ದಾವಣಗೆರೆ : ಹಳ್ಳದ ಚೆಕ್ಡ್ಯಾಂನಲ್ಲಿ ಈಜಾಡಲು ತೆರಳಿದ್ದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಬಾನುವಳ್ಳಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೃತ ಬಾಲಕನನ್ನು ಬಾನುವಳ್ಳಿ ಗ್ರಾಮದ 9ನೇ ತರಗತಿ ವಿದ್ಯಾರ್ಥಿ ಮೊಹ್ಮದ್ ತನ್ವೀರ್ (13) ಎಂದು ತಿಳಿದುಬಂದಿದೆ. ಗ್ರಾಮದ ಸಮೀಪ ರಾಯಪುರ ರಸ್ತೆಯಲ್ಲಿರುವ ದೊಡ್ಡಹಳ್ಳದ ಚೆಕ್ಡ್ಯಾಂನಲ್ಲಿ ಈಜಾಡಿ ಬರುವುದಾಗಿ ಸಂಜೆ 4ಕ್ಕೆ ಹೊರಟಿದ್ದ ತನ್ವೀರ್ ಮನೆಗೆ ಮರಳಿರಲಿಲ್ಲ.
ಆಗ ಹಳ್ಳಕ್ಕೆ ಈಜುಗಾರರೊಂದಿಗೆ ಹೋಗಿ ಹುಡುಕಾಡಿದಾಗ ಮಧ್ಯರಾತ್ರಿ ಶವ ಪತ್ತೆಯಾಯಿತು.ಸ್ಥಳಕ್ಕೆ ಭೇಟಿ ನೀಡಿದ್ದ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.