ ಬೆಳಿಗ್ಗೆ 5ರ ನಂತರ ಅಮ್ಮನ ದರ್ಶನಕ್ಕೆ ಬಂದವರಿಗೆ ಮಧ್ಯಾಹ್ನವಾದರೂ ದರ್ಶನ ಭಾಗ್ಯ ಸಿಗಲಿಲ್ಲ. ಅಮ್ಮನವರ ದರ್ಶನಕ್ಕೆ ದೇವಸ್ಥಾನದಿಂದ ಜೋಗ ರಸ್ತೆಯ ಸಣ್ಣಮನೆ ಸೇತುವೆ ದಾಟಿ ಸುಮಾರು 2ರಿಂದ 4 ಕಿ.ಮೀ.ವರೆಗೂ ಭಕ್ತರು ಸರದಿ ಸಾಲಿನಲ್ಲಿ ನಿಂತಿದ್ದರು. ಸರದಿ ಸಾಲಿನಲ್ಲಿ ನಿಂತ ಭಕ್ತರಿಗೆ ನಿರಂತರವಾಗಿ ಭಕ್ತರು ಕಾಫಿ, ಟೀ, ಕಷಾಯದ ವ್ಯವಸ್ಥೆ ಮಾಡಿದ್ದು, ಚಳಿ ಮತ್ತು ಇಬ್ಬನಿಯಲ್ಲಿ ಸಹಕಾರಿಯಾಯಿತು. ಇನ್ನೂ ನೆತ್ತಿ ಸುಡುವ ಬಿಸಿಲನಲ್ಲಿ ಪಾನಕ ವ್ಯವಸ್ಥೆಯನ್ನು ಕಾರು ಚಾಲಕರು ಮತ್ತು ಮಾಲೀಕರ ಸಂಘದಿಂದ ಮಾಡಲಾಗಿತ್ತು.
ಪಾಸ್ ರಾದ್ಧಾಂತ
ಆರಂಭದಲ್ಲಿ ಪಾಸ್ ವ್ಯವಸ್ಥೆ ಇಲ್ಲ ಎಂದು ಹೇಳಿದ್ದ ಸಮಿತಿ ಭಕ್ತರ ಒತ್ತಾಯಕ್ಕೆ ಮಣಿದು ಪಾಸ್ ವ್ಯವಸ್ಥೆ ಕಲ್ಪಿಸಿತ್ತು. ಪಾಸ್ ವ್ಯವಸ್ಥೆ ಸಮಿತಿಗೆ ಮುಳುವಾಗಿದೆ ಎನ್ನುವ ಮಾತು ಕೇಳಿ ಬಂದಿದೆ. 1200 ರೂ. ಕೊಟ್ಟು ದೇವಿ ದರ್ಶನಕ್ಕೆ ವಿಶೇಷ ಪಾಸ್ ಪಡೆದವರಿಗೆ ಮಧ್ಯಾಹ್ನ 2 ಗಂಟೆಯಾದರೂ ಅಮ್ಮನವರ ದರ್ಶನ ಭಾಗ್ಯ ಸಿಗಲಿಲ್ಲ. ದೇವಸ್ಥಾನದಿಂದ ಕೈನಲ್ಲಿ ಪಾಸ್ ಹಿಡಿದು ನಿಂತ ಭಕ್ತರ ಸರದಿ ನೆಹರೂ ಮೈದಾನ ದಾಟಿ ಹೋಗಿತ್ತು.

ಅನ್ನದಾಸೋಹ ಮತ್ತು ದೇವಿ ದರ್ಶನಕ್ಕೆ 2000 ರೂ. ಪಾಸ್ ಮಾಡಲಾಗಿತ್ತು. ಈ ಪಾಸ್ ಪಡೆದವರಿಗೆ ಸಹ ಅಮ್ಮನ ದರ್ಶನ ಸುಲಭವಾಗಿ ಸಿಗಲಿಲ್ಲ. ದೇವಸ್ಥಾನದಿಂದ ಸೊರಬ ರಸ್ತೆಯವರೆಗೂ ಬಿಸಿಲಿನಲ್ಲಿ ಪಾಸ್ ಇದ್ದರೂ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರ ಮಧ್ಯೆ ಅತೀ ಹೆಚ್ಚು ಪಾಸ್ ಗಳು ಅಧಿಕಾರಿಗಳಿಗೆ ನೀಡಲಾಗಿದೆ ಎನ್ನುವ ವಿರೋಧದ ಕೂಗು ಕೂಡ ಕೇಳಿ ಬಂದಿತು. ಹಣ ಕೊಟ್ಟು ವಿಶೇಷ ಪೂಜೆ ಪಾಸ್ ಪಡೆದವರು ಹಾಗೂ ಬರಿ ದರ್ಶನಕ್ಕೆ ಶಿಫಾರಸ್ಸು ಪಾಸು ಪಡೆದವರು ಇಬ್ಬರನ್ನು ಒಂದೇ ಸರದಿಯಲ್ಲಿ ನಿಲ್ಲಿಸಿದ್ದು ದೊಡ್ಡ ರಾದ್ಧಾಂತಕ್ಕೆ ಕಾರಣವಾಯಿತು.
ಪೊಲೀಸರ ಕ್ರಮಕ್ಕೆ ತೀವ್ರ ಅಸಮಾಧಾನ
ಮಾರಿಕಾಂಬಾ ದೇವಿ ದರ್ಶನ ಜನರಿಗೆ ಸುಲಭವಾಗಿ ಸಿಗಬೇಕು ಎಂದು ಬಿಗಿ ಪೊಲೀಸ್ ಬಂದೋಬಸ್ತು ಮಾಡಲಾಗಿತ್ತು. ಇದಕ್ಕಾಗಿ ಸುಮಾರು 500 ಪೊಲೀಸ್ ಅಧಿಕಾರಿ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿತ್ತು. ಅತಿಹೆಚ್ಚಿನ ಪೊಲೀಸ್ ವ್ಯವಸ್ಥೆಯೆ ಭಕ್ತರ ಅಸಮಾಧಾನಕ್ಕೆ ಕಾರಣವಾಗಿದ್ದು, ಯಾರನ್ನೋ ಒಳಗೆ ಬಿಡದೆ ಪೊಲೀಸರು ತೋರಿಸುತ್ತಿದ್ದ ದರ್ಪಕ್ಕೆ ಜನರು ತೀವೃ ಅಸಮಾಧಾನ ವ್ಯಕ್ತಪಡಿಸಿದರು. ಪೌರಾಯುಕ್ತ ನಾಗಪ್ಪ ಅವರನ್ನು ಒಳಗೆ ಬಿಡಲು ನಿಷೇಧಿಸಿದಾಗ ವಿರೋಧದ ಕೂಗು ಜೋರಾಯ್ತು. ಆದರೇ ಈ ರೀತಿಯ ಬಿಗಿ ಬಂದೋಬಸ್ತ್ ಇದೇ ಮೊದಲು ಜಾತ್ರೆಯಲ್ಲಿ ಮಾಡಿದ್ದರಿಂದ ಜನತೆ ಒಪ್ಪಿಕೊಳ್ಳುವುದು ಕಷ್ಟ ಸಾಧ್ಯವಾಯಿತು. ಮಧ್ಯಾಹ್ನದ ಹೊತ್ತಿಗೆ ಶಿಸ್ತಿನ ಅರಿವು ನಿಧಾನವಾಗಿ ಅರಿಕೆಯಾಗುತ್ತಾ ಬಂತು.

ಬಿಜೆಪಿ ಪ್ರತಿಭಟನೆ
ದೇವಿಯ ದರ್ಶನಕ್ಕೆ ಅಡ್ಡಿಪಡಿಸುತ್ತಿರುವ ಪೊಲೀಸ್ ಇಲಾಖೆ ಕ್ರಮವನ್ನು ಖಂಡಿಸಿ ಬಿಜೆಪಿ ಪ್ರಮುಖರು ಸ್ಥಳದಲ್ಲಿಯೆ ಪ್ರತಿಭಟನೆ ನಡೆಸಿ, ಪೊಲೀಸರಿಗೆ ಧಿಕ್ಕಾರ ಕೂಗಿದರು. ಬಿಜೆಪಿ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಟಿ.ಡಿ.ಮೇಘರಾಜ್, ನಗರಸಭೆ ಮಾಜಿ ಸದಸ್ಯ ಆರ್. ಶ್ರೀನಿವಾಸ್ ಇನ್ನಿತರರು ಪೊಲೀಸರು ಭಕ್ತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಅಮ್ಮನವರ ದರ್ಶನಕ್ಕೂ ಅವಕಾಶ ಕೊಡದಂತೆ ಅವರನ್ನು ತಡೆಯುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ತಕ್ಷಣ ಭಕ್ತರಿಗೆ ಅಮ್ಮನವರ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು. ಈ ವೇಳೆ ಸ್ಥಳಕ್ಕೆ ಬಂದ ಎಎಸ್ಪಿ ಡಾ. ಬೆನಕ ಪ್ರಸಾದ್ ಕೂಡಲೇ ಸಮಸ್ಯೆ ಬಗೆಹರಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಸಂಚಾಲಕರ ಪ್ರತಿಭಟನೆ
ಜಾತ್ರೆ ಯಶಸ್ಸಿಗಾಗಿ ವಿವಿಧ ಸಮಿತಿಗಳನ್ನು ರಚಿಸಿದ್ದು, ಇವರು ಕಾರ್ಯನಿಮಿತ್ತ ದೇವಸ್ಥಾನಕ್ಕೆ ಹೋಗಲು ಸಹ ಪೊಲೀಸರು ಅವಕಾಶ ಕಲ್ಪಿಸಲಿಲ್ಲ. ತಮ್ಮ ಬಳಿ ಇರುವ ಪಾಸ್ ತೋರಿಸಿದರೂ ಬಂದೋಬಸ್ತಿನಲ್ಲಿದ್ದ ಪೊಲೀಸರು ಬಿಡಲು ಒಪ್ಪದೆ ಇದ್ದಾಗ ಸಂಚಾಲಕರು ತಮಗೆ ನೀಡಿದ ಬ್ಯಾಡ್ಜ್ ಮತ್ತು ಬ್ಯಾಗ್ ಎಸೆದು ಪೊಲೀಸರಿಗೆ ದಿಕ್ಕಾರ ಕೂಗುವ ಜೊತೆಗೆ ತಾವು ಸಮಿತಿ ವಹಿಸಿದ ಕೆಲಸ ಮಾಡುವುದಿಲ್ಲ ಎಂದು ಹಠ ಹಿಡಿದ ಘಟನೆ ನಡೆಯಿತು. ಜೊತೆಗೆ ಭಕ್ತರ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಸರದಿ ಸಾಲಿನಲ್ಲಿ ನಿಂತ ಭಕ್ತರೂ ದಿಕ್ಕಾರ ಕೂಗಿದರು. ಅಧಿಕಾರಿಗಳು ನಿರಂತರವಾಗಿ ಸಮಿತಿ ಮತ್ತು ಸಾರ್ವಜನಿಕರ ಜೊತೆ ಮಾತುಕತೆ ನಡೆಸಿ ಸಮನ್ವಯತೆ ಸಾಧಿಸಿದರು. 
ಅಖಾಡಕ್ಕೆ ಇಳಿದ ಶಾಸಕರು, ಖುದ್ದು ಭಕ್ತರ ದರ್ಶನಕ್ಕೆ ಗೋಪಾಲಕೃಷ್ಣ ಬೇಳೂರು ವ್ಯವಸ್ಥೆ
ಶಾಸಕ ಗೋಪಾಲಕೃಷ್ಣ ಬೇಳೂರು ಅವರು ತಮ್ಮ ಪತ್ನಿ, ಕುಟುಂಬ ಸಮೇತವಾಗಿ ಬಂದು ಮಾರಿಕಾಂಬೆಗೆ ಪೂಜೆ ಸಲ್ಲಿಸಿದರು. ನಂತ್ರ ಪಾಸ್ ಕಿರಿಕಿರಿ, ಸಾರ್ವಜನಿಕರಿಂದ ಅಸಮಾಧಾನ, ಬಿಜೆಪಿ ಪ್ರತಿಭಟನೆ ಬಿಗಡಾಯಿಸುತ್ತಿದ್ದಂತೆ ತಾವೇ ಅಖಾಡಕ್ಕೆ ಇಳಿದು ಸುಮಾರು ನಾಲ್ಕು ತಾಸುಗಳ ಕಾಲ ದೇವಿಯ ಎದುರು ನಿಂತು ಸರದಿ ಸಾಲಿನಲ್ಲಿ ಬರುವ ಭಕ್ತರಿಗೆ ಸೂಕ್ತ ದರ್ಶನದ ವ್ಯವಸ್ಥೆ ಮಾಡಿದರಲ್ಲದೇ ನಮ್ಮೂರಿನ ಜಾತ್ರೆ ಎಲ್ಲರೂ ಒಟ್ಟಾಗಿ ಮುನ್ನೆಡೆಸೋಣ. ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸುತ್ತಿದ್ದಾರೆ. ಎಲ್ಲರೂ ಸೇರಿ ನಿಭಾಯಿಸೋಣ ಎಂದು ಮನವಿ ಮಾಡಿ, ವಾತಾವರಣ ತಿಳಿಗೊಳಿಸಿದರು.
ದಿಢೀರ್ ಕುಸಿದ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅಸ್ವಸ್ಥ
ಮಂಗಳವಾರ ಬೆಳಿಗ್ಗೆ 11ರ ಸುಮಾರಿಗೆ ಅಮ್ಮನವರ ದರ್ಶನಕ್ಕೆ ಬಂದಿದ್ದ ವಿಧಾನಸಭೆ ಮಾಜಿ ಅಧ್ಯಕ್ಷ ಕಾಗೋಡು ತಿಮ್ಮಪ್ಪ ನೂಕುನುಗ್ಗಲು ಹಾಗೂ ಜನದಟ್ಟಣೆಯಿಂದ ತೀವೃ ಅಸ್ವಸ್ತಗೊಂಡು ಕುಸಿದು ಬಿದ್ದ ಘಟನೆ ನಡೆಯಿತು. ಎಲ್ಲ ಕಡೆ ಬ್ಯಾರಿಕೇಡ್ ಹಾಕಿದ್ದರಿಂದ ಅಂಬ್ಯುಲೆನ್ಸ್ ಸಹ ಒಳಗೆ ಬರಲು ಸಾಧ್ಯವಾಗದೆ ಇರುವುದರಿಂದ ಕಾರ್ಯಕರ್ತರು ಅವರನ್ನು ಕಷ್ಟಪಟ್ಟು ವಾಹನದ ಮೂಲಕ ಉಪವಿಭಾಗೀಯ ಆಸ್ಪತ್ರೆಗೆ ಕರೆದುಕೊಂಡು ಬಂದರು. ವೈದ್ಯ ಡಾ. ವಿಕ್ರಮ್ ತಕ್ಷಣ ಚಿಕಿತ್ಸೆ ನೀಡಿದ ನಂತರ ಕಾಗೋಡು ಆರೋಗ್ಯ ಸುಧಾರಿಸಿದೆ.
ಗಂಡನ ಮನೆಗೆ ತಾಯಿ ಪ್ರತಿಷ್ಠಾಪನೆ
ಇಂದು ತವರು ಮನೆಯಿಂದ ಗಂಡನ ಮನೆಗೆ ದೇವಿ ಮಾರಿಕಾಂಬೆಯನ್ನು ರಥದಲ್ಲಿ ಕುಳ್ಳಿರಿಸಿ ಸಾಂಪ್ರದಾಯಿಕ ಆಚರಣೆ, ಆರಾಧನೆಗಳೊಂದಿಗೆ ರಾಜಬೀದಿ ಉತ್ಸವದ ಮೂಲಕ ತರಲಾಯಿತು. ಬುಧವಾರ ಬೆಳಗಿನವರೆಗೂ ನಡೆದ ಮೆರವಣಿಗೆಯ ನಂತರ ತಾಯಿ ಮಾರಿಕಾಂಬೆಯನ್ನು ಗಂಡನ ಮನೆಯಲ್ಲಿ ಪ್ರತಿಷ್ಠಾಪಿಸಲಾಯಿತು. ಇಂದಿನಿಂದ 8 ದಿನಗಳ ಕಾಲ ತಾಯಿ ಮಾರಿಕಾಂಬೆಯ ವೈಶಿಷ್ಟ್ಯ ಪೂರ್ಣ ಧಾರ್ಮಿಕ ವಿಧಿ ವಿಧಾನ ನಡೆಯಲಿದ್ದು, ಭಕ್ತರ ಅನುಕೂಲಕ್ಕಾಗಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

ಮಾರಿಕಾಂಬ ದೇವಾಲಯದ ಬಳಿ ಕುಂಕುಮಾರ್ಚನೆಗೆ ವಿಶೇಷ ವ್ಯವಸ್ಥೆ
ಭಕ್ತಾದಿಗಳು ದೇವಿಯ ದರ್ಶನದ ನಂತ್ರ ಕುಂಕುಮಾರ್ಚನೆಯಲ್ಲಿ ಪಾಲ್ಗೊಳ್ಳುತ್ತಾರೆ. ಈ ಹಿನ್ನಲೆಯಲ್ಲಿ ವಿಶೇಷವಾದ ಜರ್ಮನ್ ಟೆಂಟ್ ಅಡಿಯಲ್ಲಿ ವೃತ್ವಿಜರ ಮೂಲಕ ಕುಂಕುಮಾರ್ಚನೆಯ ವ್ಯವಸ್ಥೆಯನ್ನು ಭಕ್ತಾದಿಗಳಿಗೆ ಕಲ್ಪಿಸಲಾಗಿದೆ.








