ಬೆಂಗಳೂರು: ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಧಾರವಾಡದ ಕಾಂಗ್ರೆಶ್ ಶಾಸಕ ವಿನಯ್ ಕುಲಕರ್ಣಿ ಅವರು ಅಪರಾಧಿ ಎಂಬುದಾಗಿ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ಮಹತ್ವದ ಆದೇಶ ಮಾಡಿದೆ. ಅಲ್ಲದೇ ಅಪರಾಧಿಗಳನ್ನು ವಶಕ್ಕೆ ಪಡೆಯಲು ಕೋರ್ಟ್ ಆದೇಶಿಸಿದೆ. ಜೊತೆಗೆ ಎ20 ಹಾಗೂ 21 ಆರೋಪಿಗಳನ್ನು ಬಿಡುಗಡೆಗೆ ಆದೇಶಿಸಿದೆ. ಶಿಕ್ಷೆಯ ಪ್ರಮಾಣವನ್ನು ನಾಳೆ ಪ್ರಕಟಿಸಲಿದೆ.
ಬೆಳಿಗ್ಗೆಯಿಂದಲೇ ನ್ಯಾಯಾಲಯದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪ್ರಕರಣದ ಪ್ರಮುಖ ಆರೋಪಿ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 21 ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದರು. ನ್ಯಾಯಾಧೀಶರು ಆರಂಭದಲ್ಲಿ ಆರೋಪಿಗಳ ಹಾಜರಾತಿಯನ್ನು ದಾಖಲಿಸಿಕೊಂಡು, ದಾಖಲೆಗಳ ಅಂತಿಮ ಪರಿಶೀಲನೆಗಾಗಿ ತೀರ್ಪನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದ್ದರು. ಅದರಂತೆ ಈಗ ಅಂತಿಮ ಆದೇಶ ಹೊರಬಿದ್ದಿದೆ.
ಪ್ರಕರಣದ ಹಿನ್ನೆಲೆ:
-
ಘಟನೆ: ಜೂನ್ 2016ರಲ್ಲಿ ಧಾರವಾಡದಲ್ಲಿ ಯೋಗೇಶ್ ಗೌಡ ಅವರ ಭೀಕರ ಹತ್ಯೆಯಾಗಿತ್ತು.
-
ಆರೋಪ: ಈ ಕೊಲೆಯ ಹಿಂದೆ ಅಂದಿನ ಸಚಿವ, ಹಾಲಿ ಶಾಸಕ ವಿನಯ್ ಕುಲಕರ್ಣಿ ಅವರ ಒಳಸಂಚು ಇದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು.
-
ತನಿಖೆ: ಆರಂಭದಲ್ಲಿ ಸ್ಥಳೀಯ ಪೊಲೀಸರು ತನಿಖೆ ನಡೆಸಿ ಆರು ಜನರನ್ನು ಬಂಧಿಸಿದ್ದರು. ಆದರೆ, ಮೃತರ ಕುಟುಂಬದ ಒತ್ತಾಯದ ಮೇರೆಗೆ 2019ರಲ್ಲಿ ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ (CBI) ಹಸ್ತಾಂತರಿಸಿತ್ತು.
-
ಬಂಧನ: ತನಿಖೆ ಚುರುಕುಗೊಳಿಸಿದ್ದ ಸಿಬಿಐ ಅಧಿಕಾರಿಗಳು ವಿನಯ್ ಕುಲಕರ್ಣಿ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಈ ಪ್ರಕರಣದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಒಟ್ಟು 21 ಮಂದಿ ಆರೋಪಿಗಳ ಪಟ್ಟಿಯಲ್ಲಿದ್ದರು.
ಸತತ 10 ವರ್ಷಗಳ ಕಾನೂನು ಹೋರಾಟ:
2016ರಿಂದ ಆರಂಭವಾದ ಈ ಕಾನೂನು ಸಮರವು ಹಲವು ತಿರುವುಗಳನ್ನು ಪಡೆದುಕೊಂಡಿತ್ತು. ಸರ್ಕಾರದ ಪರ ವಕೀಲರು ಮತ್ತು ಆರೋಪಿಗಳ ಪರ ವಕೀಲರು ಸಲ್ಲಿಸಿದ್ದ ಸುದೀರ್ಘ ಲಿಖಿತ ವಾದಗಳನ್ನು ಆಲಿಸಿದ್ದ ನ್ಯಾಯಾಲಯವು, ಏಪ್ರಿಲ್ 9 ರಂದು ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು.
ದಶಕದ ಕಾಲ ನಡೆದ ಈ ವಿಚಾರಣೆಯ ಅಂತ್ಯವು ಉತ್ತರ ಕರ್ನಾಟಕದ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಇದೀಗ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವು ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅಪರಾಧಿ ಎಂಬುದಾಗಿ ಮಹತ್ವದ ತೀರ್ಪು ನೀಡಿದೆ.
ಯೋಗೀಶ್ ಗೌಡ ಕೇಸ್ ದಾಖಲಾಗಿದ್ದ ಆರೋಪಿಗಳ ಲೀಸ್ಟ್ ಹೀಗಿದೆ…
ಎ1 ಬಸವರಾಜ ಮುತ್ತಗಿ
ಎ2 ವಿಕ್ರಮ ಬಳ್ಳಾರಿ
ಎ3 ಕೀರ್ತಿಕುಮಾರ ಬೆಳ್ಳಟ್ಟಿ
ಎ4 ಸಂದೀಪ ಸವದತ್ತಿ
ಎ5 ವಿನಾಯಕ ಕಟಗಿ
ಎ6 ಮಹಾಬಳೇಶ್ವರ ಹೊಂಗಲ
ಎ7 ಸಂತೋಷ್ ಸವದತ್ತಿ
8 ದಿನೇಶ
ಎ9 ಅಶ್ವತ್ಥ್
ಎ10 ಸುನೀಲ್
ಎ11 ನಜೀರ್ ಅಹಮದ್
ಎ12 ಶಾನವಾಜ್
ಎ13 ನೂತನ್
ಎ14 ಹರ್ಷಿತ್
ಎ15 ವಿನಯ್ ಕುಲಕರ್ಣಿ
ಎ16 ಚಂದ್ರಶೇಖರ ಇಂಡಿ
ಎ17 ಶಿವಾನಂದ ಬಿರಾದಾರ
ಎ18 ವಿಕಾಸ್ ಕಲಬುರ್ಗಿ
ಎ19 ಚನ್ನಕೇಶವ ಟಿಂಗರಿಕರ
ಎ20 ವಾಸುದೇವ ನಾಯ್ಕ್
ಎ21 ಸೋಮಶೇಖರ ನ್ಯಾಮಗೌಡ
ಇಬ್ಬರನ್ನು ಹೊರತುಪಡಿಸಿ ಇತರೆ ಆರೋಪಿಗಳಿಗೆ ಶಿಕ್ಷೆ ಪ್ರಕಟ
21 ಆರೋಪಿಗಳ ಪೈಕಿ ಇಬ್ಬರು ಮಾಫಿ ಸಾಕ್ಷಿಯಾಗಿದ್ದರು. ಎ1 ಬಸವರಾಜ ಮುತ್ತಗಿ ಅವರು ಮಾಫಿ ಸಾಕ್ಷಿಯಾಗಿ ಹೇಳಿಕೆ ನೀಡಿದ್ದರು. ಎ17 ಶಿವಾನಂದ ಅವರು ಕೂಡ ಮಾಫಿ ಸಾಕ್ಷಿಯಾದ ಬಳಿಕಪೂ ಪ್ರತಿಕೂಲ ಹೇಳಿಕೆ ನೀಡಿದ್ದರು. ಹೀಗಾಗಿ ಮತ್ತೆ ಎ17 ಆರೋಪಿಯನ್ನಾಗಿಸುವಂತೆ ಸಿಬಿಐ ಅರ್ಜಿ ಸಲ್ಲಿಸಿತ್ತು. ಈ ಇಬ್ಬರನ್ನು ಹೊರತುಪಡಿಸಿ ಉಳಿದವರ ಮೇಲಿನ ಆರೋಪಿಗಳ ಸಂಬಂಧ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವು ಮಹತ್ವದ ತೀರ್ಪು ಪ್ರಕಟಿಸಿದೆ.








