ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನರ ಮೇಲೆ ಸಾಲದ ಹೊರೆ ಹೇರಿದ್ದಾರೆ. ಈ ಬಜೆಟ್ ಸೇರಿದಂತೆ 4,39,254 ಕೋಟಿ ರೂ. ಸಾಲವನ್ನು ಸಿಎಂ ಮಾಡಿದ್ದು, ಖಾಲಿ ಚೊಂಬನ್ನು ಜನತೆಗೆ ನೀಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ಹೊರಹಾಕಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಲ ಮಾಡಿ ತುಪ್ಪ ತಿನ್ನು ಎನ್ನುವಂತಹ ಉಪ್ಪು, ಹುಳಿ ಖಾರ ಇಲ್ಲದ ಆಯವ್ಯಯವನ್ನು ಸಿಎಂ ಸಿದ್ದರಾಮಯ್ಯ ಮಂಡಿಸಿದ್ದಾರೆ. ಯಾವುದೇ ಹೊಸ ಯೋಜನೆಗಳಿಲ್ಲ ಕೇವಲ ʼಸಾಲʼದ ಯೋಜನೆಗಳೇ ತುಂಬಿವೆ. ಕಳೆದ ಮೂರು ವರ್ಷಗಳಲ್ಲಿ ಸಿದ್ದರಾಮಯ್ಯ 4,39,254 ಕೋಟಿ ರೂ. ಸಾಲದ ಹೊರೆಯನ್ನು ರಾಜ್ಯದ ಜನರ ತಲೆ ಮೇಲೆ ಹೇರಿದ್ದಾರೆ. ಈ ಹಣಕ್ಕೆ ಬಡ್ಡಿ ಪಾವತಿಸಲು ಕೂಡ ಆಗದ ಪರಿಸ್ಥಿತಿ ಬಂದಿದೆ. ವಿತ್ತೀಯ ಕೊರತೆ 97,000 ಕೋಟಿ ರೂ. ಆಗಿದೆ. ಸಿದ್ದರಾಮಯ್ಯನವರು ಇನ್ನೂ ಮುಂದುವರಿದರೆ ಸಾಲದ ಹೊರೆ 10 ಲಕ್ಷ ಕೋಟಿ ರೂ. ಆಗಲಿದೆ. ಸಿದ್ದರಾಮಯ್ಯನವರು ಹಿಂದಿನ ಎಲ್ಲ ಮುಖ್ಯಮಂತ್ರಿಗಳನ್ನು ಮೀರಿಸಿ ಹತ್ತು ಪಟ್ಟು ಅಧಿಕ ಸಾಲ ಮಾಡಿದ್ದಾರೆ ಎಂದರು.
ನೀರಾವರಿ ಕ್ಷೇತ್ರಕ್ಕೆ ಇವರು ಯಾವುದೇ ಕೊಡುಗೆ ನೀಡಿಲ್ಲ. ಕೃಷ್ಣೆಗೆ ಪ್ರತಿ ವರ್ಷ 10,000 ಕೋಟಿ ರೂ. ನೀಡುತ್ತೇನೆಂದು ಹೇಳಿ ಕೇವಲ ಕಣ್ಣೀರು ನೀಡಿದ್ದಾರೆ. ಎಲ್ಲ ನೀರಾವರಿ ಯೋಜನೆಗಳು ಸೇರಿ 8,045 ಕೋಟಿ ರೂ. ಕೊಟ್ಟಿದ್ದಾರೆ. ಬೆಂಗಳೂರು ಕಸ ನಿರ್ವಹಣೆ ಬಗ್ಗೆ, ರಸ್ತೆಗುಂಡಿ ಬಗ್ಗೆ ಚಕಾರ ಎತ್ತಿಲ್ಲ. ಗೋವಿಂದರಾವ್ ವರದಿಯಂತೆ ಉತ್ತರ ಕರ್ನಾಟಕಕ್ಕೆ 43,000 ಕೋಟಿ ರೂ. ನೀಡಿಲ್ಲ. ಪ್ರತಿ ವರ್ಷ 15,000 ಕೋಟಿ ರೂ. ಕೊಡಬೇಕಿತ್ತು. ಈ ಬಗ್ಗೆ ನಾನು ಕೂಡ ಪತ್ರ ಬರೆದಿದ್ದೆ. ಆ ವರದಿಯ ಬಗ್ಗೆ ಎಲ್ಲೂ ಉಲ್ಲೇಖ ಮಾಡದೆ ಉತ್ತರ ಕರ್ನಾಟಕವನ್ನು ಕಡೆಗಣಿಸಿದ್ದಾರೆ ಎಂದರು.
ಮಂಗಳೂರು, ಉಡುಪಿ, ಉತ್ತರ ಕನ್ನಡ ಮೊದಲಾದ ಭಾಗಗಳಿಗೆ ಏನೂ ನೀಡಿಲ್ಲ. ಕರಾವಳಿಗೆ ಒಣಗಿದ ಮೀನು ಕೂಡ ನೀಡಿಲ್ಲ. ಇಲ್ಲಿಗೆ ಸಂಪೂರ್ಣ ಚೊಂಬು ನೀಡಿದ್ದಾರೆ. ಅತಿ ಹೆಚ್ಚು ತೆರಿಗೆ ನೀಡುವ ಕರಾವಳಿಗೆ ಇದು ಕರಾಳ ದಿನವಾಗಿದೆ. ದ್ವೇಷ ಭಾಷಣ ಕಾನೂನಿನಡಿ ಜೈಲಿಗೆ ಹಾಕುತ್ತೇನೆ ಎಂದು ಹೆದರಿಸಿದ್ದಾರೆ. ಎಸ್ಸಿಎಸ್ಪಿ/ಟಿಎಸ್ಪಿ ಹಣ ದುರುಪಯೋಗ ಮಾಡಲ್ಲ ಎಂದು ಎಲ್ಲೂ ಹೇಳಿಲ್ಲ. ಈ ಮೂಲಕ ಪರಿಶಿಷ್ಟರ ಹಣವನ್ನು ಮತ್ತೆ ಲೂಟಿ ಮಾಡಿದ್ದಾರೆ. ಈ ಹಿಂದೆ ನೋಂದಣಿಗೆ ಬಡವರಿಗೆ 5% ರಷ್ಟು ರಿಯಾಯಿತಿ ನೀಡಲಾಗುತ್ತಿತ್ತು. ಈಗ ಅದು ಕೂಡ ಇಲ್ಲ ಎಂದರು.
ಜಿಡಿಪಿ ಪ್ರಗತಿ ಕಡಿಮೆಯಾಗುತ್ತಿದೆ. ವಿತ್ತೀಯ ಕೊರತೆಯನ್ನು 3% ಒಳಗೆ ಇಟ್ಟಿದ್ದೇವೆ ಎಂದು ಹೇಳಿದ್ದರೂ, ಅದನ್ನು ಈಗಾಗಲೇ ಮೀರಿದ್ದಾರೆ. ಹಣದ ಕೊರತೆ ಬಂದಾಗ ಬಾಂಡ್ಗಳನ್ನು ತರುತ್ತಾರೆ. ಹೀಗೆಯೇ ಬೆಂಗಳೂರಿನ ಅಭಿವೃದ್ಧಿಗೆ ಬಾಂಡ್ಗಳನ್ನು ತಂದಿದ್ದಾರೆ. ಸರ್ಕಾರ ದಿವಾಳಿಯಾಗಿದೆ ಎಂದು ಇದರಿಂದಲೇ ಗೊತ್ತಾಗುತ್ತದೆ. ಈ ಬಾರಿ 22,957 ಕೋಟಿ ರೂ. ಕೊರತೆ ಇದೆ. 2023 ರಲ್ಲಿ ಸಿದ್ದರಾಮಯ್ಯ 85,218 ಕೋಟಿ ರೂ., 2024 ರಲ್ಲಿ 1.05 ಲಕ್ಷ ಕೋಟಿ ರೂ. ಸಾಲ, 2025 ರಲ್ಲಿ 1.16 ಲಕ್ಷ ಕೋಟಿ ರೂ. ಹಾಗೂ ಈ ಬಾರಿ 1,32,190 ಕೋಟಿ ರೂ. ಸಾಲ ಮಾಡಿದ್ದಾರೆ ಎಂದರು.
ಸರ್ಕಾರಿ ಉದ್ಯೋಗಕ್ಕಾಗಿ ಯುವಜನರು ಹೋರಾಟ ಮಾಡಿದ್ದಾರೆ. ಕಲ್ಯಾಣ ಕರ್ನಾಟಕಕ್ಕೆ ಯಾವುದೇ ವಿಶೇಷ ಅನುದಾನ, ಗ್ರಾಮೀಣ ರಸ್ತೆಗಳಿಗೆ ಅನುದಾನ ನೀಡಿಲ್ಲ. ಹಾಲಿಗೆ 7 ರೂ. ಪ್ರೋತ್ಸಾಹಧನ ನೀಡಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಗೃಹಲಕ್ಷ್ಮಿಯಲ್ಲಿ ನುಂಗಿದ 5,000 ಕೋಟಿ ರೂ. ಇನ್ನೂ ಯಕ್ಷಪ್ರಶ್ನೆಯಾಗಿದೆ. ಈ ಬಾರಿಯೂ ಒಂದೊಂದೇ ತೆರಿಗೆಗಳನ್ನು ಆರಂಭಿಸುತ್ತಾರೆ. ಆದಾಯ ಬಂದಿದೆ ಎಂದು ನಾಟಕ ಮಾಡಿದ್ದಾರೆ. ವಾಸ್ತವದಲ್ಲಿ ಅಷ್ಟೊಂದು ಹಣ ಬಂದಿಲ್ಲ. ಇಲಾಖೆಗಳಿಗೂ ಹಣ ಬಿಡುಗಡೆಯಾಗಿಲ್ಲ. ಆದ್ದರಿಂದ ಖಾಲಿ ಚೊಂಬು ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಸರ್ವರಿಗೂ ಸಾಲ
“ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು” ಕೊಡುತ್ತೇವೆ ಎಂದು ಬೊಗಳೆ ಬಿಟ್ಟು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರ ಸರ್ಕಾರ ಇಂದು ಕರ್ನಾಟಕದಲ್ಲಿ “ಸರ್ವರಿಗೂ ತೆರಿಗೆ, ಸರ್ವರಿಗೂ ಸಾಲ” ಎಂಬ ಸ್ಥಿತಿ ನಿರ್ಮಿಸಿದೆ. ಜನರ ಕೆಂಗಣ್ಣಿಗೆ ಗುರಿಯಾಗಿ ಮುಜುಗರಕ್ಕೀಡಾಗುವ ಪರಿಸ್ಥಿತಿ ಬಂದಾಗಲೆಲ್ಲ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿ ಜನರನ್ನು ದಿಕ್ಕು ತಪ್ಪಿಸುವ ಚಳಿಯನ್ನು ಬಜೆಟ್ನಲ್ಲಿಯೂ ಮುಂದುವರೆಸಿರುವ ಸಿದ್ದರಾಮಯ್ಯನವರು ಬಜೆಟ್ ಭಾಷಣದಲ್ಲೂ ಅದೇ ಚಾಳಿ ಪ್ರದರ್ಶನ ಮಾಡಿದ್ದಾರೆ. ರಾಜ್ಯದ ಆರ್ಥಿಕ ಭವಿಷ್ಯಕ್ಕೆ ಸ್ಪಷ್ಟ ದಿಕ್ಕು ನೀಡಬೇಕಾದ ಬಜೆಟ್ನಲ್ಲಿ ವಾಸ್ತವ ಸ್ಥಿತಿಗತಿಗಳನ್ನು ಪ್ರಾಮಾಣಿಕವಾಗಿ ಹೇಳುವ ಬದಲು ಕಟ್ಟು ಕಥೆಗಳನ್ನು ಹೇಳುತ್ತಾ ಕಾಲಹರಣ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರದ ಸಾಲದ ಪ್ರಮಾಣವೇ ಅದರ ಆರ್ಥಿಕ ನಿರ್ವಹಣೆಯ ನಿಜ ಮುಖವನ್ನು ಬಯಲಿಗೆಳೆಯುತ್ತದೆ. 2023–24ರಲ್ಲಿ ಸುಮಾರು ₹82,000 ಕೋಟಿ, 2024–25ರಲ್ಲಿ ₹1.05 ಲಕ್ಷ ಕೋಟಿ, 2025–26ರಲ್ಲಿ ₹1.16 ಲಕ್ಷ ಕೋಟಿ, ಮತ್ತು ಈಗ 2026–27ರ ಬಜೆಟ್ ಅಂದಾಜಿನಲ್ಲಿ ₹1.32 ಲಕ್ಷ ಕೋಟಿ ಸಾಲ ಮಾಡಲು ಯೋಜನೆ ರೂಪಿಸಲಾಗಿದೆ. ಅಂದರೆ ಕೇವಲ ನಾಲ್ಕು ವರ್ಷಗಳಲ್ಲಿ ಈ ಸರ್ಕಾರವು ಸುಮಾರು ₹4.4 ಲಕ್ಷ ಕೋಟಿ ಹೊಸ ಸಾಲ ಮಾಡುವ ಪರಿಸ್ಥಿತಿ ಉಂಟುಮಾಡಿದೆ. ಇದು ಅಭಿವೃದ್ಧಿಗಾಗಿ ಮಾಡಿದ ಸಾಲವೇ? ಅಥವಾ ಚುನಾವಣಾ ಗ್ಯಾರಂಟಿಗಳಿಗಾಗಿ ರಾಜ್ಯದ ಭವಿಷ್ಯವನ್ನು ಗಿರವಿ ಇಟ್ಟ ಸಾಲವೇ ಎಂಬ ಪ್ರಶ್ನೆ ಇಂದು ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನಲ್ಲಿ ಮೂಡಿದೆ ಎಂದು ಅವರು ಹೇಳಿದರು.
ರಾಜ್ಯದ ಹಣಕಾಸಿನ ವಾಸ್ತವ ಸ್ಥಿತಿ ಇನ್ನಷ್ಟು ಆತಂಕಕಾರಿಯಾಗಿದೆ. 2026–27ರಲ್ಲಿ ಕರ್ನಾಟಕದ ಒಟ್ಟು ರಾಜಸ್ವ ಆದಾಯ ಸುಮಾರು ₹3.15 ಲಕ್ಷ ಕೋಟಿ ಆಗಿದ್ದರೆ, ಕೇವಲ ಸಂಬಳ, ಪಿಂಚಣಿ ಮತ್ತು ಬಡ್ಡಿ ಪಾವತಿಗೆ ಹೋಗುತ್ತಿರುವ ಮೊತ್ತವೇ ಸುಮಾರು ₹2.77 ಲಕ್ಷ ಕೋಟಿ. ಅಂದರೆ ರಾಜ್ಯದ ಆದಾಯದ ಸುಮಾರು 88% ಕೇವಲ ಕಮಿಟೆಡ್ ವೆಚ್ಚಗಳಿಗೆ ಹೋಗುತ್ತಿದೆ. ಇದರ ಪರಿಣಾಮವಾಗಿ ಈ ವರ್ಷ ರಾಜಸ್ವ ಕೊರತೆ ₹22,957 ಕೋಟಿ, ಮತ್ತು ವಿತ್ತೀಯ ಕೊರತೆ ಸುಮಾರು ₹1,09,998 ಕೋಟಿ ತಲುಪಿದೆ. ಅಭಿವೃದ್ಧಿ ಯೋಜನೆಗಳಿಗೆ ಹಣ ಮೀಸಲಿಡುವ ಬದಲು ಸಾಲದ ಬಲೆಗೆ ರಾಜ್ಯವನ್ನು ತಳ್ಳುತ್ತಿರುವುದು ಈ ಬಜೆಟ್ನ ಕಹಿ ಸತ್ಯ ಎಂದು ಅವರು ದೂರಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ ಹಣಕಾಸಿನ ಶಿಸ್ತನ್ನು ಕಟ್ಟುನಿಟ್ಟಾಗಿ ಕಾಪಾಡಲಾಗಿತ್ತು. ರಾಜ್ಯದ ಸಾಲವು ಜಿಎಸ್ಡಿಪಿಯ 25% ಒಳಗೆ ಇತ್ತು, ಫಿಸ್ಕಲ್ ಡೆಫಿಸಿಟ್ 3% ಒಳಗೆ ಇತ್ತು ಮತ್ತು ಹಲವಾರು ವರ್ಷಗಳಲ್ಲಿ ರಾಜಸ್ವ ಉಳಿಕೆ ಕೂಡ ಇತ್ತು. ಆದರೆ ಇಂದು ಸ್ಥಿತಿ ಸಂಪೂರ್ಣ ಬದಲಾಗಿದೆ. ಸಾಲ ಮಾಡಿ ಸಂಬಳ ಕೊಡುವ ಮಟ್ಟಕ್ಕೆ ರಾಜ್ಯವನ್ನು ತಳ್ಳಿರುವುದು ಈ ಕಾಂಗ್ರೆಸ್ ಸರ್ಕಾರದ ಆರ್ಥಿಕ ದುರಾಡಳಿತದ ಸ್ಪಷ್ಟ ಉದಾಹರಣೆ. ಅಭಿವೃದ್ಧಿಯ ಬದಲು ಸಾಲ, ಆರ್ಥಿಕ ಶಿಸ್ತಿನ ಬದಲು ಅರಾಜಕತೆ, ದೂರದೃಷ್ಟಿಯ ಬದಲು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವ ಕ್ಷುಲ್ಲಕ ರಾಜಕೀಯ ಎಂದು ಅವರು ಹೇಳಿದ್ದಾರೆ.
ಸಾಗರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಚುರುಕು; 6,000 ಮತದಾರರ ಹೆಸರು ಕೈಬಿಡಲು ಕ್ರಮ








