ದರ್ಭಾಂಗ : ಕಳ್ಳತನ ಆರೋಪ ಹೊರಿಸಿ ಆತನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ, ಇದೇ ವೇಳೆ ನೀರು ಕೇಳಿದ್ದಕ್ಕೆ ಮೂತ್ರ ಕುಡಿಸಿರುವ ಘಟಡನೆ ದರ್ಭಾಂಗದಲ್ಲಿ ನಡೆದಿದೆ. ಘಟನೆ ದರ್ಭಾಂಗದ ಕಿಯೋಟಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಜೋರಾ ಗ್ರಾಮದ ನಿವಾಸಿ ರಾಮ್ ಪ್ರಕಾಶ್ ಪಾಸ್ವಾನ್ ಎಂಬಾತನ ಮೇಲೆ ಕಳ್ಳತನದ ಆರೋಪವನ್ನು ಹೊರಿಸಿ ಈ ಹಲ್ಲೆಯನ್ನು ನಡೆಸಿದ್ದು, ಹಲ್ಲೆಗೊಳಗಾದವ ದಲಿತ ಸಮುದಾಯದವನಾಗಿದ್ದ ಕಾರಣಕ್ಕೆ ಈ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಇದೇ ವೇಳೆ, ದೊಣ್ಣೆಗಳಿಂದ ಹೊಡೆಯುವ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ವೈರಲ್ ವೀಡಿಯೊದಲ್ಲಿ, ಕೆಲವರು ರಾಮ್ ಪ್ರಕಾಶ್ ಪಾಸ್ವಾನ್ ಕೈ ಮತ್ತು ಕಾಲುಗಳನ್ನು ಹಗ್ಗದಿಂದ ಕಟ್ಟಿ ಕೋಲಿನಿಂದ ಹೊಡೆಯುವುದನ್ನು ಕಾಣಬಹುದಾಗಿದೆ. ರಾಮ್ ಪ್ರಕಾಶ್ ಕುಡಿಯಲು ನೀರು ಕೇಳಿದಾಗ, ಜನರು ಅವನನ್ನು ಮೂತ್ರ ಕುಡಿಯುವಂತೆ ಮಾಡಿದರು ಎಂದು ಆರೋಪಿಸಲಾಗಿದೆ. ಹಲ್ಲೆಯ ವೀಡಿಯೊ ವೈರಲ್ ಆದಾಗ, ದರ್ಭಾಂಗಾ ಪೊಲೀಸರು ಅದರ ತನಿಖೆಯನ್ನು ಪ್ರಾರಂಭಿಸಿದ್ದು, ಇದನ್ನು ಖಚಿತಪಡಿಸಿದ ದರ್ಭಾಂಗಾ ಎಸ್ಡಿಪಿಒ ಕೃಷ್ಣಾನಂದನ್ ಕುಮಾರ್, ದರ್ಭಾಂಗ ಪೊಲೀಸರು ಆಸ್ಪತ್ರೆಯಲ್ಲಿ ಸಂತ್ರಸ್ತ ಯುವಕ ರಾಮ್ ಪ್ರಕಾಶ್ ಪಾಸ್ವಾನ್ ಅವರ ಹೇಳಿಕೆಯನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.