ಬೆಂಗಳೂರು :ರಾಜ್ಯದ ಮಹಿಳೆಯರಿಗೆ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಯೋಜನೆ ಅಡಿ 2,000ಗಳನ್ನು ಖಾತೆಗೆ ಹಾಕುತ್ತಿರುವ ಯೋಜನೆಗೆ ತಾಂತ್ರಿಕ ದೋಷದಿಂದ ಇದುವರೆಗೂ ಹಲವಾರು ಮಹಿಳೆಯರಿಗೆ 2000 ತಲುಪಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದೀಗ ರಾಜ್ಯ ಸರ್ಕಾರ ಅರ್ಹರಾಗಿರುವ ಸಂಬಂಧ ಪಟ್ಟ ಐಟಿಜಿಎಸ್ಟಿ ಪ್ರಾಧಿಕಾರಿಗಳಿಂದ ತಾವು ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ ಎಂದು ದೃಢೀಕರಣ ಪತ್ರ ನೀಡಲು ಮುಂದಾಗಿದೆ ಎಂದು ತಿಳಿದು ಬಂದಿದೆ.
‘ಗೃಹಲಕ್ಷ್ಮಿ’ ಯೋಜನೆಯ ತಾಂತ್ರಿಕ ಕಾರಣದಿಂದಾಗಿ ರಾಜ್ಯದ ಸಹಸ್ರಾರು ಮಹಿಳೆಯರು ಮಾಸಿಕ ತಲಾ 2 ಸಾವಿರ ರು. ಪಡೆಯುವುದರಿಂದ ವಂಚಿತರಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ (ಇಡಿಸಿಎಸ್) ನಿರ್ದೇಶನಾಲಯದೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹರಿಸಲು ಮುಂದಾಗಿದೆ.
ಗೃಹಲಕ್ಷ್ಮಿ ಯೋಜನೆಗೆ ನೋಂದಣಿಯಾಗಿದ್ದು, ವಾಸ್ತವವಾಗಿ ತೆರಿಗೆ ಪಾವತಿಸದಿದ್ದರೂ ಐಟಿ ಅಥವಾ ಜಿಎಸ್ಟಿ ತೆರಿಗೆದಾರರರೆಂದು ಪೋರ್ಟಲ್ನಲ್ಲಿ ತೋರಿಸುತ್ತಿತ್ತು. ಇದರಿಂದಾಗಿ ಯೋಜನೆಗೆ ಫಲಾನುಭವಿಗಳಾಗಲು ನೋಂದಣಿ ಮಾಡಿಸಿ ಆರು ತಿಂಗಳಾಗಿದ್ದರೂ ಬಹಳಷ್ಟು ಮಹಿಳೆಯರು ಸರ್ಕಾರದಿಂದ ಹಣ ಪಡೆಯಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯದೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಇಲಾಖೆ ಕಾರ್ಯೋನ್ಮುಖವಾಗಿದೆ.
ಆ ಪ್ರಕಾರ ಯೋಜನೆಗೆ ಅರ್ಹರಾಗಿರುವವರು ಸಂಬಂಧಪಟ್ಟ ಐಟಿ/ಜಿಎಸ್ಟಿ ಪ್ರಾಧಿಕಾರಗಳಿಂದ ತಾವು ತೆರಿಗೆ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ದೃಢೀಕರಣ ಪತ್ರ ಪಡೆದು ಆಯಾ ತಾಲೂಕು ತಿಶು ಅಭಿವೃದ್ಧಿ ಯೋಜನಾ ಕಚೇರಿಗೆ ಸಲ್ಲಿಸಬೇಕು. ಈ ಕಚೇರಿಯವರು ತಮ್ಮ ತಾಲೂಕಿಗೆ ಸಂಬಂಧಪಟ್ಟ ಅರ್ಹರ ದಾಖಲೆಗಳನ್ನು ಜಿಲ್ಲಾ ಉಪ ನಿರ್ದೇಶಕರ ಕಚೇರಿಗೆ ತಲುಪಿಸಬೇಕಿದೆ.
ಜಿಲ್ಲಾ ಉಪ ನಿರ್ದೇಶಕರು ತಮ್ಮ ಜಿಲ್ಲೆ ವ್ಯಾಪ್ತಿಯ ಪ್ರಕರಣಗಳ ಮಾಹಿತಿಯನ್ನು ಪ್ರಧಾನ ಕಚೇರಿಗೆ ಸಲ್ಲಿಸಬೇಕು. ಇಲ್ಲಿಂದ ಇ-ಆಡಳಿತ ಇಲಾಖೆಯ ಕುಟುಂಬ ತಂತ್ರಾಂಶದ ವಿಭಾಗಕ್ಕೆರವಾನೆಯಾಗಲಿದ್ದು ಅರ್ಜಿಗಳ ಪುನರ್ ಪರಿಶೀಲನೆ ನಡೆಯಲಿದೆ. ಬಳಿಕ ಅರ್ಹರಿಗೆ ಯೋಜನೆಯ ಹಣ ಪಾವತಿಯಾಗಲಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.