ನವದೆಹಲಿ: ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ನಂತರ ಭಾರತ ಸರ್ಕಾರ ವಹಿಸಿರುವ ಮೌನವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ವಿಭಿನ್ನವಾಗಿ ವಿಶ್ಲೇಷಿಸಿದ್ದಾರೆ. ಸರ್ಕಾರದ ಮೌನವನ್ನು “ಹೇಡಿತನ” ಎಂದು ಟೀಕಿಸುತ್ತಿರುವ ಸ್ವಪಕ್ಷದ ನಾಯಕರ ನಿಲುವಿಗೆ ವಿರುದ್ಧವಾಗಿ, ತರೂರ್ ಇದನ್ನು “ಜವಾಬ್ದಾರಿಯುತ ರಾಜತಾಂತ್ರಿಕತೆ” (Responsible Statecraft) ಎಂದು ಕರೆದಿದ್ದಾರೆ.
“ಯಾವುದೇ ಘಟನೆಯನ್ನು ಖಂಡಿಸುವುದು (Condemnation) ಮತ್ತು ಅದಕ್ಕೆ ಸಂತಾಪ ಸೂಚಿಸುವುದರ (Condolence) ನಡುವೆ ವ್ಯತ್ಯಾಸವಿದೆ. ಅಲಿ ಖಮೇನಿ ಅವರು ನಮ್ಮೊಂದಿಗೆ ಸ್ನೇಹ ಸಂಬಂಧ ಹೊಂದಿದ್ದ ದೇಶದ ಆಧ್ಯಾತ್ಮಿಕ ನಾಯಕರಾಗಿದ್ದರು. ಅವರ ನಿಧನಕ್ಕೆ ಸಂತಾಪ ಸೂಚಿಸುವುದು ನಮ್ಮ ಸೌಜನ್ಯವಾಗಬೇಕಿತ್ತು,” ಎಂದು ತರೂರ್ ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸರ್ಕಾರದ ಮೌನದ ಬಗ್ಗೆ ಮಾತನಾಡಿದ ಅವರು, “ಮೌನ ಎಂದರೆ ಶರಣಾಗತಿಯಲ್ಲ, ಅದು ಒಂದು ರೀತಿಯ ಸಂಯಮ. ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಕೆಲವೊಮ್ಮೆ ಇಂತಹ ನಿಲುವು ಅನಿವಾರ್ಯ,” ಎಂದು ಪ್ರತಿಪಾದಿಸಿದರು.
ಪಶ್ಚಿಮ ಏಷ್ಯಾದಲ್ಲಿ ಸುಮಾರು 90 ಲಕ್ಷ ಭಾರತೀಯರು ವಾಸಿಸುತ್ತಿದ್ದಾರೆ ಮತ್ತು ನಮ್ಮ ಇಂಧನ ಭದ್ರತೆ ಈ ಪ್ರದೇಶದ ಮೇಲೆ ಅವಲಂಬಿತವಾಗಿದೆ. ಹೀಗಿರುವಾಗ ಅಮೆರಿಕ ಅಥವಾ ಇಸ್ರೇಲ್ ವಿರುದ್ಧ ಕಠಿಣವಾಗಿ ಮಾತನಾಡುವುದು ನಮ್ಮ ಹಿತಾಸಕ್ತಿಗಳಿಗೆ ಧಕ್ಕೆಯಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.
ಪಕ್ಷದ ಒಳಗೇ ಭಿನ್ನಮತ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಸರ್ಕಾರದ ಮೌನವನ್ನು “ಜವಾಬ್ದಾರಿಯಿಂದ ನುಣುಚಿಕೊಳ್ಳುವಿಕೆ” ಎಂದು ಟೀಕಿಸಿದ್ದರು. ಆದರೆ ತರೂರ್ ಅವರು ಸರ್ಕಾರದ “ಸಂಯಮ”ವನ್ನು ಬೆಂಬಲಿಸಿರುವುದು ಈಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.








