ಶಿವಮೊಗ್ಗ: ಅವಕಾಶ ಸಿಕ್ಕಾಗ ಅಭಿವೃದ್ಧಿ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಬೇಕು ಒಳ್ಳೆಯ ಕೆಲಸ ಡಂಗೂರ ಸಾರಿಕೊಂಡು ಹೋಗಲು ಬರುವುದಿಲ್ಲ. ಇಂತಹ ಮಾದರಿ ಕೆಲಸಗಳನ್ನು ಜನತೆಗೆ ತಿಳಿಸುವ ಪ್ರಾಮಾಣಿಕ ಕೆಲಸವನ್ನು ಮಾಧ್ಯಮಗಳು ಪರಿಣಾಮಕಾರಿಯಾಗಿ ಮಾಡುತ್ತಿದೆ ಎಂದು ಪೌರಾಯುಕ್ತ ಎಚ್.ಕೆ.ನಾಗಪ್ಪ ಹೇಳಿದರು.
ಇಂದು ಅವರು ಶಿವಮೊಗ್ಗ ಜಿಲ್ಲೆಯ ಸಾಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ತಾಲ್ಲೂಕು ಸಂಘದ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದಂತ ಅವರು, ಮಾಧ್ಯಮಗಳು ಇಲ್ಲದೆ ಹೋಗಿದ್ದರೆ ಬಹುತೇಕ ವಿಷಯಗಳು ಜಗತ್ತಿಗೆ ಗೊತ್ತಾಗುತ್ತಲೇ ಇರಲಿಲ್ಲ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಮಾಧ್ಯಮ ರಂಗ ಅತ್ಯಂತ ಪರಿಣಾಮಕಾರಿಯಾಗಿ ನಮ್ಮ ದೇಶದಲ್ಲಿ ಕೆಲಸ ಮಾಡುತ್ತಿದೆ ಎಂದರು.

ಒಳ್ಳೆಯದ್ದು, ಕೆಟ್ಟದನ್ನು ತಿಳಿಸುವುದರಿಂದ ಆಯಾ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ತಮ್ಮ ತಪ್ಪುಒಪ್ಪುಗಳನ್ನು ತಿದ್ದಿಕೊಳ್ಳಲು ಸಹಾಯವಾಗುತ್ತದೆ. ಅನೇಕ ಸಂದರ್ಭದಲ್ಲಿ ತಮ್ಮ ಹಕ್ಕುಗಳನ್ನು ಪ್ರತಿಪಾದಿಸುತ್ತಾರೆಯೆ ವಿನಃ ಕರ್ತವ್ಯವನ್ನು ಮರೆತು ಬಿಡುತ್ತಾರೆ. ಅಂತಹ ಕರ್ತವ್ಯವನ್ನು ನೆನಪಿಸುವ ಕೆಲಸ ಮಾಧ್ಯಮಗಳು ಮಾಡುತ್ತಿವೆ. ಸಾಗರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಒಂದು ತಂಡವಾಗಿ ಉತ್ತಮ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ವೈದ್ಯನಾಥ್ ಮಾತನಾಡಿ, ಸಂಘಟನೆ ಮೂಲಕ ಎತ್ತುವ ಧ್ವನಿಗೆ, ಹಕ್ಕಿಗಾಗಿ ಹೋರಾಟ ಮಾಡುವುದಕ್ಕೆ ಯಶಸ್ಸು ಸಿಗುತ್ತದೆ. ಶಿವಮೊಗ್ಗ ಜಿಲ್ಲಾ ಸಂಘದಲ್ಲಿ 300ಕ್ಕೂ ಅಧಿಕ ಸಕ್ರಿಯ ಸದಸ್ಯರು ಇದ್ದು ಅವರ ಹಕ್ಕುಗಳನ್ನು ಕಾಪಾಡುವ ಕೆಲಸ ನಾವು ಮಾಡುತ್ತಿದ್ದೇವೆ. ಸದಸ್ಯರು ಮತ್ತು ಅವರ ಕುಟುಂಬದ ಆರೋಗ್ಯ ರಕ್ಷಣೆಗಾಗಿ ವಿಮಾ ಸೌಲಭ್ಯವನ್ನು ಮುಂದಿನ ದಿನಗಳಲ್ಲಿ ಕಲ್ಪಿಸಲು ಉದ್ದೇಶಿಸಲಾಗಿದೆ. ಇದರ ಜೊತೆಗೆ 12 ಜನ ಹಿರಿಯ ಪತ್ರಕರ್ತರ ಹೆಸರಿನಲ್ಲಿ ಉತ್ತಮ ವರದಿಗಾರಿಕೆ ಮಾಡುತ್ತಿರುವ ಪತ್ರಕರ್ತರನ್ನು ಗುರುತಿಸಿ ಪ್ರಶಸ್ತಿ ನೀಡುವುದು, ಅಧ್ಯಯನ ಪ್ರವಾಸ ಇನ್ನಿತರೆ ಕಾರ್ಯಕ್ರಮಗಳನ್ನು ರೂಪಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಮಹೇಶ್ ಹೆಗಡೆ, ಎಲ್ಲರ ಸಹಕಾರದಿಂದ ಸಂಘವನ್ನು ಉತ್ತಮವಾಗಿ ನಡೆಸಿಕೊಂಡು ಹೋಗಲು ಸಾಧ್ಯವಾಗಿದೆ. ಶಾಸಕರು, ಹಿಂದಿನ ನಗರಸಭೆ ಚುನಾಯಿತ ಮಂಡಳಿ, ಪೌರಾಯುಕ್ತರ ಸಹಕಾರದಿಂದ ಉತ್ತಮವಾದ ಕಟ್ಟಡ ಸಂಘದ ಕಾರ್ಯಚಟುವಟಿಕೆಗೆ ದೊರೆತಿದೆ. ಸದಸ್ಯರ ಹಿತಕಾಯುವ ನಿಟ್ಟಿನಲ್ಲಿ ಸಂಘವು ಬೇರೆಬೇರೆ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ ಎಂದರು.
ಈ ವೇಳೆ ಶಿವಮೊಗ್ಗ ಜಿಲ್ಲಾ ಸಂಘದ ಕೋಶಾಧ್ಯಕ್ಷ ರೋಹಿತ್, ಜಿಲ್ಲಾ ಕಾರ್ಯದರ್ಶಿ ದೀಪಕ್ ಸಾಗರ್, ಜಿಲ್ಲಾ ವಿಶೇಷ ಆಹ್ವಾನಿತ ಜಿ.ನಾಗೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಎಂಜಿ ರಾಘವನ್, ತಾಲ್ಲೂಕು ಉಪಾಧ್ಯಕ್ಷ ರವಿನಾಯ್ಡು, ಕೋಶಾಧ್ಯಕ್ಷ ಗಿರೀಶ್ ರಾಯ್ಕರ್ ಸೇರಿದಂತೆ ಸಾಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಉಪಸ್ಥಿತರಿದ್ದರು.








