ಶಿವಮೊಗ್ಗ: ಸಾಗರ ನಗರಸಭೆಯಿಂದ ನಲ್ಲಿ ರಿಪೇರಿ ಮಾಡಲು ಬಂದಿದ್ದೇವೆ ಎಂದು ನಂಬಿಸಿ ವೃದ್ಧ ದಂಪತಿಗಳ ಕಣ್ಣಿಗೆ ಮಣ್ಣೆರಚಿದ ಇಬ್ಬರು ಚಾಣಾಕ್ಷ ಕಳ್ಳರು, ಮನೆಯಲ್ಲಿದ್ದ ಸುಮಾರು 12 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ದೋಚಿಕೊಂಡು ಪರಾರಿಯಾದ ಘಟನೆ ಶ್ರೀಧರ ನಗರದಲ್ಲಿ ನಡೆದಿದೆ.
ನಂಬಿಸಿ ನಡೆದ ನಯವಂಚನೆ
ಶ್ರೀಧರ ನಗರದ ನಿವಾಸಿ ಪ್ರಭಾಕರ್ ಎಂ. ಹೆಗಡೆ ಎಂಬುವವರ ಮನೆಯಲ್ಲಿ ನಲ್ಲಿಯ ನೀರಿನ ಸಮಸ್ಯೆ ಇತ್ತು. ಈ ಬಗ್ಗೆ ಅವರು ನಗರಸಭೆಗೆ ದೂರು ನೀಡಿ ರಿಪೇರಿ ಮಾಡಿಕೊಡುವಂತೆ ಮನವಿ ಮಾಡಿದ್ದರು. ಇದನ್ನು ಸರಿಯಾಗಿ ಬಳಸಿಕೊಂಡ ಕಳ್ಳರು, ಏಪ್ರಿಲ್ 3ರಂದು ಹೆಲ್ಮೆಟ್ ಧರಿಸಿ ಪ್ರಭಾಕರ್ ಅವರ ಮನೆಗೆ ಬಂದಿದ್ದಾರೆ. “ನಾವು ನಗರಸಭೆಯಿಂದ ಬಂದಿದ್ದೇವೆ, ನಿಮ್ಮ ಮನೆಯ ನಲ್ಲಿ ರಿಪೇರಿ ಇದೆ ಎಂದು ದೂರು ನೀಡಿದ್ದೀರಲ್ಲಾ, ಅದನ್ನು ಸರಿಪಡಿಸಲು ಬಂದಿದ್ದೇವೆ” ಎಂದು ಹೇಳಿ ನಂಬಿಸಿ ಸುಲಭವಾಗಿ ಮನೆಯೊಳಗೆ ಪ್ರವೇಶ ಪಡೆದಿದ್ದಾರೆ.
ದಂಪತಿಗಳನ್ನು ಟೆರಸ್ಗೆ ಕಳುಹಿಸಿ ಕೈಚಳಕ
ಮನೆಯೊಳಗೆ ನುಗ್ಗಿದ ಇಬ್ಬರು ಕಳ್ಳರಲ್ಲಿ ಒಬ್ಬ ಪ್ರಭಾಕರ್ ಅವರನ್ನು ನಲ್ಲಿ ತೋರಿಸುವ ನೆಪದಲ್ಲಿ ಟೆರಸ್ ಮೇಲೆ ಕರೆದುಕೊಂಡು ಹೋಗಿದ್ದಾನೆ. ಇನ್ನೊಬ್ಬ ಕೆಳಗೆ ನಲ್ಲಿ ಪರೀಕ್ಷೆ ಮಾಡುವ ನಾಟಕವಾಡಿದ್ದಾನೆ. ಅಷ್ಟಕ್ಕೆ ಸುಮ್ಮನಾಗದ ಖದೀಮರು, ಟೆರಸ್ ಮೇಲಿದ್ದ ಪ್ರಭಾಕರ್ ಅವರಿಗೆ ನಿಮ್ಮ ಪತ್ನಿಯನ್ನೂ ಮೇಲೆ ಕರೆಯಿರಿ ಎಂದು ಹೇಳಿ, ದಂಪತಿಗಳಿಬ್ಬರೂ ಟೆರಸ್ ಮೇಲೆ ಇರುವಂತೆ ನೋಡಿಕೊಂಡಿದ್ದಾರೆ.
ದಂಪತಿಗಳು ಮೇಲಿರುವ ಸುಮಾರು ಅರ್ಧ ಗಂಟೆಯ ಅವಧಿಯಲ್ಲಿ ಕೆಳಗಿದ್ದ ಕಳ್ಳ ಕಪಾಟನ್ನು ಜಾಲಾಡಿ ಚಿನ್ನಾಭರಣಗಳನ್ನು ದೋಚಿದ್ದಾನೆ. ಕೆಲಸ ಮುಗಿಯಿತು ಎಂದು ಹೇಳಿ ಇಬ್ಬರೂ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಗಾಡ್ರೇಜ್ ತೆರೆದಾಗ ದಂಪತಿಗೆ ಕಾದಿತ್ತು ಶಾಕ್!
ಕಳ್ಳರು ಹೋದ ಅರ್ಧ ಗಂಟೆಯ ನಂತರ ಅನುಮಾನಗೊಂಡ ಪ್ರಭಾಕರ್ ಅವರು ಗಾಡ್ರೇಜ್ ಕಪಾಟನ್ನು ಪರಿಶೀಲಿಸಲು ಪತ್ನಿಗೆ ತಿಳಿಸಿದ್ದಾರೆ. ಕಪಾಟು ತೆರೆದಾಗ ದಂಪತಿಗಳಿಗೆ ದೊಡ್ಡ ಆಘಾತ ಕಾದಿತ್ತು. ಕಪಾಟಿನಲ್ಲಿದ್ದ ಸುಮಾರು 11,60,500 ರೂ. ಮೌಲ್ಯದ ಬಂಗಾರದ ಆಭರಣಗಳು ಹಾಗೂ ಬೆಳ್ಳಿಯ ಲೋಟಗಳು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಪೊಲೀಸ್ ದೂರು ದಾಖಲು
ನಗರಸಭೆ ಸಿಬ್ಬಂದಿಯ ಸೋಗಿನಲ್ಲಿ ಬಂದು ನಂಬಿಕೆ ದ್ರೋಹ ಎಸಗಿದ ಕಿರಾತಕರ ವಿರುದ್ಧ ಪ್ರಭಾಕರ್ ಅವರು ಏಪ್ರಿಲ್ 4ರಂದು ಸಾಗರ ನಗರ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳರಿಗಾಗಿ ಜಾಲ ಬೀಸಿದ್ದಾರೆ.
ಸಾರ್ವಜನಿಕರಿಗೆ ಪೊಲೀಸರಿಂದ ಈ ಮನವಿ
ಅಪರಿಚಿತರು ಸರ್ಕಾರಿ ಕಚೇರಿಯಿಂದ ಬಂದಿದ್ದೇವೆ ಎಂದು ಹೇಳಿದಾಗ ಅವರ ಗುರುತಿನ ಚೀಟಿ ಪರಿಶೀಲಿಸದೆ ಅಥವಾ ಒಬ್ಬರೇ ಇದ್ದಾಗ ಮನೆಯೊಳಗೆ ಬಿಟ್ಟುಕೊಳ್ಳಬೇಡಿ. ಸಣ್ಣ ಅನುಮಾನ ಬಂದರೂ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲು ಪೊಲೀಸ್ ಇಲಾಖೆ ಮನವಿ ಮಾಡಿದೆ.
ರಾಜ್ಯದ ಗ್ರಾಮೀಣ ಜನತೆಯ ಗಮನಕ್ಕೆ : `ಗ್ರಾಮಪಂಚಾಯಿತಿ’ಗಳಲ್ಲಿ ಸಿಗಲಿದೆ ಈ ಸೌಲಭ್ಯಗಳು.!








